ಕೇಂದ್ರ ಬಜೆಟ್ ಅಧಿವೇಶನ: ರಾಷ್ಟ್ರಪತಿ ಭಾಷಣದ ಮುಖ್ಯಾಂಶಗಳು
ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಅಧಿವೇಶನ ಸೋಮವಾರ ಆರಂಭವಾಗಿದ್ದು, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಸಂಸತ್ ನ ಎರಡೂ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಅದರ ಪ್ರಮುಖಾಂಶಗಳು ಇಲ್ಲಿವೆ.
* ಆರ್ಥಿಕ ಹಾಗೂ ಸಾಮಾಜಿಕ ಪ್ರಜಾಪ್ರಭುತ್ವ ಇಲ್ಲದಿದ್ದರೆ ರಾಜಕೀಯ ಪ್ರಜಾಪ್ರಭುತ್ವ ಕೂಡ ಅಸ್ಥಿರವಾಗುತ್ತದೆ ಎಂದು ಅಂಬೇಡ್ಕರ್ ಹೇಳುತ್ತಿದ್ದರು.
* 2018ನೇ ವರ್ಷ ನವ ಭಾರತದ ಕನಸುಗಳನ್ನು ಸಾಕಾರ ಮಾಡಿಕೊಳ್ಳುವುದಕ್ಕಾಗಿ.
* 2019ರಲ್ಲಿ ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನ ಆಚರಿಸಲಿದ್ದೇವೆ. ಆ ಸಂದರ್ಭದಲ್ಲಿ ಇಡೀ ದೇಶವನ್ನು ಸ್ವಚ್ಛ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ.
* ಕಾರ್ಯನಿರತ ಹೆಣ್ಣುಮಕ್ಕಳ ತಾಯ್ತನದ ವೇತನ ಸಹಿತ ರಜಾ ಅವಧಿಯನ್ನು ಇಪ್ಪತ್ತಾರು ವಾರಕ್ಕೆ ಹೆಚ್ಚಿಸುವ ಮಸೂದೆಗೆ ಸಂಸತ್ ಅಂಕಿತ ಹಾಕಿದೆ.
* 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದಕ್ಕೆ ಸರಕಾರ ಬದ್ಧವಾಗಿದೆ.
* ಬ್ರಾಡ್ ಬ್ಯಾಂಡ್ ಮೂಲಕ ಹಳ್ಳಿಗಳನ್ನು ಬೆಸೆಯುವ ಕೆಲಸ ಆರಂಭವಾಗಿದೆ. ಈ ವರೆಗೆ 2.5 ಲಕ್ಷ ಪಂಚಾಯಿತಿಗಳಿಗೆ ಸಂಪರ್ಕ ಕಲ್ಪಿಸಲಾಗಿದೆ.
* 2.70 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳನ್ನು ದೇಶದಾದ್ಯಂತ ಆರಂಭಿಸಲಾಗಿದೆ. ಈ ಕೇಂದ್ರಗಳಲ್ಲಿ ಕಡಿಮೆ ದರದಲ್ಲಿ ಹಲವು ಡಿಜಿಟಲ್ ಸೇವೆಗಳನ್ನು ಒದಗಿಸಲಾಗುತ್ತದೆ. ಅದರಲ್ಲೂ ತೀರಾ ಕುಗ್ರಾಮಗಳಲ್ಲಿ ಸಹ ಸೇವೆ ಒದಗಿಸಲಾಗುತ್ತದೆ.
* ತ್ರಿವಳಿ ತಲಾಖ್ ಮಸೂದೆ ಸದ್ಯದಲ್ಲೇ ಒಪ್ಪಿಗೆ ಪಡೆಯುತ್ತದೆ. ಆಗ ಮುಸ್ಲಿಂ ಮಹಿಳೆಯರು ಗೌರವಯುತವಾದ ಹಾಗೂ ಭಯವಿಲ್ಲದಂಥ ಜೀವನ ನಡೆಸಬಹುದು.
* ಎಲ್ಲರನ್ನೂ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನಾ ಕೆಲಸ ವೇಗ ಪಡೆದುಕೊಂಡಿದೆ. 2014ರಲ್ಲಿ ಶೇ 56ರಷ್ಟು ಹಳ್ಳಿಗಳು ರಸ್ತೆಗಳಿಗೆ ಬೆಸೆದುಕೊಂಡಿದ್ದವು. ಇಂದು 82ರಷ್ಟು ಹಳ್ಳಿಗಳು ರಸ್ತೆ ಸಂಫರ್ಕ ಹೊಂದಿವೆ.
* ನಮ್ಮದು ಯುವಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿರುವ ದೇಶ. ನಮ್ಮ ಸರಕಾರ ಸ್ಟಾರ್ಟ್ ಅಪ್ ಭಾರತ, ಸ್ಟ್ಯಾಂಡ್ ಅಪ್ ಭಾರತ, ಕೌಶಲ ಭಾರತ ಮತ್ತು ಪ್ರಧಾನ ಮಂತ್ರಿ ಮುದ್ರಾ ಯೋಜನಾ ಆರಂಭಿಸಿದೆ. ಇವೆಲ್ಲ ಯುವ ಜನರಿಗೆ ಸಹಾಯ ಮಾಡಲು ಆರಂಭವಾಗಿವೆ. ಅವರ ಕನಸುಗಳನ್ನು ಸಾಕಾರ ಮಾಡಿಕೊಳ್ಳುವುದಕ್ಕೆ, ಸ್ವಂತ ಉದ್ಯೋಗ ಕೈಗೊಳ್ಳುವುದಕ್ಕೆ ಇವುಗಳಿಂದ ನೆರವಾಗುತ್ತದೆ.
