ರೈತರ ಪ್ರತಿಭಟನೆ: ರಾಜ್ಯಸಭೆಯಲ್ಲಿ ತೀವ್ರ ಆಕ್ರೋಶ
ನವದೆಹಲಿ, ಫೆಬ್ರವರಿ 4: ಕೃಷಿ ಕಾಯ್ದೆಗಳ ವಿರುದ್ಧದ ರೈತರ ಪ್ರತಿಭಟನೆ ಹಾಗೂ ಅವರನ್ನು ತಡೆಯಲು ಕೇಂದ್ರ ಸರ್ಕಾರ ತೆಗೆದುಕೊಂಡ ವಿವಾದಾತ್ಮಕ ಕ್ರಮಗಳ ಕುರಿತಂತೆ ರಾಜ್ಯಸಭೆಯಲ್ಲಿ ಗುರುವಾರ ಕೂಡ ತೀವ್ರ ಗದ್ದಲ ಉಂಟಾಯಿತು.
ರೈತರ ಮನಗೆಲ್ಲಲು ಸೇತುವೆಗಳನ್ನು ನಿರ್ಮಿಸುವ ಕಟ್ಟಬೇಕಿರುವ ಸಂದರ್ಭದಲ್ಲಿ ಗುಂಡಿಗಳನ್ನು ಮತ್ತು ಕಾಲುವೆಗಳನ್ನು ತೋಡಲಾಗಿದೆ. ಮುಳ್ಳುತಂತಿಬೇಲಿಗಳನ್ನು ಅಳವಡಿಸಲಾಗಿದೆ ಮತ್ತು ಮೊಳೆಗಳನ್ನು ಜೋಡಿಸಲಾಗಿದೆ ಎಂದು ರಾಜ್ಯಸಭೆಯಲ್ಲಿ ವಿರೋಧಪಕ್ಷಗಳು ಕೇಂದ್ರ ಸರ್ಕಾರದ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಜೆಟ್ ಅಧಿವೇಶನದಲ್ಲಿ ಸಂಸತ್ತಿನ ಜಂಟಿ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿಯವರಿಗೆ ವಂದನೆ ಸಲ್ಲಿಸುವ ನಿರ್ಣಯದ ಎರಡನೆಯ ದಿನದ ಆರಂಭದಲ್ಲಿಯೇ ಗದ್ದಲ ಶುರುವಾಯಿತು. 'ಕೇಂದ್ರ ಸರ್ಕಾರವು ಆಲಿಸುವ ಸಂಯಮವನ್ನು ಕಳೆದುಕೊಂಡಿದೆ. ಯಾವುದೇ ಟೀಕೆ ಬಂದರೂ ಅದು ದೇಶ ವಿರೋಧಿ ಎಂದು ಬಿಂಬಿಸಲಾಗುತ್ತದೆ. ಒಂದು ಟ್ವೀಟ್ನಿಂದ ಪ್ರಜಾಪ್ರಭುತ್ವ ದುರ್ಬಲವಾಗುವುದಿಲ್ಲ' ಎಂದು ಆರ್ಜೆಡಿಯ ಮನೋಜ್ ಕುಮಾರ್ ಝಾ ಕಿಡಿಕಾರಿದರು. ಮುಂದೆ ಓದಿ.

ನೋವು ಅರ್ಥಮಾಡಿಕೊಳ್ಳಿ
'ಕೈಗಳನ್ನು ಮುಗಿದು ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆ. ದಯವಿಟ್ಟು ರೈತರ ನೋವನ್ನು ಅರ್ಥಮಾಡಿಕೊಳ್ಳಿ. ಈ ಕೆಟ್ಟ ಚಳಿಯಲ್ಲಿ ನೀವು ನೀರಿನ ಪೂರೈಕೆ ಹಾಗೂ ಶೌಚಾಲಯ ಸೌಲಭ್ಯವನ್ನು ನಿಲ್ಲಿಸಿದ್ದೀರಿ. ಕಾಲುವೆಗಳನ್ನು ತೋಡಿದ್ದೀರಿ. ಮುಳು ತಂತಿಗಳನ್ನು ಹಾಕಿದ್ದೀರಿ ಮತ್ತು ಮೊಳೆಗಳನ್ನು ಅಳವಡಿಸಿದ್ದೀರಿ' ಎಂದು ಮನೋಜ್ ಕುಮಾರ್ ಝಾ ಅವರು ಆಕ್ರೋಶಭರಿತರಾಗಿ ನುಡಿದರು.

