Uttar Pradesh: ರೈಲಿನಲ್ಲಿ ಮಹಿಳಾ ಪೋಲೀಸ್ ಮೇಲೆ ದಾಳಿ ಕೇಸ್: ಎನ್ಕೌಂಟರ್ನಲ್ಲಿ ಆರೋಪಿ ಸಾವು!
ಲಕ್ನೋ ಸೆಪ್ಟೆಂಬರ್ 22: ಉಪ್ಪು ತಿಂದವನು ನೀರು ಕುಡಿಯಲೇಬೇಕು. ಹಾಗೇ ತಪ್ಪು ಮಾಡಿದವನು ಒಂದಲ್ಲಾ ಒಂದು ದಿನ ಶಿಕ್ಷೆ ಅನುಭವಿಸಲೇಬೇಕು ಅನ್ನೋ ಮಾತು ಯುಪಿಯ ಮಹಿಳಾ ಕಾನ್ಸ್ಟೆಬಲ್ ಮೇಲೆ ಹಲ್ಲೆ ವಿಚಾರವಾಗಿ ಸುಳ್ಳಾಗಲಿಲ್ಲ. ಉತ್ತರಪ್ರದೇಶ ಮಹಿಳಾ ಕಾನ್ಸ್ಟೆಬಲ್ ಮೇಲೆ ಹಲ್ಲೆ ಮಾಡಿದ ಆರೋಪಿ ಕೊನೆಗೂ ಎನ್ಕೌಂಟರ್ನಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನುಳಿದ ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದಾರೆ.
ಕಳೆದ ಆಗಸ್ಟ್ 30 ರಂದು ಅಯೋಧ್ಯೆಯ ಬಳಿ ಸರಯು ಎಕ್ಸ್ಪ್ರೆಸ್ನಲ್ಲಿ ರಕ್ತದ ಮಡುವಿನಲ್ಲಿ ಮಹಿಳಾ ಕಾನ್ಸ್ಟೆಬಲ್ ಪತ್ತೆಯಾಗಿದ್ದರು. ಅವರ ಮುಖ ಮತ್ತು ತಲೆಗೆ ಗಂಭೀರ ಗಾಯಗಳಾಗಿದ್ದವು. ಕ್ರೂರ ಪಾಪಿಗಳು ಅವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದರು.

ಮಹಿಳಾ ಕಾನ್ಸ್ಟೆಬಲ್ ಈಗಲೂ ಲಕ್ನೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾನ್ಸ್ಟೆಬಲ್ ಮೇಲೆ ಹಲ್ಲೆ ಮಾಡಿದ ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡ ಸದ್ಯ ಅವರನ್ನು ಪತ್ತೆ ಹಚ್ಚುವ ಮೂಲಕ ಸರಿಯಾಗಿ ಪಾಠ ಕಲಿಸಿದೆ.
ಕಳೆದ ತಿಂಗಳು ರೈಲಿನಲ್ಲಿ ಮಹಿಳಾ ಕಾನ್ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಉತ್ತರ ಪ್ರದೇಶದಲ್ಲಿ ಪತ್ತೆ ಹಚ್ಚಿ ಎನ್ಕೌಂಟರ್ನಲ್ಲಿ ಇಂದು ಹತ್ಯೆ ಮಾಡಲಾಗಿದೆ. ಗುಂಡಿನ ಚಕಮಕಿಯಲ್ಲಿ ಆತನ ಇಬ್ಬರು ಸಹಾಯಕರು ಗಾಯಗೊಂಡಿದ್ದು, ಅವರನ್ನು ಬಂಧಿಸಲಾಗಿದೆ.
