ವಾರಣಾಸಿ: ರಾಹುಲ್ ಭರ್ಜರಿ ರೋಡ್ ಶೋ
ವಾರಣಾಸಿ, ಮೇ.10: ಲೋಕಸಭಾ ಚುನಾವಣೆಯ 9ನೇ ಹಂತದ ಪ್ರಚಾರದ ಕೊನೆ ಗಳಿಗೆಯಲ್ಲಿ ರಾಜಕೀಯ ನಾಯಕರ ಬಿರುಸಿನ ಪ್ರಚಾರದ ಭರಾಟೆ, ರೋಡ್ ಶೋಗಳಿಗೆ ಕಾಶಿ ಕ್ಷೇತ್ರ ಸಾಕ್ಷಿಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ಪರ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭರ್ಜರಿ ಚುನಾವಣಾ ಪ್ರಚಾರ ಮೆರವಣಿಗೆ ನಡೆಸಿದ್ದಾರೆ.
ಗುರುವಾರ ಅರವಿಂದ್ ಕೇಜ್ರಿವಾಲ್ ರೋಡ್ ಶೋ ಕಂಡಿದ್ದ ವಾರಣಾಸಿ ಇಂದು ರಾಹುಲ್ ಗಾಂಧಿ ಬಹಿರಂಗ ಪ್ರಚಾರದ ವೈಖರಿಗೆ ಬೆರಗಾಯಿತು. ವಾರಣಾಸಿ ಕ್ಷೇತ್ರದ ವಿಶೇಷವೆಂದರೆ ಇಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕಣದಲ್ಲಿದ್ದರೆ, ಕಾಂಗ್ರೆಸ್ ನ ಪ್ರಭಾವಿ ನಾಯಕ ಅಜಯ್ ರಾಯ್ ಅಖಾಡದಲ್ಲಿದ್ದಾರೆ. ಇಬ್ಬರಿಗೂ ತೀವ್ರ ಪೈಪೋಟಿ ನೀಡಲು ಅರವಿಂದ್ ಕೇಜ್ರಿವಾಲ್ ಸನ್ನದ್ಧರಾಗಿದ್ದಾರೆ. ಮೇ.12ರಂದು ಇಲ್ಲಿ ಮತದಾನ ನಡೆಯಲಿದೆ.[ಚಿತ್ರಗಳಲ್ಲಿ: ಮಹಾ ಸಮರ ಅಂತಿಮ ಚರಣ]
ಇನ್ನೊಂದೆಡೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ 43 ವರ್ಷದ ಅಜಯ್ ರಾಯ್ ಕಾಶಿ ಕ್ಷೇತ್ರದಲ್ಲಿನ ಮುಸ್ಲಿಂ ಸಮುದಾಯದವರೇ ಪ್ರಬಲವಾಗಿರುವ ಗೋಲ್ ಗಡ್ಡ ಪ್ರದೇಶದಲ್ಲಿ ಮತದಾರರ ಮನವೊಲಿಕೆಗೆ ಮುಂದಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಚಾರದ ರೋಡ್ ಶೋದಲ್ಲಿದ್ದಷ್ಟೆ ಸಂಖ್ಯೆಯ ಜನ ಇಂದು ರಾಹುಲ್ ಗಾಂಧಿ ಶೋದಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ.
ಅರವಿಂದ್ ಕೇಜ್ರಿವಾಲ್ ಇಲ್ಲಿ ಕಳೆದ ಒಂದು ತಿಂಗಳಿಂದಲೂ ವ್ಯಾಪಕ ಪ್ರಚಾರದಲ್ಲಿ ತೊಡಗಿದ್ದಾರೆ. ವಿಶೇಷವೆಂದರೆ ಇಂದು ಸಂಜೆ 6 ಗಂಟೆಗೆ ಅಬ್ಬರದ ಈ ಬಹಿರಂಗ ಪ್ರಚಾರ ಕೊನೆಗೊಂಡಿತೆಂದರೆ ಮತ್ತೆ ಇಂಥ ದೃಶ್ಯ 2019ರಲ್ಲಷ್ಟೇ ಇಲ್ಲಿನ ಮತದಾರರಿಗೆ ಲಭ್ಯ. ರಾಹುಲ್ ಗಾಂಧಿ ರೋಡ್ ಶೋ ಬಗ್ಗೆ ಕಾಂಗ್ರೆಸ್ ನಾಯಕರ ಹೇಳಿಕೆ, ರೋಡ್ ಶೋ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ...