* ಸರಕಾರವು ಕಾರ್ಮಿಕರ ಕನಿಷ್ಠ ವೇತನವನ್ನು ಶೇ ನಲವತ್ತರಷ್ಟು ಹೆಚ್ಚಿಸಿದೆ.
* ಕುಂಭ ಮೇಳವನ್ನು ಯುನೆಸ್ಕೋದಿಂದ ಗುರುತಿಸಿದ್ದು, ಮಾನವೀಯತೆ ಸಂಸ್ಕೃತಿ ಪರಂಪರೆಯ ಆಚರಣೆಯಾಗಿ ಗುರುತಿಸಲಾಗಿದೆ. ಅದರ ಜತೆಗೆ ಅಹ್ಮದಾಬಾದ್ ಅನ್ನು ಹೆರಿಟೇಜ್ ಸಿಟಿ, ಚೆನ್ನೈ ಅನ್ನು ಕ್ರಿಯೇಟಿವ್ ಸಿಟಿ ಎಂಬ ಪಟ್ಟಿಗೆ ಸೇರಿಸಲಾಗಿದೆ.
* ಆಧಾರ್ ನ ಸಹಾಯದಿಂದ ಸೌಕರ್ಯಗಳು ಬಡ ಫಲಾನುಭವಿಗಳನ್ನು ನೇರವಾಗಿ ತಲುಪುತ್ತಿವೆ. ನಾನೂರು ನೀತಿ ನಿರೂಪಣೆಯಲ್ಲಿ ಈ ಸರಕಾರ ಡಿಜಿಟಲ್ ವ್ಯವಹಾರವನ್ನು ಜಾರಿಗೆ ತಂದಿದೆ. ಇದರಿಂದ ಐವತ್ತೇಳು ಸಾವಿರ ಕೋಟಿಯನ್ನು ತಪ್ಪಾದ ವ್ಯಕ್ತಿಗಳ ಕೈ ಸೇರುವುದನ್ನು ತಪ್ಪಿಸಲಾಗಿದೆ.
* ಸ್ವಾತಂತ್ರ್ಯಾ ನಂತರ ಎಪ್ಪತ್ತಾರು ವಿಮಾನ ನಿಲ್ದಾಣಗಳು ಮಾತ್ರ ವಾಣಿಜ್ಯ ವಿಮಾನಗಳಿಗಾಗಿ ಇದ್ದವು. ಉಡಾನ್ ಯೋಜನೆ ಅಡಿ ಐವತ್ತಾರು ವಿಮಾನ ನಿಲ್ದಾಣ ಮತ್ತು ಮೂವತ್ತೊಂದು ಹೆಲಿಪ್ಯಾಡ್ ಗಳು ವಾಣಿಜ್ಯ ವಿಮಾನಗಳ ಸಂಪರ್ಕಕ್ಕಾಗಿ ಕೇವಲ ಹದಿನೈದು ತಿಂಗಳಲ್ಲಿ ಆರಂಭಿಸಲಾಗಿದೆ.
* ಕಾರ್ಯಾಚರಣೆ ವೇಳೆ ಹುತಾತ್ಮರಾದ ಸೈನಿಕರ ತ್ಯಾಗವನ್ನು ಸ್ಮರಿಸುತ್ತಾ ಶ್ರದ್ಧಾಂಜಲಿ ಅರ್ಪಿಸುತ್ತೇವೆ. ಜಮ್ಮು ಕಾಶ್ಮೀರ ಪೊಲೀಸರು, ಸೈನ್ಯ ಹಾಗೂ ಪ್ಯಾರಾ ಮಿಲಿಟರಿ ಪಡೆ ಭಯೋತ್ಪಾದನೆ ವಿರುದ್ಧ ಒಟ್ಟಾಗಿ ಹೋರಾಡುತ್ತಿವೆ.
* ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ಮುಂದುವರಿದಿದೆ. ಕಳೆದ ಒಂದು ವರ್ಷದಲ್ಲಿ ಮೂರೂವರೆ ಲಕ್ಷ ಅನುಮಾನಾಸ್ಪದ ಕಂಪೆನಿಗಳ ನೋಂದಣಿ ರದ್ದು ಮಾಡಲಾಗಿದೆ.
* ವಿಧಾನಸಭೆ ಹಾಗೂ ಲೋಕಸಭೆಗೆ ಒಟ್ಟಿಗೆ ಚುನಾವಣೆ ನಡೆಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಎಲ್ಲ ಪಕ್ಷಗಳೂ ಸೇರಿ ಒಂದು ತೀರ್ಮಾನಕ್ಕೆ ಬರಬೇಕು.