ದಾಳಿಯ ಪ್ರಮುಖ ಆರೋಪಿ ಅನೀಸ್ ಖಾನ್ ಅವರನ್ನು ಪೊಲೀಸರು ಬಂಧಿಸಲು ಹೋದಾಗ ಎನ್ಕೌಂಟರ್ನಲ್ಲಿ ಆತ ಗಾಯಗೊಂಡಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆ ಚಿಕಿತ್ಸೆಗೆ ಸಾಗಿಸಲಾಯಿತಾದರೂ ಆ ಸಮಯದಲ್ಲಿ ಆತ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಈ ವೇಳೆ ಈತನ ಸಹಾಯಕರಾದ ಆಜಾದ್ ಮತ್ತು ವಿಶಂಭರ್ ದಯಾಳ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಯೋಧ್ಯೆ ಪೊಲೀಸ್ ಹಿರಿಯ ಅಧೀಕ್ಷಕ ರಾಜ್ ಕರಣ್ ನಯ್ಯರ್ ಅವರು, "ಮಹಿಳಾ ಕಾನ್ಸ್ಟೆಬಲ್ ಕೊಟ್ಟ ಮಾಹಿತಿ ಮೇರೆಗೆ ನಾವು ಆರೋಪಿಯ ಚಿತ್ರವನ್ನು ರಚಿಸಿದೆವು. ತಾಂತ್ರಿಕ ಮತ್ತು ಹಸ್ತದ ಗುರುತು ಹಾಗೂ ಸಂತ್ರಸ್ತೆ ಗುರುತಿಸಿದ ಫೋಟೋವನ್ನು ಆಧರಿಸಿ ನಾವು ಆರೋಪಿಗಳನ್ನು ಗುರುತಿಸಿದ್ದೇವೆ ಮತ್ತು ಪತ್ತೆಹಚ್ಚಿದ್ದೇವೆ. ಇದರ ಆಧಾರದ ಮೇಲೆ ಅಯೋಧ್ಯೆ ಪೊಲೀಸರು ಮತ್ತು ವಿಶೇಷ ಕಾರ್ಯಪಡೆ ಅವರ ಮೇಲೆ ದಾಳಿ ನಡೆಸಿತು. ದಾಳಿಯ ಸಮಯದಲ್ಲಿ ಅಪರಾಧಿಗಳು ತಮ್ಮ ಮೇಲೆ ಗುಂಡು ಹಾರಿಸಿದರು. ಇದರಿಂದಾಗಿ ಪೊಲೀಸರು ಪ್ರತೀಕಾರ ತೀರಿಸಿಕೊಳ್ಳಲು ಗುಂಡಿನ ದಾಳಿ ಮಾಡಿದರು. ಗುಂಡಿನ ಚಕಮಕಿಯಲ್ಲಿ ಇಬ್ಬರಿಗೆ ಗಾಯಗಳಾಗಿದ್ದು, ಇನ್ನೊಬ್ಬ ವ್ಯಕ್ತಿ ಪರಾರಿಯಾಗಿದ್ದಾನೆ. ಆತನ ಪತ್ತೆಗೆ ಶೋಧ ಆರಂಭಿಸಲಾಗಿದೆ' ಎಂದು ನಯ್ಯರ್ ಅವರು ಹೇಳಿದರು.
ದಾಳಿಗೂ ಮುನ್ನ ಅಪರಾಧಿಯನ್ನು ಶರಣಾಗುವಂತೆ ಕೇಳಲಾಯಿತು. ಆದರೆ ಅವನು ಪೊಲೀಸರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದನು. ಪ್ರತೀಕಾರದ ಗುಂಡಿನ ದಾಳಿಯಲ್ಲಿ ಆತನಿಗೆ ಗಾಯವಾಯಿತು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಪ್ರಮುಖ ಆರೋಪಿ ಸಾವನ್ನಪ್ಪಿದ್ದಾನೆ.
ಕಳೆದ ಆಗಸ್ಟ್ 30 ರಂದು ರೈಲು ಕಂಪಾರ್ಟ್ಮೆಂಟ್ನಲ್ಲಿ ಮಹಿಳಾ ಕಾನ್ಸ್ಟೆಬಲ್ ರಕ್ತಸಿಕ್ತವಾಗಿ ಪತ್ತೆಯಾಗಿದ್ದರು. ಆಕೆಯ ಸಹೋದರ ಅದೇ ದಿನ ಪೊಲೀಸ್ ಪ್ರಕರಣ ದಾಖಲಿಸಿದ್ದರು. ಕೆಲವು ದಿನಗಳ ನಂತರ, ಅಲಹಾಬಾದ್ ಹೈಕೋರ್ಟ್ ಈ ಪ್ರಕರಣವನ್ನು ಕೈಗೆತ್ತಿಕೊಂಡಿತು ಮತ್ತು ತಡರಾತ್ರಿಯ ವಿಚಾರಣೆಯ ಸಮಯದಲ್ಲಿ ರೈಲ್ವೇ ಪೊಲೀಸರು ಮತ್ತು ಯುಪಿ ಸರ್ಕಾರ ಎರಡನ್ನೂ ಎಳೆದಿತ್ತು. ತಕ್ಷಣವೇ ಆರೋಪಿಗಳ ಪತ್ತೆಗೆ ಸೂಚನೆ ನೀಡಿತ್ತು. ಇದರ ಬೆನ್ನಲ್ಲೇ ವಿಶೇಷ ತನಿಖಾ ತಂಡವನ್ನು ರಚಿಸಿದ ಖಾಕಿಪಡೆ ಬಲೆಗೆ ಕೊನೆಗೂ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.












Click it and Unblock the Notifications