ರಾಹುಲ್ ಮಹಿಳೆಯರ ಅಚ್ಚುಮೆಚ್ಚಿನ ನಾಯಕ
* ರಾಹುಲ್ ಗಾಂಧಿ ಮಹಿಳೆಯರ ಅಚ್ಚುಮೆಚ್ಚಿನ ನಾಯಕರಾಗಿದ್ದಾರೆ. ಅಲ್ಪಸಂಖ್ಯಾತರ ನಿಜವಾದ ಹೀರೋ ಎಂದು ಕಾಂಗ್ರೆಸ್ ನಾಯಕಿ ಶೋಭಾ ಓಜಾ ಹೇಳಿಕೆ.
* ರಾಹುಲ್ ಗಾಂಧಿ ಪರ ಇಲ್ಲಿ ನೆರೆದಿರುವ ಜನರನ್ನು ನೋಡಿದರೆ ಸಾಕು ಮತದಾರ ಯಾರ ಪರ ಇದ್ದಾನೆ ಎಂಬುದು ಸ್ಪಷ್ಟವಾಗುತ್ತದೆ. ನಮ್ಮಂಥ ಸ್ಟಾರ್ ಗಳಿಗಿಂತ ರಾಹುಲ್ ಗಾಂಧಿಗಾಗಿ ಜನ ಸೇರಿದ್ದಾರೆ ಎಂದು ನಟಿ ಕಮ್ ಕಾಂಗ್ರೆಸ್ ಅಭ್ಯರ್ಥಿ ನಗ್ಮಾ ಹೇಳಿಕೆ

ರೋಡ್ ಶೋ ಮೂಲಕ ಕಾಂಗ್ರೆಸ್ ಬಲ ಪ್ರದರ್ಶನ
ಶನಿವಾರ (ಮೇ.10) ವಾರಣಾಸಿಗೆ ಆಗಮಿಸಿದ ರಾಹುಲ್ ಗಾಂಧಿ ಅವರು ಗೋಲ್ ಜಡ್ಡಾ ಚೌರಾಹಾ ಪ್ರದೇಶದಿಂದ ಲಂಕಾ ಪ್ರದೇಶದವರೆಗೆ ರೋಡ್ ಶೋ ನಡೆಸಿ ಕಾಂಗ್ರೆಸ್ ಬಲ ಪ್ರದರ್ಶನ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ರಾಹುಲ್ ಗೆ ಸಾಥ್ ನೀಡಿದ್ದಾರೆ. ರೋಡ್ ಶೋನಲ್ಲಿ ಲಕ್ಷಾಂತರ ಮಂದಿ ಪಾಲ್ಗೊಂಡಿದ್ದರು.

ದೆಹಲಿಯಿಂದ ಜನ ಕರೆ ತಂದಿಲ್ಲ : ರಾಜ್ ಬಬ್ಬರ್
ಕಾಂಗ್ರೆಸ್ ನಾಯಕ ರಾಜ್ ಬಬ್ಬರ್, ರಾಹುಲ್ ರೋಡ್ ಶೋನಲ್ಲಿ ಸ್ವಯಂ ಪ್ರೇರಿತರಾಗಿ ಸ್ಥಳೀಯ ಜನರು ಭಾಗವಹಿಸಿದ್ದು, ಯಾರನ್ನು ಗುಜರಾತ್, ಮಧ್ಯಪ್ರದೇಶ ಹಾಗೂ ದೆಹಲಿಯಿಂದ ಕರೆ ತಂದವರಲ್ಲ ಎಂದಿದ್ದಾರೆ.