303 ಸೀಟುಗಳು ಬಂದಿರುವುದು ಈ ಜನರಿಂದ
'ಇಂತಹ ಆಕ್ರಮಣಕಾರಿ ಆವೇಶವನ್ನು ಭಾರತದ ಪ್ರದೇಶದೊಳಗೆ ನುಗ್ಗುವ ನೆರೆಯ ದೇಶಗಳ ಮೇಲೆ ತೋರಿಸಿದ್ದನ್ನು ಎಂದೂ ಕೇಳಿಲ್ಲ' ಎಂದು ಲೇವಡಿ ಮಾಡಿದರು. ಸರ್ಕಾರದ ವಿರುದ್ಧ ಆಡುವ ಪ್ರತಿ ಮಾತುಗಳೂ ದೇಶ ವಿರೋಧಿಯಲ್ಲ. ನಿಮ್ಮ ಬೆನ್ನೆಲುಬು ರೈತ. ನಿಮ್ಮ 303 ಸೀಟುಗಳು ಶೈತ್ಯಾಗಾರ ಅಥವಾ ಗೋದಾಮುಗಳಿಂದ (ಖಾಸಗಿ ಕಾರ್ಪೊರೇಟ್ ಕಂಪೆನಿಗಳು) ಬಂದಿಲ್ಲ. ಆದರೆ ಈ ಜನರಿಂದ ಸಿಕ್ಕಿರುವುದು' ಎಂದರು.

ಸೂಕ್ತ ತನಿಖೆ ನಡೆಸಿ
ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒಬ್ರಿಯಾನ್, ಗಣರಾಜ್ಯೋತ್ಸವ ದಿನದಂದು ರೈತರ ಟ್ರ್ಯಾಕ್ಟರ್ ಮೆರವಣಿಗೆ ವೇಳೆ ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಯಬೇಕು. ಇದರಿಂದ ಸತ್ಯ ಹೊರಬರಬಹುದು ಎಂದು ಆಗ್ರಹಿಸಿದರು.

ಬೇರೆ ರಾಜ್ಯದಲ್ಲಿ ನಡೆದಿದ್ದರೆ?
ದೆಹಲಿಯಲ್ಲಿ ಉಂಟಾದ ರೈತನ ಸಾವಿನ ಘಟನೆಯಂತಹದ್ದು ಪಶ್ಚಿಮ ಬಂಗಾಳ ಅಥವಾ ಮಹಾರಾಷ್ಟ್ರದಲ್ಲಿ ನಡೆದಿದ್ದರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತಿತ್ತು? ಪ್ರಧಾನಿ ಮತ್ತು ಗೃಹ ಸಚಿವರು ಕಾನೂನು ಮತ್ತು ಸುವ್ಯವಸ್ಥೆಯ ಉಸ್ತುವಾರಿಗಳಾಗಿದ್ದಾರೆ. ಅವರು ಈ ಸಂದರ್ಭದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಬೇಕು ಎಂದು ಒಬ್ರಿಯಾನ್ ಆಗ್ರಹಿಸಿದರು.

ಬಿಜೆಪಿ ಕಾರ್ಯಕರ್ತರು
ಕೆಂಪುಕೋಟೆಯಲ್ಲಿ ಬಾವುಟ ಹಾರಿಸಿದ ಮತ್ತು ಹಿಂಸಾಚಾರ ನಡೆಸಿದ ಘಟನೆಗೆ ಬಿಜೆಪಿ ಹಾಗೂ ಅದರ ಕಾರ್ಯಕರ್ತರು ಹೊಣೆ. ಕೆಂಪುಕೋಟೆಗೆ ನುಗ್ಗಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದವರು ಬಿಜೆಪಿಗೆ ಸೇರಿದವರಾಗಿದ್ದಾರೆ ಎಂದು ಎಎಪಿಯ ರಾಜ್ಯಸಭೆ ಸದಸ್ಯ ಸಂಜಯ್ ಸಿಂಗ್ ಆರೋಪಿಸಿದರು.

ನಾವು ಸಹಾಯ ಮಾಡುತ್ತೇವೆ
ದೀಪ್ ಸಿಂಧು ಬಿಜೆಪಿಯ ವ್ಯಕ್ತಿ. ಅವರು ಮೋದಿಯನ್ನು ಭೇಟಿ ಮಾಡಿದ್ದರು. ತಮ್ಮ ರಾಜಕೀಯಕ್ಕಾಗಿ ಯಾವ ಮಟ್ಟಕ್ಕೂ ಹೋಗಬಲ್ಲರು. ದೆಹಲಿ ಮುಖ್ಯಮಂತ್ರಿ ರೈತರನ್ನು ಬೆಂಬಲಿಸುತ್ತಿದ್ದಾರೆ ಎನ್ನಲಾಗಿದೆ. ನಾವು ರೈತರನ್ನು ಬೆಂಬಲಿಸಿದ್ದೇವೆ. ಅದನ್ನು ಮುಂದುವರಿಸುತ್ತೇವೆ ಕೂಡ. ಜೈಲನ್ನಾಗಿಸಲು ನೀವು ಮೈದಾನವನ್ನು ಕೇಳಿದರೆ ನಾವು ನಿರಾಕರಿಸಿದೆವು. ನಾವೀಗ ಅವರಿಗೆ ನೀರು ಮತ್ತು ಶೌಚಾಲಯ ಒದಗಿಸುತ್ತಿದ್ದೇವೆ, ನೀವು ಅದನ್ನು ತಡೆಯುತ್ತಿದ್ದೀರಿ' ಎಂದು ಅಸಮಾಧಾನ ವ್ಯಕ್ತಪಡಿಸಿದರು.












Click it and Unblock the Notifications