Vande Bharat Express: 6 ಮೇಕೆಗಳ ಬಲಿ ಪಡೆದ ವಂದೇ ಭಾರತ್ ರೈಲು- 4 ಕಿಟಕಿ ಒಡೆದು ಸೇಡು ತೀರಿಸಿಕೊಂಡ ಮಾಲೀಕ
ಲಖನೌ, ಜುಲೈ 11: ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ಮೇಲೆ ಕಲ್ಲೆಸೆಯುವ ಘಟನೆಗಳು ಹಲವು ರಾಜ್ಯಗಳಲ್ಲಿ ನಡೆಯುತ್ತಲೇ ಇವೆ. ಇದು ರೈಲ್ವೆ ಸಿಬ್ಬಂದಿಗೆ ತಲೆನೋವಿನ ಕೆಲಸವಾಗಿ ಮಾರ್ಪಟ್ಟಿದೆ. ಇದಲ್ಲದೇ, ವಂದೇ ಭಾರತ್ ರೈಲುಗಳು ಜಾನುವಾರಗಳ ಜೀವಗಳನ್ನು ಬಲಿ ತೆಗೆದುಕೊಂಡಿರುವ ಪ್ರಕರಣಗಳು ನಡೆದಿವೆ. ಇಂತಹುದೇ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮುನ್ನು ಪಾಸ್ವಾನ್ ಎಂಬುವವರ ಆರು ಮೇಕೆಗಳು ವಂದೇ ಭಾರತ್ ರೈಲಿಗೆ ಬಲಿಯಾಗಿವೆ. ಪಾಸ್ವಾನ್ ಅವರ ಕುಟುಂಬ ಮೇಕೆಗಳ ಮೇಲೆಯೇ ಅವಲಂಬಿತವಾಗಿದೆ. ತಮ್ಮ ಮೇಕೆಗಳನ್ನು ಬಲಿ ಪಡೆದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಮೇಲೆ ಸೇಡು ತೀರಿಸಿಕೊಳ್ಳಲು ಪಾಸ್ವಾನ್ ಹಾಗೂ ಅವರ ಕುಟುಂಬದ ಸದಸ್ಯರು ನಿರ್ಧರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಅವರು ಎರಡು ದಿನಗಳ ಹಿಂದೆ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿ ಕಿಟಿಕಿ ಗಾಜುಗಳನ್ನು ಪುಡಿಪುಡಿಗೊಳಿಸಿದ್ದಾರೆ. ಈ ಘಟನೆಯಲ್ಲಿ ವಂದೇ ಭಾರತ್ ರೈಲಿನ ನಾಲ್ಕು ಕಿಟಕಿಗಳು ಜಖಂಗೊಂಡಿವೆ.
ಮಂಗಳವಾರ ಬೆಳಗ್ಗೆ 8:40 ರ ಸುಮಾರಿಗೆ ಯುಪಿಯ ಅಯೋಧ್ಯೆ ಕ್ಯಾಂಟ್ ಜಂಕ್ಷನ್ನಿಂದ ಸುಮಾರು 15 ಕಿಮೀ ದೂರದಲ್ಲಿರುವ ಸೊಹಾವಾಲ್ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಮುನ್ನು ಪಾಸ್ವಾನ್, ಅಜಯ್ ಮತ್ತು ವಿಜಯ್ ಸೇರಿದಂತೆ ತನ್ನ ಇಬ್ಬರು ಪುತ್ರರೊಂದಿಗೆ ವಂದೇ ಭಾರತ್ ಎಕ್ಸ್ಪ್ರೆಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

C1 ( ಆಸನಗಳು 33,34 ), C3 ( ಆಸನಗಳು 20,21,22 ), C5 ( ಆಸನಗಳು 10,11,12 ) ಮತ್ತು E1 ( 35,36 ಆಸನಗಳು ) ಕೋಚ್ಗಳ ನಾಲ್ಕು ಕಿಟಕಿಗಳನ್ನು ಒಡೆದು ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಜುಲೈ 9 ರಂದು, ಹಳಿಯ ಸುತ್ತಲೂ ಮೇಯುತ್ತಿದ್ದಾಗ ಆರು ಮೇಕೆಗಳಿಗೆ ಡಿಕ್ಕಿ ಹೊಡೆದ ವಂದೇ ಭಾರತ್ ರೈಲು ಅವುಗಳ ಜೀವವನ್ನು ಬಲಿ ಪಡೆದುಕೊಂಡಿದೆ.

ಅಯೋಧ್ಯೆಯ ಹಿರಿಯ ಪೊಲೀಸ್ ಅಧೀಕ್ಷಕ ರಾಜ್ ಕರಣ್ ನಯ್ಯರ್ ಪ್ರಕಾರ, 'ಆಡುಗಳ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು, ಮುನ್ನು ಪಾಸ್ವಾನ್ ಮತ್ತು ಅವರ ಇಬ್ಬರು ಪುತ್ರರು ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ಕಲ್ಲು ತೂರಾಟ ನಡೆಸಿದ್ದಾರೆ' ಎಂದು ಹೇಳಿದ್ದಾರೆ.
'ಆರೋಪಿಗಳ ಹೆಚ್ಚಿನ ವಿಚಾರಣೆ ನಡೆಯುತ್ತಿದೆ' ಎಂದು ನಯ್ಯರ್ ಅವರು ಬಿಡುಗಡೆ ಮಾಡಿದ ವಿಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications