ವಕ್ತಾರರ ಆಯ್ಕೆಗೆ ಕಾಂಗ್ರೆಸ್ ಪರೀಕ್ಷೆ: ಪ್ರಶ್ನೆಪತ್ರಿಕೆ ಸೋರಿಕೆ!
ಲಕ್ನೋ, ಜೂನ್ 29: ಎಸ್ ಎಸ್ ಎಲ್ ಸಿ, ಪಿಯುಸಿ ಪಶ್ನೆ ಪತ್ರಿಕೆಗಳು ಸೋರಿಕೆಯಾಗುವ ಬಗ್ಗೆ ಸಾಕಷ್ಟು ಸುದ್ದಿ ಕೇಳಿದ್ದೀವಿ. ಆದರೆ ಉತ್ತರ ಪ್ರದೇಶದಲ್ಲಿ ಪಕ್ಷದ ವಕ್ತಾರರ ಆಯ್ಕೆಗೆಂದು ಕಾಂಗ್ರೆಸ್(ಯುಪಿಸಿಸಿ) ಪಕ್ಷದ ಉತ್ತರ ಪ್ರದೇಶ ಘಟಕ ಏರ್ಪಡಿಸಿದ್ದ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳೂ ಸೋರಿಕೆಯಾಗಿದೆ!
ಈ ಸಂಬಂಧ ಪರೀಕ್ಷೆ ಎದುರಿಸಿದ್ದ ಕಾರ್ಯಕರ್ತರು ಪಕ್ಷದ ಮುಖಂಡರ ಮೇಲೆ ಸಿಟ್ಟೆಗೇಳುವ ಪ್ರಮೇಯ ಬಂದಿದೆ. ವಕ್ತಾರರ ಆಯ್ಕೆಗಾಗಿ ಆಯೋಜಿಸಿದ್ದ ಈ ಪರೀಕ್ಷೆಯಲ್ಲಿ ಒಟ್ಟು 14 ಪ್ರಶ್ನೆಗಳನ್ನು ಕೇಳಲಾಗಿತ್ತು. ಉತ್ತರ ಪ್ರದೇಶದಲ್ಲಿ ಒಟ್ಟೂ ಎಷ್ಟು ಬ್ಲಾಕ್ ಗಳಿವೆ ಎಂಬಲ್ಲಿಂದ ಹಿಡಿದು, ಯೋಗಿ ಆದಿತ್ಯನಾಥ್ ಸರ್ಕಾರದ ವೈಫಲ್ಯಕ್ಕೆ ಕಾರಣಗಳೇನು? ಎಂಬಲ್ಲಿಯವರೆಗೆ ಪ್ರಶ್ನೆಗಳನ್ನು ಕೇಳಲಾಗಿತ್ತು.

ಒಟ್ಟು 70 ಜನ ಈ ಪರೀಕ್ಷೆಯನ್ನು ಬರೆದಿದ್ದರು. ಆದರೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬುದು ನಂತರ ತಿಳಿಯಿತು. ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದ್ದವು. ಪ್ರಶ್ನೆಪತ್ರಿಕೆಯ ಪ್ರತಿಗಳ ಚಿತ್ರಗಳು ಹಂಚಿಕೆಯಾಗಿದ್ದವು. ಇದರಿಂದ ಹಲವರು ಮೊದಲೇ ಸಿದ್ಧತೆ ನಡೆಸಿಕೊಂದು ಬಂದು ಮೋಸ ಮಾಡಿದ್ದಾರೆಂದು ದೂರಲಾಗುತ್ತಿದೆ. ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಿಲ್ಲ ಎಮದು ಪರೀಕ್ಷೆಯ ಆಯೋಜಕರಿಗೆ, ಕಾಂಗ್ರೆಸ್ ಮುಖಂಡರಿಗೆ ಪರೀಕ್ಷಾರ್ಥಿಗಳು ಛೀಮಾರಿ ಹಾಕಿದ್ದಾರೆ.












Click it and Unblock the Notifications