ಮೊದಲ ಸಚಿವ ಸಂಪುಟ ಸಭೆಯಲ್ಲೇ ರೈತರ ಹೊರೆ ಇಳಿಸಿದ ಯೋಗಿ ಆದಿತ್ಯನಾಥ್
ಮೊದಲ ಸಚಿವ ಸಂಪುಟ ಸಭೆಯಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಹತ್ವದ ನಿರ್ಧಾರ. ಒಂದು ಲಕ್ಷ ರೂಪಾಯಿವರೆಗಿನ ರೈತರ ಸಾಲಮನ್ನಾ ಮತ್ತು ಇತರ ಘೋಷಣೆಗಳು.
ಲಕ್ನೋ, ಏ 4: ಬಿರುಬೇಸಿಗೆಯಲ್ಲಿ ಅನ್ನದಾತರ ಹೊಟ್ಟೆ ತಣ್ಣಗಾಗಿಸುವ ಶುಭ ಸುದ್ದಿಯನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡಿದ್ದಾರೆ. ಮೊದಲ ಸಚಿವ ಸಂಪುಟ ಸಭೆಯಲ್ಲೇ ಯೋಗಿ ಹಲವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಇತ್ತ ಕರ್ನಾಟಕದಲ್ಲಿ ರೈತರ ಸಾಲಮನ್ನಾ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿಯವರು ಕಾಂಗ್ರೆಸ್ಸಿನತ್ತ, ಕಾಂಗ್ರೆಸ್ಸಿನವರು ಕೇಂದ್ರ ಸರಕಾರದತ್ತ ಬೊಟ್ಟು ತೋರಿಸುತ್ತಿರುವ ವೇಳೆ, ಮನಸ್ಸಿದ್ದಲ್ಲಿ ಮಾರ್ಗ ಹಲವು ಎನ್ನುವ ಹಾಗೇ, ಉತ್ತರಪ್ರದೇಶ ಸರಕಾರ ರೈತರ ಸಾಲಮನ್ನಾ ಮಾಡುವ ಮಹತ್ವದ ನಿರ್ಧಾರಕ್ಕೆ ಬಂದಿದೆ.
ಸರಕಾರಕ್ಕೆ ಹೆಚ್ಚುವರಿ ಹೊರೆಯಾಗುವ 30,729 ಕೋಟಿ ರೂಪಾಯಿ ಸಾಲಮನ್ನಾ ಮಾಡುವ ನಿರ್ಧಾರಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೊದಲ ಸಚಿವ ಸಂಪುಟ ಸಭೆಯಲ್ಲಿ ಬಂದಿದ್ದಾರೆ.
ಜೊತೆಗೆ ಎನ್ಪಿಎ (Non Performing Assets) ಪಟ್ಟಿಯಲ್ಲಿ ಬರುವ 5,630 ಕೋಟಿ ರೂಪಾಯಿ ಸಾಲವನ್ನು ಸಂಪೂರ್ಣ ಮನ್ನಾ ಮಾಡುವ ನಿರ್ಧಾರಕ್ಕೂ ಬರಲಾಗಿದೆ. ಇದರಿಂದಾಗಿ ರಾಜ್ಯದ 2.15 ಕೋಟಿ ರೈತಾಪಿ ವರ್ಗಕ್ಕೆ ಯೋಗಿ ಭರ್ಜರಿ 'ರಾಮನವಮಿ' ಪಾನಕ ನೀಡಿದ್ದಾರೆ.
ಸಣ್ಣ ಮತ್ತು ಮಧ್ಯಮ ವರ್ಗದ ಸುಮಾರು 2.15 ಕೋಟಿ ರೈತರ ಒಂದು ಲಕ್ಷ ರೂಪಾಯಿ ವರೆಗಿನ ಸಾಲ ಮನ್ನಾ ಮಾಡುವ ನಿರ್ಧಾರವನ್ನು ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಮೊದಲ ಸಚಿವ ಸಂಪುಟ ಸಭೆಯಲ್ಲಿ ಯೋಗಿ ಇತರ ಹಲವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಒಂದು ಲಕ್ಷ ರೂಪಾಯಿವರೆಗಿನ ಸಾಲಮನ್ನಾ
ಅಧಿಕಾರಕ್ಕೆ ಬಂದ ಹದಿನೈದು ದಿನದ ನಂತರ ಮೊದಲ ಬಾರಿಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ, ಚುನಾವಣಾ ಪ್ರಣಾಳಿಕೆಯಲ್ಲಿ ಮತ್ತು ಚುನಾವಣಾ ಸಭೆಯಲ್ಲಿ ನೀಡಿದ ಆಶ್ವಾಸನೆಯಂತೆ ಒಂದು ಲಕ್ಷ ರೂಪಾಯಿವರೆಗಿನ ಸಾಲಮನ್ನಾ ಮಾಡುವ ನಿರ್ಧಾರಕ್ಕೆ ಯೋಗಿ ಆದಿತ್ಯನಾಥ್ ಬಂದಿದ್ದಾರೆ.(ಚಿತ್ರ: ಟ್ವಿಟ್ಟರ್)

