ರೈತರ ಆದಾಯ ದ್ವಿಗುಣ, ಶೂನ್ಯ ಬಂಡವಾಳ ಕೃಷಿಗೆ ಒತ್ತು
ನವದೆಹಲಿ, ಜುಲೈ 05: ಮೋದಿ ಸರ್ಕಾರ್ 2.0ನ ಚೊಚ್ಚಲ ಬಜೆಟ್ ನಲ್ಲಿ ಭೂಮಿತಾಯಿಯ ಚೊಚ್ಚಲ ಮಗನಿಗೆ ನಿರೀಕ್ಷೆಯಂತೆ ಹೆಚ್ಚಿನ ಆದ್ಯತೆ ಸಿಕ್ಕಿದೆ. ಭರವಸೆ ನೀಡಿದಂತೆ ರೈತ ವರ್ಗದ ಆದಾಯವನ್ನು ದ್ವಿಗುಣಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದರು.
ವಿತ್ತ ಸಚಿವೆಯಾಗಿ ಮೊದಲ ಬಾರಿಗೆ ನಿರ್ಮಲ ಸೀತಾರಾಮನ್ ಅವರು ಶುಕ್ರವಾರದಂದು ಬಜೆಟ್ ಮಂಡನೆ ಮಾಡಿದ್ದು, ರೈತ ಸಮೂಹಕ್ಕೆ ಭರ್ಜರಿ ಕೊಡುಗೆ ಘೋಷಿಸಲಾಗಿದೆ.
10 ಸಾವಿರ ರೈತ ಉತ್ಪಾದಕ ಸಂಸ್ಥೆಗಳ ಸ್ಥಾಪನೆ ಮಾಡಲಾಗುತ್ತಿದೆ. ಪ್ರಧಾನಮಂತ್ರಿ ಕಿಸಾನ್ ಯೋಜನೆಯನ್ನು ಪ್ರಸಕ್ತ ಸಾಲಿಗೂ ಮುಂದುವರೆಸಲಾಗುತ್ತಿದ್ದು, ವಾರ್ಷಿಕ 6 ಸಾವಿರ ರುಗಳನ್ನು ಸರ್ಕಾರ ನೀಡುತ್ತಿದ್ದು, 14.5 ಕೋಟಿ ರೈತರಿಗೆ ಇದರ ಪ್ರಯೋಜನೆ ಸಿಗಲಿದೆ.

ಮುಖ್ಯ ಬೆಳೆ ಹಾಗೂ ಮಧ್ಯಂತರ ಬೆಳೆಯಿಂದ ಗಳಿಸುವ ಆದಾಯದ ಸಮತೋಲನ ಕಾಯ್ದುಕೊಳ್ಳಲು 'ಶೂನ್ಯ ಬಂಡವಾಳ ಹೂಡಿಕೆ' ಕೃಷಿಗೆ ಒತ್ತು ನೀಡಲಾಗುತ್ತಿದೆ. ರಾಸಾಯನಿಕಗಳ ಬಳಕೆಯನ್ನು ವರ್ಜಿಸಿ, ಸಗಣಿಯಿಂದ ತಯಾರಿಸಿದ ಗೊಬ್ಬರ, ಗೋಮೂತ್ರ ಬಳಕೆಗೆ ಆದ್ಯತೆ. ಆಂಧ್ರಪ್ರದೇಶದಲ್ಲಿ ಸದ್ಯ ಜಾರಿಯಲ್ಲಿರುವ ಪದ್ಧತಿಯನ್ನು ಎಲ್ಲೆಡೆ ಜಾರಿಗೊಳಿಸಲಾಗುತ್ತದೆ.
* ಕ್ಲಸ್ಟರ್ ಮಾದರಿ ಪದ್ಧತಿ ಮೂಲಕ ಸಾಂಪ್ರದಾಯಿಕ ಆಗ್ರೋ ಕೈಗಾರಿಕೆಗಳನ್ನು ಹೆಚ್ಚು ಉತ್ಪಾದನಾಯುಕ್ತವಾಗಿ ಮಾಡಲು ಯೋಜನೆ ರೂಪಿಸಲಾಗಿದೆ.
* ಸಂಪುಟ ಸಭೆಯಲ್ಲಿ ಸಮ್ಮತಿ ಪಡೆದಂತೆ ಪ್ರಧಾನಮಂತ್ರಿ ಕಿಸಾನ್ ಪಿಂಚಣಿ ಯೋಜನೆ ಜಾರಿಗೊಳಿಸಲಾಗಿದೆ. ಮಾಸಿಕ 3000 ರೂ. ಪಿಂಚಣಿ ನೀಡುವ ಮಹತ್ವದ ಯೋಜನೆಯಾಗಿದೆ.
* ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ(PMKSS) ಅಡಿಯಲ್ಲಿ 60 ವರ್ಷ ಮೇಲ್ಪಟ್ಟ ರೈತರಿಗೆ ಪ್ರತಿ ತಿಂಗಳಿಗೆ 3000 ರೂ.ಗಳನ್ನು ಕೇಂದ್ರ ಸರ್ಕಾರದಿಂದ ನೀಡಲಾಗುತ್ತದೆ.
* 12.5 ಕೋಟಿ ಸಣ್ಣ ಹಾಗೂ ಮಧ್ಯಮ ರೈತರಿಗೆ (2 ಹೆಕ್ಟೇರ್) ವಾರ್ಷಿಕ 6000 ರೂ(ಮೂರು ಕಂತಿನಲ್ಲಿ). ನೀಡಲಾಗುತ್ತದೆ
* ಮೊದಲ ಕಂತಿನಲ್ಲಿ 3.11 ಕೋಟಿ ರೈತರಿಗೆ ಹಾಗೂ ಎರಡನೇ ಕಂತಿನಲ್ಲಿ 2.66 ಕೋಟಿ ರೈತರಿಗೆ ಸೌಲಭ್ಯ ಸಿಗಲಿದೆ.












Click it and Unblock the Notifications