ಸಮಾಜವಾದಿ ಪಕ್ಷಕ್ಕೆ ಮುಸ್ಲಿಂ ಮತ ಬೀಳದಿರಲು 4 ಕಾರಣ
ಫೆಬ್ರವರಿ 11ರಿಂದ ಏಳು ಹಂತಗಳಲ್ಲಿ ನಡೆಯಲಿರುವ ಮತದಾನದಲ್ಲಿ ಮುಸ್ಲಿಂ ಮತಗಳು ಸಮಾಜವಾದಿ ಪಕ್ಷದ ಹಿಡಿತದಿಂದ ತಪ್ಪಿಸಿಕೊಂಡು ಹೋಗಲು ಹಲವಾರು ಕಾರಣಗಳಿವೆ. ಅವುಗಳೆಂದರೆ....
ಲಖನೌ, ಜನವರಿ 12 : ಪ್ರತಿ ಚುನಾವಣೆಯಂತೆ ಮುಸ್ಲಿಂ ಮತಗಳು ಉತ್ತರಪ್ರದೇಶದ ರಾಜಕೀಯ ಪಕ್ಷಗಳ ಹಣೆಬರಹವನ್ನು ಮುಂಬರುವ ಚುನಾವಣೆಯಲ್ಲೂ ನಿರ್ಧರಿಸಲಿವೆ. ಆದರೆ, ಈ ಬಾರಿ ಅವೇ ಮುಸ್ಲಿಂ ಮತಗಳು ಆಡಳಿತದ ಚುಕ್ಕಾಣಿ ಹಿಡಿದಿರುವ ಸಮಾಜವಾದಿ ಪಕ್ಷ ಗೆಲ್ಲುವಂತೆ ಮಾಡುತ್ತವಾ?
ಆದರೆ, ಈಬಾರಿ ಸಮಾಜವಾದಿ ಪಕ್ಷದಲ್ಲಿ ನಡೆಯುತ್ತಿರುವ ಕೌಟುಂಬಿಕ ಮತ್ತು ರಾಜಕೀಯ ಬೃಹನ್ನಾಟಕವನ್ನು ನೋಡಿದರೆ ಸಮಾಜವಾದಿ ಪಕ್ಷಕ್ಕೆ ಮುಸ್ಲಿಂ ಮತಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ನಿಚ್ಚಳವಾಗಿ ಕಾಣಿಸುತ್ತಿದೆ.
ಮತದಾರರಲ್ಲಿ ಶೇ.19ರಿಂದ 20ರಷ್ಟು ಇರುವ ಮುಸ್ಲಿಂ ಮತಗಳನ್ನು ಈಬಾರಿ ಬಹುಜನ ಸಮಾಜವಾದಿ ಪಕ್ಷ ಕಸಿದುಕೊಳ್ಳಲಿದೆ ಎಂದು ರಾಜಕೀಯ ಪಂಡಿತರು ಲೆಕ್ಕ ಹಾಕಿದ್ದಾರೆ. 2012ರ ಚುನಾವಣೆಯಲ್ಲಿ ಶೇ.54ರಷ್ಟು ಮುಸ್ಲಿಂ ಮತಗಳು ಸಮಾಜವಾದಿ ಪಕ್ಷಕ್ಕೆ ದಕ್ಕಿದ್ದವು.
2012ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಮುಸ್ಲಿಂ ಸಮುದಾಯಕ್ಕೆ ಸಮಾಜವಾದಿ ಪಕ್ಷ ಹಲವಾರು ಭರವಸೆಗಳನ್ನು ನೀಡಿತ್ತು. ಅವುಗಳಲ್ಲಿ ಬಹಳಷ್ಟು ಭರವಸೆಗಳನ್ನು ಈಡೇರಿಸಿಲ್ಲ, ತಮ್ಮನ್ನು ಪಕ್ಷ ನಡುನೀರಲ್ಲಿ ಕೈಬಿಟ್ಟಿದೆ ಎಂಬುದು ಮುಸ್ಲಿಂ ಸಮುದಾಯದ ಮೊದಲ ಆರೋಪ.
ಅಜಂಘರ್ನ ನಿವಾಸಿ ಅಬೀದ್ ಮಸೂದ್ ಒನ್ಇಂಡಿಯಾ ಜೊತೆ ಮಾತನಾಡುತ್ತ, ಸಮಾಜವಾದಿ ಪಕ್ಷದಲ್ಲಿ ನಡೆಯುತ್ತಿರುವ ಕುಟುಂಬ ಕಲಹದಿಂದ ಬಿಜೆಪಿಗೆ ಸಹಾಯವಾಗಲಿದೆ. ನಾವು ಜಾತ್ಯತೀತ ಪಕ್ಷದತ್ತ ನೋಡುತ್ತಿದ್ದೇವೆ. ಬಿಎಸ್ಪಿ ಬಿಟ್ಟು ಬೇರೆ ಯಾವುದೂ ಕಾಣುತ್ತಿಲ್ಲ. ಎಸ್ಪಿ ಪಕ್ಷದೊಳಗಿನ ಕಗ್ಗಂಟು ಅದಕ್ಕೆ ಸಾಕಷ್ಟು ಹಾನಿ ಉಂಟುಮಾಡಿದೆ ಎನ್ನುತ್ತಾರೆ.
