ದೇವಾಲಯಕ್ಕೆ ನುಗ್ಗಿದ ದರೋಡೆಕೋರರು ಮಾಡಿದ್ದೇನು ಗೊತ್ತಾ?
ಮಧುರೈ (ತ.ನಾ), ಜುಲೈ 12: ಅನ್ನದ ಬೆಲೆ ಹಸಿದವರಿಗೆ ಗೊತ್ತು, ಚಿನ್ನದ ಬೆಲೆ ಕಳ್ಳರಿಗೆ ಗೊತ್ತು ಅನ್ನೋ ಆಡು ಮಾತಿನಂತೆ, ತಲೆಗೂದಲ ಬೆಲೆ ಯಾರಿಗೆ ಗೊತ್ತು? ಬಹುಷ: ಈ ದರೋಡೆಕೋರರ ಗುಂಪಿಗೆ ಕೂದಲ ಇಂದಿನ ಮಾರುಕಟ್ಟೆಯ ಬೆಲೆಯ ಬಗ್ಗೆ ಹೆಚ್ಚಿನ ಮಾಹಿತಿ ಇದ್ದಂತಿದೆಯೋ ಏನೋ?
ಮಧುರೈ ನಗರದಿಂದ ಸುಮಾರು 45 ಕಿಲೋಮೀಟರ್ ದೂರದಲ್ಲಿರುವ ವಿರುಧನಗರ ಜಿಲ್ಲೆಯಲ್ಲಿನ ಇರುಕಾಕನಕುಡಿ ಮಾರಿಯಮ್ಮನ ದೇವಾಲಯಕ್ಕೆ ಸುಮಾರು ನಾಲ್ಕು ಶತಮಾನಗಳ ಇತಿಹಾಸವಿದೆ. ಚರ್ಮ ಸಂಬಂಧಿ ಕಾಯಿಲೆ ಗುಣವಾಗಲು ಮುಡಿ ಕೊಟ್ಟರೆ ಮಾರಿಯಮ್ಮ ಸಂಪ್ರೀತಳಾಗುತ್ತಾಳೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ. (ಗಂಡ ಹೆಂಡತಿ ಅಂತ ಬಂದು 18 ಲಕ್ಷ ದೋಚಿದ್ರು)
ಹಾಗಾಗಿ ಈ ದೇವಾಲಯಕ್ಕೆ ಹುಂಡಿಯಲ್ಲಿ ನಗನಾಣ್ಯ ಬೀಳುವುದಕ್ಕಿಂತ ಜಾಸ್ತಿ, ಭಕ್ತರ ತಲೆಗೂದಲೇ ಆದಾಯದ ಪ್ರಮುಖ ಮೂಲ, ಜೊತೆಗೆ ಕ್ಷೌರಿಕರಿಗೂ ಕೂಡಾ. ಇದನ್ನೆಲ್ಲಾ ಅರಿತಿರುವ ಕಿಲಾಡಿ ದರೋಡೆಕೋರರು ಸಖತ್ ಸ್ಕೆಚ್ ಹಾಕಿದ್ದಾರೆ.
ಚಿನ್ನ, ಬೆಳ್ಳಿ, ದುಡ್ಡಿನ ತಂಟೆಗೆ ಹೋಗದ ದರೋಡೆಕೋರರು ದೇವಾಲಯದಲ್ಲಿ ಹರಾಜು ಹಾಕಲು ಸಂಗ್ರಹಿಸಿಟ್ಟಿದ್ದ ಅಪಾರ ಪ್ರಮಾಣದ ತಲೆಗೂದಲನ್ನು ರಾತ್ರೋರಾತ್ರಿ ಅಬೇಸ್ ಮಾಡಿದ್ದಾರೆ. ಅದು ಒಂದಲ್ಲಾ, ಎರಡಲ್ಲಾ ಬರೋಬ್ಬರಿ 800 ಕೆಜಿ ತಲೆಗೂದಲನ್ನಾ..

