Vande Bharat Express: ವಿಶ್ವದ ಪ್ರಥಮ ಸೆಮಿ ಹೈ ಸ್ಪೀಡ್ ರೈಲಿಗೆ ಇಂದು ಪ್ರಧಾನಿ ಮೋದಿ ಚಾಲನೆ, ಎಲ್ಲಿಂದ ಎಲ್ಲಿಗೆ? ತಿಳಿಯಿರಿ
ಜೈಪುರ, ಏಪ್ರಿಲ್ 12: ದೇಶದಲ್ಲಿ ಕೇಂದ್ರ ಬಿಜೆಪಿ ಸರ್ಕಾರವು ವಿವಿಧ ರಾಜ್ಯಗಳಲ್ಲಿ ಹಾಗೂ ಪ್ರಮುಖ ನಗರಗಳ ಮಧ್ಯೆ ಅತೀ ವೇಗದ 'ವಂದೇ ಭಾರತ್ ಎಕ್ಸ್ಪ್ರೆಸ್' ರೈಲುಗಳನ್ನು ವಿಸ್ತರಣೆ ಮಾಡಿದೆ. ಅದೇ ರೀತಿ ರಾಜಸ್ಥಾನ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹೊಸದಾಗಿ ವಂದೇ ಭಾರತ್ ರೈಲು ಇಂದಿನಿಂದ (ಏಪ್ರಿಲ್ 12) ಕಾರ್ಯಾರಂಭಗೊಳ್ಳಲಿದೆ.
ಜನರಿಗೆ ಸುರಕ್ಷಿತ, ಉತ್ತಮ ಮೂಲ ಸೌಲಭ್ಯದ ವೇಗದ ರೈಲು ಸೇವೆ ನೀಡುವ ಉದ್ದೇಶದಿಂದ ರಾಜ್ಯಸ್ಥಾನದಲ್ಲಿ ಮೊದಲನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಚಾಲನೆ ನೀಡಲಿದ್ದಾರೆ. ರಾಜಸ್ಥಾನದಲ್ಲಿ ಇಂದು ಲೋಕಾರ್ಪಣೆಗೊಳ್ಳುತ್ತಿರುವ ರೈಲು ವಿಶ್ವದ ಮೊದಲ 'ಸೆಮಿ ಹೈ ಸ್ಪೀಡ್' ರೈಲು ಆಗಿದೆ.

ಈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ರಾಷ್ಟ್ರ ರಾಜಧಾನಿ ದೆಹಲಿಯ ಕಂಟೋನ್ಮೆಂಟ್ ಮತ್ತು ಅಜ್ಮೀರ್ ಮಧ್ಯೆ ಪ್ರಯಾಣಿಕರಿಗೆ ಸಂಚಾರ ಸೇವೆ ನೀಡಲಿದೆ. ವೇಳಾಪಟ್ಟಿಯ ಪ್ರಕಾರ, ಈ ಎರಡು ನಗರಗಳ ಮಧ್ಯೆದ ಅಂತರವನ್ನು ಈ ರೈಲು ಕೇವಲ 5 ಗಂಟೆ 15 ನಿಮಿಷಗಳಲ್ಲಿ ಕ್ರಮಿಸಲಿದೆ ಎಂದು ಎಎನ್ಐ ವರದಿ ಮಾಡಿದೆ.
ದೆಹಲಿಯ ಕಂಟೋನ್ಮೆಂಟ್ ಮತ್ತು ಅಜ್ಮೀರ್ ಮಧ್ಯೆದ ಅದೇ ಮಾರ್ಗದಲ್ಲಿ ಪ್ರಸ್ತುತ ವೇಗದ ರೈಲು ಶತಾಬ್ದಿ ಎಕ್ಸ್ಪ್ರೆಸ್ ರೈಲು 6 ಗಂಟೆ 15 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎನ್ನಲಾಗಿದೆ. ಈ ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ಅದೇ ಮಾರ್ಗದಲ್ಲಿ ಪ್ರಸ್ತುತ ಹಾಲಿ ರೈಲಿನ ವೇಗಕ್ಕಿಂತ 60 ನಿಮಿಷಗಳಷ್ಟು ಹೆಚ್ಚು ವೇಗ ಹೊಂದಿದೆ.
