ಉಕ್ರೇನ್ನಿಂದ ಭಾರತೀಯರ ಸ್ಥಳಾಂತರ ಪ್ರಕ್ರಿಯೆಗೆ ವಾಯುಪಡೆ ