ಉ.ಪ್ರ ಚುನಾವಣೆ: ಮಹತ್ವ ಪಡೆದುಕೊಂಡ ಜಾಮಾ ಮಸೀದಿ ಇಮಾಮ್ ಬುಖಾರಿ ಕರೆ
ಉತ್ತರಪ್ರದೇಶದ ಚುನಾವಣೆಯ ಹೊಸ್ತಿಲಲ್ಲಿ ದೆಹಲಿಯ ಜಾಮಾ ಮಸೀದಿಯ ಶಾಹಿ ಇಮಾಮ್ ಸಯ್ಯದ್ ಅಹಮದ್ ಬುಖಾರಿ, ಸಮಾಜವಾದಿ ಪಕ್ಷವನ್ನು ಬೆಂಬಲಿಸ ಬಾರದೆಂದು ಅಲ್ಲಿನ ಮುಸ್ಲಿಂ ಬಾಂಧವರಿಗೆ ಕರೆ ನೀಡಿದ್ದಾರೆ.
ನವದೆಹಲಿ, ಫೆ 10 (ಪಿಟಿಐ) : ಚುನಾವಣೆಯ ಸಮಯದಲ್ಲಿ ಇಂತಹ ಪಕ್ಷಕ್ಕೆ ಬೆಂಬಲ ನೀಡಿ ಎಂದು ದೆಹಲಿಯ ಜಾಮಾ ಮಸೀದಿ, ದೇಶದ ಮುಸ್ಲಿಂ ಬಾಂಧವರಿಗೆ ಫರ್ಮಾನು ಹೊರಡಿಸುವ ಪದ್ದತಿಯಿದೆ.
ದೆಹಲಿಯ ಜಾಮಾ ಮಸೀದಿಯ ಶಾಹಿ ಇಮಾಮ್ ಸಯ್ಯದ್ ಅಹಮದ್ ಬುಖಾರಿ ಹೊರಡಿಸುವ ಫರ್ಮಾನ್ ಅನ್ನು ಮುಸ್ಲಿಮರು ಪಾಲಿಸುತ್ತಾರೋ ಇಲ್ಲವೋ ಅದು ಆನಂತರದ ಮಾತಾದರೂ, ರಾಜಕೀಯ ಪಕ್ಷಗಳು ಇದನ್ನು ಗಂಭೀರವಾಗಿ ಸ್ವೀಕರಿಸುತ್ತದೆ. (ಉ.ಪ್ರ, ಜಾತಿ ಲೆಕ್ಕಾಚಾರದಲ್ಲಿ ಯಾರು ಮುಂದೆ)
ಉತ್ತರಪ್ರದೇಶದ ಚುನಾವಣೆಯ ಹೊಸ್ತಿಲಲ್ಲಿ ಬುಖಾರಿ, ಸಮಾಜವಾದಿ ಪಕ್ಷವನ್ನು ಬೆಂಬಲಿಸ ಬಾರದೆಂದು ಅಲ್ಲಿನ ಮುಸ್ಲಿಂ ಬಾಂಧವರಿಗೆ ಕರೆ ನೀಡಿದ್ದಾರೆ. ಗುರುವಾರ (ಫೆ 9) ಬುಖಾರಿ ಬಿಡುಗಡೆಗೊಳಿಸಿದ ಎರಡು ಪುಟದ ಪತ್ರಿಕಾ ಹೇಳಿಕೆಯಲ್ಲಿ ಎಸ್ಪಿಯನ್ನು ಸೋಲಿಸಿ ಎಂದು ಕರೆ ನೀಡಿದ್ದಾರೆ.
ಕಳೆದ ಚುನಾವಣೆಯಲ್ಲಿ ಸಮಾಜವಾದಿ ಪಕ್ಷಕ್ಕೆ ಬೆಂಬಲ ಸೂಚಿಸಿದೆವು, ಆದರೆ ನಾವು ನಿರೀಕ್ಷಿಸಿದಂತೆ ಮುಸ್ಲಿಮರಿಗೆ ಯಾವುದೇ ಪ್ರಯೋಜನವಾಗಲಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಮುಸ್ಲಿಮರು ಬಹುಜನ ಸಮಾಜಪಕ್ಷಕ್ಕೆ ಬೆಂಬಲ ನೀಡಿ ಎಂದು ಬುಖಾರಿ ಕರೆ ನೀಡಿದ್ದಾರೆ.
ಯಾದವೀ ಕಲಹದಿಂದ ಹೈರಾಣಗೊಂಡು, ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಸಮಾಜವಾದಿ ಪಕ್ಷಕ್ಕೆ ಬುಖಾರಿ ಹೇಳಿಕೆ ಮತ್ತಷ್ಟು ಹೊಡೆತ ನೀಡಿದ್ದರೆ, ಮಾಯಾವತಿಗೆ ಹೊಸ ಹುರುಪನ್ನು ನೀಡಿದೆ.
ಸಮಾಜವಾದಿ ಪಕ್ಷ, 2012ರ ಚುನಾವಣೆಯಲ್ಲಿ ಉರ್ದು ಮಾಧ್ಯಮ ಶಾಲೆ, ಮುಸ್ಲಿಮರಿಗೆ ಮೀಸಲಾತಿ, ರಂಗನಾಥನ್ ಮತ್ತು ಸಾಚಾರ್ ಸಮಿತಿ ವರದಿಯ ಅನುಷ್ಠಾನ ಮುಂತಾದವನ್ನು ಪ್ರಣಾಳಿಕೆಯಲ್ಲಿ ಘೋಷಿಸಿದ್ದರೂ, ಅದರ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ ಎಂದು ಬುಖಾರಿ ಬೇಸರ ವ್ಯಕ್ತ ಪಡಿಸಿದ್ದಾರೆ.
ಬಿಎಸ್ಪಿಗೆ ಬೆಂಬಲ ನೀಡಿ ಎಂದು ಬುಖಾರಿ ನೀಡಿರುವ ಕರೆ, ಪರೋಕ್ಷವಾಗಿ ಬಿಜೆಪಿಗೆ ವರದಾನವಾಗುವ ಸಾಧ್ಯತೆಯೇ ಹೆಚ್ಚು ಎಂದು ರಾಜಕೀಯ ಪಂಡಿತರ ಲೆಕ್ಕಾಚಾರ.