ಶನಿವಾರ ಸಂಜೆ ಆರು ಗಂಟೆಗೆ ಪ್ರಚಾರ ಅಂತ್ಯ
ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕಾವೇರಿಸಿರುವ ಉತ್ತರಪ್ರದೇಶದ ವಾರಣಾಸಿ ಕ್ಷೇತ್ರದಲ್ಲಿ ಶನಿವಾರ ಸಂಜೆ ಆರು ಗಂಟೆಗೆ ಪ್ರಚಾರ ಅಂತ್ಯಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ವಿವಿಧ ಕಸರತ್ತು ನಡೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಸಮಾವೇಶಕ್ಕೆ ಜನಸಾಗರವೇ ಹರಿದುಬಂದಿದೆ.

ವಾರಣಾಸಿಯಲ್ಲಿ ರೋಡ್ ಶೋ ಸರಣಿ
ನಿನ್ನೆ ಅರವಿಂದ್ ಕೇಜ್ರಿವಾಲ್ ರೋಡ್ ಶೋ ನಡೆಸಿದ್ದರು. ರಾಹುಲ್ ಗಾಂಧಿ ಇಂದು ರೋಡ್ ಶೋ ನಡೆಸಿದ್ದಾರೆ. ನಂತರ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರೂ ಕೂಡ ಸಮಾವೇಶ ನಡೆಸುತ್ತಿದ್ದು ಸಮಾಜವಾದಿ ಪಕ್ಷಕ್ಕೆ ಬೆಂಬಲಿಸುವಂತೆ ಕರೆ ನೀಡಿದ್ದಾರೆ. ಮೋದಿ ಅವರು ಐದು ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಮದನ್ ಮೋಹನ್ ಮಾಳವೀಯಗೆ ನಮನ
ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಸ್ವಾತಂತ್ರ್ಯ ಹೋರಾಟಗಾರ ಮದನ್ ಮೋಹನ್ ಮಾಳವೀಯ ಅವರ ಪುತ್ಥಳಿಗೆ ಹಾರ ಹಾಕಿ ಗೌರವಿಸಿದ ರಾಹುಲ್ ಭರ್ಜರಿ ಪ್ರಚಾರ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಮದನ್ ಮೋಹನ್ ಮಾಳವೀಯ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಸಂಸ್ಥಾಪಕರೂ ಆಗಿದ್ದು, ಇವರ ಸಾಧನೆಯೆಡೆಗೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಯುಪಿಎ ಸರ್ಕಾರ ಪ್ರತ್ಯೇಕ ಅಧ್ಯಯನ ಕೇಂದ್ರವನ್ನೇ ಆರಂಭಿಸಿದೆ. (ಚಿತ್ರ:ಎಎನ್ ಐ ಟ್ವೀಟ್)
ಮೇ 16 ರಂದು ಫಲಿತಾಂಶ
ವಾರಣಾಸಿ ಕ್ಷೇತ್ರದ ಪ್ರಮುಖ ಅಭ್ಯರ್ಥಿಗಳಾದ ಮೋದಿ, ಕೇಜ್ರಿವಾಲ್, ಅಜಯ್ ರಾಯ್ ನಡುವೆ ಒಬ್ಬರಿಗಿಂತ ಮತ್ತೊಬ್ಬರು ಎನ್ನುವಂತೆ ತೋರಿಕೆಯ ಜನಬೆಂಬಲ ಎದ್ದುಕಾಣುತ್ತಿದ್ದು ಸ್ಪಷ್ಟ ಚಿತ್ರಣ ಮೇ 16 ರಂದು ಹೊರಬರುವ ಚುನಾವಣಾ ಫಲಿತಾಂಶದಿಂದ ಗೊತ್ತಾಗಲಿದೆ.
|
ರಾಹುಲ್ ರೋಡ್ ಶೋ ಗೆ ಮಾಧ್ಯಮ ಪ್ರಚಾರ
ರಾಹುಲ್ ಗಾಂಧಿ ರೋಡ್ ಶೋ ಗೆ ವ್ಯಾಪಕ ಮಾಧ್ಯಮ ಪ್ರಚಾರ ಸಿಕ್ಕಿದ್ದು, ವಿವಿಧ ಸಂಸ್ಥೆಗಳು, ಸಾರ್ವಜನಿಕರು, ಕಾಂಗ್ರೆಸ್ ಯುವ ಕಾರ್ಯಕರ್ತರು ರೋಡ್ ಶೋ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ.












Click it and Unblock the Notifications