ಮುಸ್ಲಿಂ ವಿದ್ಯಾರ್ಥಿಯ ಕಪಾಳಕ್ಕೆ ಹೊಡೆಯಲು ಹಿಂದೂ ವಿದ್ಯಾರ್ಥಿಗಳಿಗೆ ಹೇಳಿದ ಟೀಚರ್: ದೇಶದಾದ್ಯಂತ ವ್ಯಾಪಕ ಆಕ್ರೋಶ
ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕು ಅಂದರೆ ಅವನ ಹಿಂದೆ ಪ್ರಮುಖ ಪಾತ್ರ ವಹಿಸುವುದು ಒಬ್ಬ ಗುರು. ಪ್ರತಿಯೊಬ್ಬರಿಗೂ ಶಿಕ್ಷಣ ಹೇಗೆ ಮುಖ್ಯವೋ, ಹಾಗೇಯೆ ಆ ಶಿಕ್ಷಣ ನೀಡುವ ಗುರುವು ಅಷ್ಟೇ ಮುಖ್ಯ. ಆದರೆ ಇಲ್ಲೊಬ್ಬ ಶಿಕ್ಷಕರು ಬುದ್ದಿಗೇಡಿತನ ಪ್ರದರ್ಶಿಸಿದ್ದಾರೆ. ಮಕ್ಕಳ ನಡುವೆ ಭೇದಭಾವ ತೋರಿದ್ದಾರೆ.
ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಲು ಹಿಂದೂ ವಿದ್ಯಾರ್ಥಿಗೆ ಶಿಕ್ಷಕರೊಬ್ಬರು ತಿಳಿಸಿದ ಘಟನೆ ಉತ್ತರಪ್ರದೇಶದ ಶಾಲೆಯೊಂದರಲ್ಲಿ ನಡೆದಿದೆ. ಈ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದೇಶದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

ಯುಪಿಯ ಮುಜಾಫರ್ನಗರದಲ್ಲಿ ಮುಸ್ಲಿಂ ವಿದ್ಯಾರ್ಥಿಯೊಬ್ಬನಿಗೆ ಕಪಾಳಮೋಕ್ಷ ಮಾಡುವಂತೆ ಶಿಕ್ಷಕರೊಬ್ಬರು ಹಿಂದೂ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿರುವ ವಿಡಿಯೋ ಶುಕ್ರವಾರ ವೈರಲ್ ಆಗಿದ್ದು, ಘಟನೆಯ ಕುರಿತು ಮುಜಫರ್ನಗರ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಮತ್ತು ತನಿಖೆಯನ್ನು ಪ್ರಾರಂಭಿಸಿದ್ದಾರೆ.
ವೀಡಿಯೊದಲ್ಲಿ ಶಿಕ್ಷಕಿ ತ್ರಿಪ್ತಾ ತ್ಯಾಗಿ, ಹಿಂದೂ ವಿದ್ಯಾರ್ಥಿಗಳು ತರಗತಿಯ ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಲು ಸರದಿಯಲ್ಲಿ ಬರಲು ತಿಳಿಸಿದ್ದಾರೆ. "ನೀವು ಅವನನ್ನು ಏಕೆ ಬಲವಾಗಿ ಹೊಡೆಯುತ್ತಿಲ್ಲ" ಎಂದು ವಿದ್ಯಾರ್ಥಿಗಳನ್ನು ಪ್ರಶ್ನೆ ಮಾಡಿದ್ದಾಳೆ. ಈ ವೇಳೆ ವಿದ್ಯಾರ್ಥಿಯು ಜೋರಾಗಿ ಅಳುತ್ತಿದ್ದರೂ ಸಹ ಶಿಕ್ಷಕರು ವಿದ್ಯಾರ್ಥಿಗೆ ಥಳಿಸಲು ಹೇಳುತ್ತಾರೆ. ಪ್ರಕರಣದ ತನಿಖೆಯನ್ನು ಮನ್ಸೂರ್ಪುರದ ಠಾಣಾಧಿಕಾರಿಗೆ ಮುಜಫರ್ನಗರ ಪೊಲೀಸರು ಸೂಚಿಸಿದ್ದಾರೆ.
ಮುಸ್ಲಿಂ ವಿದ್ಯಾರ್ಥಿಯ ತಂದೆ ಮೊಹಮ್ಮದ್ ಜುಬೇರ್ ಸುದ್ದಿಗಾರರೊಂದಿಗೆ ಮಾತನಾಡಿ, "ನಾನು ನನ್ನ ಮಗುವನ್ನು ಆ ಶಾಲೆಗೆ ಹೋಗುವುದನ್ನು ಬಿಡಿಸುತ್ತೇನೆ. ಯಾವುದೇ ಪೊಲೀಸ್ ದೂರು ನೀಡಲು ಬಯಸುವುದಿಲ್ಲ" ಎಂದು ಹೇಳಿದರು.
ಪೋಲೀಸ್ ದೂರು ನೀಡಲು ಏಕೆ ಬಯಸುವುದಿಲ್ಲ ಎಂದು ಕೇಳಿದಾಗ ಅವರು, "ಏಕೆಂದರೆ ನಾನು ಆಗಾಗ ಪೊಲೀಸ್ ಠಾಣೆಗೆ ಹೋಗಲು ಅಥವಾ ನ್ಯಾಯಾಲಯದಿಂದ ಕರೆ ಮಾಡಿದಾಗ ಅಲ್ಲಿಗೆ ತೆರಳಲು ಬಯಸುವುದಿಲ್ಲ. ಇವೆಲ್ಲವನ್ನೂ ಪ್ರವೇಶಿಸಲು ಬಯಸುವುದಿಲ್ಲ" ಎಂದು ಹೇಳಿದರು.
ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಘಟನೆಯ ಬಗ್ಗೆ ಗಮನ ಹರಿಸಿದೆ. ಮಗುವಿನ ವೀಡಿಯೊವನ್ನು ಹಂಚಿಕೊಳ್ಳದಂತೆ ಜನರಿಗೆ ನಿರ್ದೇಶಿಸಿದೆ. "ಪ್ರತಿಯೊಬ್ಬರೂ ಮಗುವಿನ ವೀಡಿಯೊವನ್ನು ಹಂಚಿಕೊಳ್ಳದಂತೆ ವಿನಂತಿಸಲಾಗಿದೆ, ಅಂತಹ ಘಟನೆಗಳ ಬಗ್ಗೆ ಇಮೇಲ್ ಮೂಲಕ ಮಾಹಿತಿ ನೀಡಿ, ಮಕ್ಕಳ ಗುರುತನ್ನು ಬಹಿರಂಗಪಡಿಸುವ ಮೂಲಕ ಅಪರಾಧದ ಭಾಗವಾಗಬೇಡಿ" ಎಂದು ಎನ್ಸಿಪಿಸಿಆರ್ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ಹೇಳಿದರು.












Click it and Unblock the Notifications