ಫೆಬ್ರವರಿ 11ರಿಂದ ಏಳು ಹಂತಗಳಲ್ಲಿ ನಡೆಯಲಿರುವ ಮತದಾನದಲ್ಲಿ ಮುಸ್ಲಿಂ ಮತಗಳು ಸಮಾಜವಾದಿ ಪಕ್ಷದ ಹಿಡಿತದಿಂದ ತಪ್ಪಿಸಿಕೊಂಡು ಹೋಗಲು ಹಲವಾರು ಕಾರಣಗಳಿವೆ. ಅವುಗಳೆಂದರೆ.... [5 ರಾಜ್ಯಗಳಲ್ಲಿ ಚುನಾವಣೆ ಮತದಾನ, ಫಲಿತಾಂಶ: ನಿಮಗಿದು ತಿಳಿದಿರಲಿ]
ಮುಸ್ಲಿಂರಿಗೆ ಮೀಸಲಾತಿ ನೀಡದೆ ಕೈಬಿಟ್ಟ ಎಸ್ಪಿ
ಕಳೆದ ಚುನಾವಣೆಯಲ್ಲಿ ಶೇ.18ರಷ್ಟು ಮೀಸಲಾತಿ ನೀಡುವುದಾಗಿ ಸಮಾಜವಾದಿ ಪಕ್ಷ ಮುಸ್ಲಿಂರಿಗೆ ಭರವಸೆ ನೀಡಿತ್ತು. ಇದನ್ನು ಎಸ್ಪಿ ಮುಟ್ಟಿಯೇ ಇಲ್ಲ. ಮೋಸ ಹೋಗಿರುವುದರಿಂದ ಈಗ ಮುಂಬರುವ ಚುನಾವಣೆಯಲ್ಲಿ ಮುಲಾಯಂ ಸಿಂಗ್ ಯಾದವ್ ಪಕ್ಷಕ್ಕೆ ಪಾಠ ಕಲಿಸುವುದಾಗಿ ಮುಸ್ಲಿಂರು ಪಣ ತೊಟ್ಟಿದ್ದಾರೆ. [ಉತ್ತರಪ್ರದೇಶ ಚುನಾವಣೆ: ಇಂಡಿಯಾ ಟುಡೆ ಸಮೀಕ್ಷೆ]
ವಿನಾಕಾರಣ ಮುಸ್ಲಿಂ ಮತ ನಷ್ಟವಾಗಬಾರದು
ಕೆಲ ಚುನಾವಣಾಪೂರ್ವ ಸಮೀಕ್ಷೆಯ ಪ್ರಕಾರ, ಬಿಎಸ್ಪಿ ಉತ್ತಮ ಮತ ಗಳಿಸುವ ನಿರೀಕ್ಷೆ ಇರುವುದರಿಂದ ತಮ್ಮ ಮತಗಳು ನಷ್ಟವಾಗಬಾರದು ಎಂಬ ಅಭಿಪ್ರಾಯ ಮುಸ್ಲಿಂರಲ್ಲಿದೆ. ಬಹುಜನ ಸಮಾಜವಾದಿ ಪಕ್ಷ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಅವರಲ್ಲಿ 97 ಅಭ್ಯರ್ಥಿಗಳು ಮುಸ್ಲಿಂರಿದ್ದಾರೆ.
ಮುಜಫರ್ನಗರ ನಿಭಾವಣೆ ಬಗ್ಗೆ ಅಸಮಾಧಾನ
ಮುಜಫರ್ನಗರ ದಂಗೆಯನ್ನು ಸಮಾಜವಾದಿ ಪಕ್ಷ ನಿಭಾಯಿಸಿದ ಕುರಿತು ಮುಸ್ಲಿಂರಲ್ಲಿ ಭಾರೀ ಅಸಮಾಧಾನವಿದೆ. ಅಲ್ಲಿ ತಮಗೆ ಅನ್ಯಾಯವಾಗಿದೆ ಎಂಬ ಅಭಿಪ್ರಾಯ ತಳವೂರಿದೆ. ಉತ್ತರಪ್ರದೇಶದ ಪಶ್ಚಿಮ ಭಾಗದಲ್ಲಿ ಎಸ್ಪಿಗೆ ಈಬಾರಿ ಭಾರೀ ಹೊಡೆತ ಬೀಳುವ ನಿರೀಕ್ಷೆಯಿದೆ.
ಎಸ್ಪಿಗೆ ಮತ ಹಾಕಿದರೆ ಮುಸ್ಲಿಂರಿಗೆ ಏನು ಪ್ರಯೋಜನ?
ಕಡೆಯದಾಗಿ, ಮುಲಾಯಂ ಸಿಂಗ್ ಯಾದವ್ ಕುಟುಂಬದಲ್ಲಿ ನಡೆಯುತ್ತಿರುವ ಕಚ್ಚಾಟ, ನಾಟಕಗಳಿಂದ ಬೇಸತ್ತಿರುವ ಮುಸ್ಲಿಂ ಬಾಂಧವರು ಇವರಿಗೆ ಮತ ಹಾಕಿದರೆ ಪ್ರಯೋಜನವೇನು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಇದು ರಿಪೇರಿ ಮಾಡಲಾಗದಷ್ಟು ಹದಗೆಟ್ಟು ಹೋಗಿದೆ ಎಂಬುದು ಅವರ ಅಭಿಮತ.