ಇನ್ನೊಂದು ವಾರದಲ್ಲಿ ಹರಾಜು ಹಾಕಲು ಸಂಗ್ರಹಿಸಿಟ್ಟಿದ್ದ ಈ ಕೂದಲಿನ ಇಂದಿನ ಮಾರುಕಟ್ಟೆ ಬೆಲೆ ಸುಮಾರು ನಲವತ್ತೈದು ಲಕ್ಷ ರೂಪಾಯಿಯಂತೆ.
ಕದ್ದ ಚಿನ್ನಾಭರಣಗಳನ್ನು ತೆಗೆದುಕೊಳ್ಳಲು ಗಿರವಿ ಅಂಗಡಿಯವರು ಇರ್ತಾರೆ, ಆದರೆ ಈ ಕದ್ದ ಕೂದಲನ್ನು ತೆಗೆದುಕೊಳ್ಳಲು ಯಾರಿರ್ತಾರೆ 'ಆಂಡವಾ' ಎಂದು ಭಕ್ತಾದಿಗಳು ಆಂತಕ ವ್ಯಕ್ತ ಪಡಿಸಿದ್ದೇ ಬಂತು.
ದೇವಾಲಯದ ಪೂಜೆಯ ಹಕ್ಕನ್ನು ಹೊಂದಿರುವ ಐದನೇ ತಲೆಮಾರಿನ ಅರ್ಚಕರಾದ ರಾಮಸ್ವಾಮಿಯವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದಾರೆ.
ಶುಕ್ರವಾರ (ಜುಲೈ 8) ದೈನಂದಿನ ಪೂಜಾ ವಿಧಿವಿಧಾನಕ್ಕೆ ಅರ್ಚಕರು ದೇವಾಲಯದ ಬಾಗಿಲು ತೆಗೆದಾಗ ಈ ಕಳ್ಳತನ ಗಮನಕ್ಕೆ ಬಂದಿದೆ ಎಂದು ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. (ಕಿಲಾಡಿ ಮಂಗ, ಆಭರಣ ಮಳಿಗೆಯಿಂದ ಹಣ ದೋಚಿತು)
ಹರಕೆ ರೂಪದಲ್ಲಿ ಬರುವ ಕೂದಲನ್ನು ಮೂರು ವರ್ಷಗಳಿಂದ ಸಂಗ್ರಹಿಸಲಿಡಲಾಗಿತ್ತು. ಉದ್ದ ಮತ್ತು ವಿನ್ಯಾಸಕ್ಕೆ ಅನುಗುಣವಾಗಿ ಕೂದಲನ್ನು ಪ್ರತ್ಯೇಕಿಸಲಾಗಿತ್ತು. ಮೂರು ವರ್ಷದ ಹಿಂದೆ ನಡೆದ ಹರಾಜಿನಲ್ಲಿ 3.33 ಕೋಟಿ ಆದಾಯ ದೇವಾಲಯಕ್ಕೆ ಬಂದಿತ್ತು ಎನ್ನುವುದು ಅರ್ಚಕರ ಹೇಳಿಕೆ.
ಕೂದಲು ಕದ್ದೊಯ್ಯಲು ಬಂದ ದರೋಡೆಕೋರರಿಗೆ, 800 ಕೆಜಿ ಹೊರತಾಗಿ, ಮೂರು ಕೋಣೆಯಲ್ಲಿ, ಹದಿನಾರು ಗೋಣಿ ಚೀಲದಲ್ಲಿ ಶೇಖರಿಸಿಟ್ಟಿದ್ದ ಕೂದಲು ಕಣ್ಣಿಗೆ ಬೀಳದೇ ಇದ್ದದ್ದನ್ನು ಧಾರ್ಮಿಕ ನಿಟ್ಟಿನಲ್ಲಿ 'ಹೀಗೂ ಉಂಟೇ' ಎಂದು ವ್ಯಾಖ್ಯಾನಿಸಬಹುದೇ?












Click it and Unblock the Notifications