Odisha Train Accident: ಬಾಲಸೋರ್ ಮೂಲಕ ಹಾದುಹೋದ ವಂದೇ ಭಾರತ್ ಎಕ್ಸ್ಪ್ರೆಸ್
ಒಡಿಶಾದ ಬಾಲಸೋರ್ ನಲ್ಲಿ ನಡೆದ ಭೀಕರ ರೈಲು ಅಪಘಾತದ ನಂತರ ಎರಡು ದಿನಗಳಲ್ಲಿ ಹಳಿಯನ್ನು ಸರಿಪಡಿಸಲಾಗಿದ್ದು, ಅಪಘಾತದ ಬಳಿಕ ಮೊದಲ ಬಾರಿಗೆ ಹೌರಾ-ಪುರಿ ವಂದೇ ಭಾರತ್ ಎಕ್ಸ್ಪ್ರೆಸ್ ಸೋಮವಾರ ಬೆಳಿಗ್ಗೆ ಈ ಮಾರ್ಗದಲ್ಲಿ ಯಶಸ್ವಿಯಾಗಿ ಹಾದುಹೋಗಿದೆ.
ಮರುಸ್ಥಾಪಿಸಲಾದ ಹಳಿಗಳಲ್ಲಿ ಸೋಮವಾರ ಬೆಳಿಗ್ಗೆ 9.30ರ ಸುಮಾರಿಗೆ ಬಹನಾಗಾ ಬಜಾರ್ ನಿಲ್ದಾಣವನ್ನು ವಂದೇ ಭಾರತ್ ಎಕ್ಸ್ಪ್ರೆಸ್ ಯಶಸ್ವಿಯಾಗಿ ಹಾದುಹೋಗಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

"ಅಪಘಾತದ ಸ್ಥಳದಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಉಪಸ್ಥಿತರಿದ್ದು, ಸೆಮಿ ಹೈಸ್ಪೀಡ್ ರೈಲು ಹಾದುಹೋದಾಗ ಚಾಲಕರಿಗೆ ಕೈ ಬೀಸಿದರು" ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪ್ ಲೈನ್ ಮತ್ತು ಡೌನ್ ಲೈನ್ ಟ್ರ್ಯಾಕ್ಗಳ ಮರುಸ್ಥಾಪನೆ ಕಾರ್ಯವು ಭಾನುವಾರ ರಾತ್ರಿ ಪೂರ್ಣಗೊಂಡಿದೆ ಎಂದು ವೈಷ್ಣವ್ ಹೇಳಿದರು.
ಭಾನುವಾರ ರಾತ್ರಿಯಿಂದ ರೈಲುಗಳ ಸಂಚಾರ ಆರಂಭ
ಭಾನುವಾರ ರಾತ್ರಿ 10.40ರ ಸುಮಾರಿಗೆ ವೈಜಾಗ್ ಬಂದರಿನಿಂದ ರೂರ್ಕೆಲಾ ಸ್ಟೀಲ್ ಪ್ಲಾಂಟ್ಗೆ ಕಲ್ಲಿದ್ದಲು ತುಂಬಿದ ಸರಕು ಸಾಗಣೆ ರೈಲು ಯಶಸ್ವಿಯಾಗಿ ಬಹನಾಗಾ ಬಜಾರ್ ನಿಲ್ದಾಣದವನ್ನು ದಾಟಿತು. ಅಪಘಾತದ ಸ್ಥಳದಲ್ಲಿ ರೈಲುಗಳು ವೇಗವನ್ನು ಕಡಿಮೆ ಮಾಡಿ, ನಿಧಾನವಾಗಿ ಚಲಿಸುತ್ತಿವೆ.
#WATCH | Howrah - Puri Vande Bharat Express crosses from Odisha’s Balasore where the deadly #TrainAccident took place on June 2.
— ANI (@ANI) June 5, 2023
Indian Railways resumed train movement on the affected tracks within 51 hours of the accident. pic.twitter.com/myosAUgC4H
ಸದ್ಯ ಹಳಿಗಳನ್ನು ಮರುಸ್ಥಾಪನೆ ಮಾಡಿದ್ದು, ಹಳಿಗಳ ಪಕ್ಕದಲ್ಲಿ ಅಪಘಾತಕ್ಕೀಡಾದ ರೈಲುಗಳ ಅವಶೇಷಗಳು ಉಳಿದುಕೊಂಡಿದ್ದು, ಅಲ್ಲಿಂದ ಬೇರೆಡೆ ಸಾಗಿಸುವ ಕೆಲಸ ಚಾಲನೆಯಲ್ಲಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅಪಘಾತದ ಬೆಳಿಗ್ಗೆ ಸ್ಥಳಕ್ಕೆ ತೆರಳಿದ್ದು, ಸೋಮವಾರವೂ ಕೂಡ ಘಟನಾ ಸ್ಥಳದಲ್ಲಿ ಉಳಿದುಕೊಂಡು ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಭಾನುವಾರ ರಾತ್ರಿ ಅಪಘಾತದ ನಂತರ ಇಲ್ಲಿ ಮೊದಲ ರೈಲು ಚಲಿಸಿದ್ದನ್ನು ಅವರು ಟ್ವೀಟ್ ಮಾಡಿದ್ದರು.
ಜೂನ್ 2ರಂದು ನಡೆದ ಘೋರ ದುರಂತ
ಜೂನ್ 2ರಂದು ಸಂಜೆ 7 ಗಂಟೆಗೆ ಭೀಕರ ರೈಲು ದುರಂತ ಸಂಭವಿಸಿತ್ತು. ಲೂಪ್ ಟ್ಯ್ರಾಕ್ನಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಕೋರಮಂಡಲ್ ಎಕ್ಸ್ಪ್ರೆಸ್ ಡಿಕ್ಕಿ ಹೊಡೆದ ಪರಿಣಾಮ ಬೋಗಿಗಳು ಹಳಿ ತಪ್ಪಿ ಅದೇ ಸಮಯದಲ್ಲಿ ಹಾದು ಹೋಗುತ್ತಿದ್ದ ಬೆಂಗಳೂರು-ಹೌರಾ ಎಕ್ಸ್ಪ್ರೆಸ್ನ ಕೊನೆಯ ಕೆಲವು ಬೋಗಿಗಳ ಮೇಲೆ ಉರುಳಿದವು.
ಅಧಿಕಾರಿಗಳ ನಿರ್ಲಕ್ಷ್ಯ, ಸಿಗ್ನಲ್ ವೈಫಲ್ಯವೇ ಈ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿಸಲಾಗಿದೆ. ಆದರೂ ಘಟನೆ ಬಗ್ಗೆ ಸಿಬಿಐ ತನಿಖೆ ಮಾಡಬೇಕು ಎಂದು ರೈಲ್ವೆ ಇಲಾಖೆ ಒತ್ತಾಯ ಮಾಡಿದೆ. ಈ ಭೀಕರ ಅಪಘಾತದಲ್ಲಿ ಸದ್ಯ 288 ಮಂದಿ ಸಾವನ್ನಪ್ಪಿದ್ದು, 900ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.












Click it and Unblock the Notifications