ಒಟ್ಟಾರೆ ನೋಡುವುದಾದರೆ ರಾಜಸ್ಥಾನದ ಮೊದಲ ಈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಅಜ್ಮೀರ್-ದೆಹಲಿ ಕ್ಯಾಂಟ್ ವಂದೇ ಭಾರತ್ ಎಕ್ಸ್ಪ್ರೆಸ್ ವಿಶ್ವದ ಮೊದಲ ಅರೆ-ಹೈ-ಸ್ಪೀಡ್ ಪ್ಯಾಸೆಂಜರ್ ರೈಲು ಸಹ ಆಗಿದೆ.

ಪ್ರವಾಸಿ ತಾಣಗಳಿಗೆ ಆರ್ಥಿಕ ಉತ್ತೇಜನ
ರಾಜಸ್ಥಾನದ ಮೊದಲ ವಂದೇ ಭಾರತ್ ಎಕ್ಸಪ್ರೆಸ್ ರೈಲು ಎರಡು ನಗರಗಳನ್ನು ಮಾತ್ರವಲ್ಲದೇ ಪ್ರಮುಖ ಪ್ರವಾಸಿ ತಾಣಗಳಿಗೂ ಸಂಪರ್ಕ ಸಾಧ್ಯವಾಗಿತ್ತದೆ. ಪುಷ್ಕರ್ ಮತ್ತು ಅಜ್ಮೀರ್ ಷರೀಫ್ ದರ್ಗಾ ಸೇರಿದಂತೆ ಮುಂತಾದೆಡೆ ವರ್ಷವಿಡೀ ತೆರಳುವ ಸುತ್ತಮುತ್ತಲಿನ ಭಾಗದ ಲಕ್ಷಾಂತರ ಪ್ರವಾಸಿಗರಿಗೆ ಅತ್ಯಧಿಕ ಆಕರ್ಷಣಿಯವಾಗಿದೆ. ಸರ್ಕಾರ ಮತ್ತು ರೈಲ್ವೆ ಇಲಾಖೆಯ ಈ ಅಭಿವೃದ್ಧಿ ಯೋಜನೆಯಿಂದ ಪ್ರವಾಸಿ ತಾಣಗಳ ಸುತ್ತಲಿನ ಪ್ರದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ.
ವಿವಿಧೆಡೆ ವಂದೇ ಭಾರತ್ ರೈಲಿಗೆ ಮೋದಿ ಚಾಲನೆ: ವಿವರ
ಪ್ರಧಾನಿ ನರೇಂದ್ರ ಮೋದಿ ಅವರು ಇದೇ ತಿಂಗಳ ಏಪ್ರಿಲ್ 8 ರಂದು ಚೆನ್ನೈ-ಕೊಯಮತ್ತೂರು ಮಾರ್ಗದ ಮಧ್ಯೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಮೊದಲ ಚಾಲನೆಗೆ ಹಸಿರು ನಿಶಾನೆ ತೋರಿಸಿದ್ದರು. ಅದೇ ದನ ನೆರೆ ರಾಜ್ಯ ತೆಲಂಗಾಣದ ಸಿಕಂದರಾಬಾದ್ ರೈಲು ನಿಲ್ದಾಣದಿಂದ ಹೊರಡುವ ಸಿಕಂದರಾಬಾದ್-ತಿರುಪತಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಕಾರ್ಯಾರಂಭಕ್ಕೂ ಅವರು ಚಾಲನೆ ನೀಡಿದ್ದರು. ಈ ಸಿಕಂದರಾಬಾದ್-ತಿರುಪತಿ ವಂದೇ ಭಾರತ್ ಎಕ್ಸ್ಪ್ರೆಸ್ ಸೆಮಿ-ಹೈ-ಸ್ಪೀಡ್ ವರ್ಗದ ಎರಡನೇ ರೈಲು ಎನ್ನಲಾಗುತ್ತಿದೆ.
ಇನ್ನೂ ಇದೇ ವರ್ಷ ಕಳೆದ ಜನವರಿ ತಿಂಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಿಕಂದರಾಬಾದ್ ಮತ್ತು ವಿಶಾಖಪಟ್ಟಣಂ ಮಧ್ಯೆ ಸಾರಿಗೆ ಸೇವೆ ನೀಡುವ ಭಾರತದ ಎಂಟನೇಯ 'ವಂದೇ ಭಾರತ್ ಎಕ್ಸ್ಪ್ರೆಸ್' ರೈಲಿನ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದರು.
ವಾರದ ಬಳಿಕ ವಂದೇ ಭಾರತ್ ಸೇವೆ ಆರಂಭ
ಇದರೊಂದಿಗೆ ಅದೇ ತಿಂಗಳು ನವದೆಹಲಿ-ಭೋಪಾಲ್ ಮಧ್ಯೆದ ಮಾರ್ಗ ಜನರಿಗೆ ಅನುಕೂಲವಾಗಲೆಂದು ಆರಂಭಿಸಿದ 'ವಂದೇ ಭಾರತ್ ಎಕ್ಸ್ಪ್ರೆಸ್' ಗೆ ಪ್ರಧಾನಮಂತ್ರಿಗಳು ಫ್ಲ್ಯಾಗ್ ಆಫ್ ಮಾಡಿದ್ದರು. ಆದರೆ ಕಾರಣಾಂತರಗಳಿಂದ ಈ ಮಾರ್ಗದಲ್ಲಿ ರೈಲು ಉದ್ಘಾಟನೆಗೊಂಡು ಒಂದು ವಾರದ ಬಳಿಕ ತನ್ನ ಸೇವೆ ಆರಂಭಿಸಿತು.
ಸಿಕಂದರಾಬಾದ್-ತಿರುಪತಿ ವಂದೇ ಭಾರತ್ ಎಕ್ಸ್ಪ್ರೆಸ್ ಟ್ರೈನ್ ನಲ್ಗೊಂಡ, ಗುಂಟೂರು, ಒಂಗೋಲ್ ಹಾಗೂ ನೆಲ್ಲೂರು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ. ಈ ಮಾರ್ಗವು ನಿಲುಗಡೆ ಒಳಗೊಂಡು ಒಟ್ಟು 660 ಕಿಲೋ ಮೀಟರ್ ಉದ್ದವಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ವಂದೇ ಭಾರತ್ ಎಕ್ಸ್ಪ್ರೆಸ್ ಸ್ಥಳೀಯವಾಗಿ ತಯಾರಿಸಿದ ಸ್ವದೇಶಿ ಅರೆ-ಹೈ ಸ್ಪೀಡ್ ಮತ್ತು ಸ್ವಯಂ ಚಾಲಿತ ರೈಲಾಗಿದೆ. ಈ ರೈಲುಗಳು ಸಾಮಾನ್ಯ ರೈಲು, ಶತಾಬ್ಧಿ, ಎಕ್ಸಪ್ರೆಸ್ ರೈಲುಗಳಿಗಿಂತ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಹೊಂದಿವೆ. ಪ್ರಯಾಣಿಕರಿಗೆ ವೇಗದ ಮತ್ತು ಸುರಕ್ಷಿತ ಆರಾಮದಾಯಕ ಪ್ರಯಾಣದ ಅನುಭವ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಎಎನ್ಐ ವರದಿ ಮಾಡಿದೆ.












Click it and Unblock the Notifications