ಬೆಂಬಲ ಬೆಲೆ ಮತ್ತು ಗೋಧಿ ಖರೀದಿ ಕೇಂದ್ರ
ಸಭೆಯಲ್ಲಿ ಈಗಿರುವ ದರಕ್ಕಿಂತ, ಕ್ವಿಂಟಾಲ್ ಒಂದಕ್ಕೆ 10 ರೂಪಾಯಿ ಹೆಚ್ಚುವರಿ ಬೆಂಬಲ ಬೆಲೆ ನೀಡುವ ಮತ್ತೊಂದು ಮಹತ್ವದ ನಿರ್ಧಾರಕ್ಕೂ ಸಭೆಯಲ್ಲಿ ಬರಲಾಗಿದೆ. ಇದರ ಜೊತೆಗೆ ರಾಜ್ಯದ ಹಲವೆಡೆ ಐನೂರು ಗೋಧಿ ಖರೀದಿ ಕೇಂದ್ರ ತೆರೆಯಲು ನಿರ್ಧರಿಸಲಾಗಿದ್ದು ಮತ್ತು ಇದರ ಸಂಪೂರ್ಣ ಜವಾಬ್ದಾರಿ ಮುಖ್ಯಮಂತ್ರಿ ಕಚೇರಿ ಹೊರಲಿದೆ.

ಅಕ್ರಮ ಗಣಿಗಾರಿಕೆಕೆ ಬ್ರೇಕ್ ನೀಡಲು ನಿರ್ಧಾರ
ರಾಜ್ಯದ ಪಾಲಿಗೆ ಕಗ್ಗಂಟಾಗಿರುವ ಅಕ್ರಮ ಗಣಿಗಾರಿಕೆಯ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ನಿರ್ಧಾರಕ್ಕೆ ಸಚಿವ ಸಂಪುಟ ಸಭೆಯಲ್ಲಿ ಬರಲಾಗಿದೆ. ಉಪ ಮುಖ್ಯಮಂತ್ರಿ ಕೇಶವಪ್ರಸಾದ್ ಮೌರ್ಯ ಅವರ ನೇತೃತ್ವದಲ್ಲಿ ಹೊಸ ಟೀಂಗೆ ಚಾಲನೆ ನೀಡಲಾಗುವುದು.

ಆಂಟಿ ರೋಮಿಯೋ ಸ್ಕ್ವಾಡ್ ಗೆ ಮಾರ್ಗಸೂಚಿ
ಆಂಟಿ ರೋಮಿಯೋ ಸ್ಕ್ವಾಡ್ ತೆಗೆದುಕೊಳ್ಳುತ್ತಿರುವ ಕೆಲವೊಂದು ಹೆಜ್ಜೆಗಳನ್ನು ಮುಂದಿಟ್ಟುಕೊಂಡು, ವಿರೋಧ ಪಕ್ಷಗಳು ಸರಕಾರವನ್ನು ಮುಜುಗರಕ್ಕೀಡು ಮಾಡುವ ಸಾಧ್ಯತೆಯಿರುವುದರಿಂದ ಪೊಲೀಸರಿಗೆ ಈ ಸಂಬಂಧ ಮಾರ್ಗಸೂಚಿ ನೀಡಲು ನಿರ್ಧರಿಸಲಾಗಿದೆ.

ಕಸಾಯಿಖಾನೆಯ ವಿಚಾರದಲ್ಲಿ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ನಿರ್ಧಾರ
ಕಸಾಯಿಖಾನೆಯ ವಿಚಾರದಲ್ಲಿ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ನಿರ್ಧಾರಕ್ಕೆ ಬಂದಿರುವ ಯೋಗಿ ಸರಕಾರ, ಅಕ್ರಮ ಕಸಾಯಿಖಾನೆಯ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದಾಗಿ ಪ್ರಕಟಿಸಿದ್ದರೂ, ಹೊಸ ಲೈಸೆನ್ಸ್ ನೀಡಲೂ ಮುಂದಾಗಿದೆ.












Click it and Unblock the Notifications