ಐಟಿ ವಲಯಕ್ಕೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ
ಬೆಂಗಳೂರು, ಏಪ್ರಿಲ್ 28 : ಕೇಂದ್ರ ಸರ್ಕಾರ ಐಟಿ ವಲಯಕ್ಕೆ ಸಿಹಿ ಸುದ್ದಿ ನೀಡಿದೆ. ಕಂಪನಿಗಳು ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯವನ್ನು ಜುಲೈ 31ರ ತನಕ ವಿಸ್ತರಣೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
Recommended Video
ಕೇಂದ್ರ ಐಟಿ ಖಾತೆ ಸಚಿವ ರವಿಶಂಕರ್ ಪ್ರಸಾದ್ ಮಂಗಳವಾರ ರಾಜ್ಯಗಳ ಐಟಿ-ಬಿಟಿ ಸಚಿವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ಕರ್ನಾಟಕದ ಪರವಾಗಿ ಪಾಲ್ಗೊಂಡಿದ್ದರು.
ಲಾಕ್ ಡೌನ್ ಸಂದರ್ಭದಲ್ಲಿ ಐಟಿ ಕಂಪನಿ ಉದ್ಯೋಗಿಗಳು ಮನೆಯಿಂದ ಕೆಲಸ ಮಾಡುತ್ತಿದ್ದಾರೆ. ಕಂಪನಿಗಳು ಜುಲೈ 31ರ ತನಕ ಮನೆಯಿಂದಲೇ ಉದ್ಯೋಗಿಗಳು ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು.

ಅಶ್ವತ್ಥ ನಾರಾಯಣ ಅವರು ಐಟಿ ಕ್ಷೇತ್ರ ಲಾಕ್ ಡೌನ್ ಸಂದರ್ಭದಲ್ಲಿ ಎದರಿಸುತ್ತಿರುವ ಸವಾಲುಗಳು, ಅದನ್ನು ಬಗೆಹರಿಸಲು ಕೈಗೊಂಡ ಕ್ರಮಗಳ ಬಗ್ಗೆ ಕೇಂದ್ರ ಸಚಿವರಿಗೆ ವಿವರಣೆಗಳನ್ನು ನೀಡಿದರು.
ಐಟಿ ವಲಯದ ಕಾರ್ಮಿಕರಿಗೆ ಇನ್ನೂ ಒಂದು ವರ್ಷ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ಮಾಡಿಕೊಡಬೇಕು ಎಂದು ಅಶ್ವಶ್ಥ ನಾರಾಯಣ ಬೇಡಿಕೆ ಸಲ್ಲಿಸಿದರು.
ಈ ಬೇಡಿಕೆಗೆ ಸ್ಪಂದಿಸಿದ ರವಿ ಶಂಕರ್ ಪ್ರಸಾದ್ ಅವರು, "ಪ್ರಸ್ತುತ ಸಂದರ್ಭದಲ್ಲಿ ಜುಲೈ 31ರ ತನಕ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಲಾಗುತ್ತದೆ. ಮುಂದಿನ ಪರಿಸ್ಥಿತಿಯನ್ನು ನೋಡಿಕೊಂಡು ತೀರ್ಮಾನ ಕೈಗೊಳ್ಳೋಣ" ಎಂದು ಹೇಳಿದರು.
ದೇಶದ ಐಟಿ ವಲಯದಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ನಗರದ ಕಂಪನಿಗಳು ಈಗಾಗಲೇ ಮನೆಯಿಂದಲೇ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ಸೂಚನೆ ಕೊಟ್ಟಿದೆ. ಮೇ 3ರ ಬಳಿಕ ಕಚೇರಿ ತೆರೆಯುವ ನಿರೀಕ್ಷೆ ಇತ್ತು.












Click it and Unblock the Notifications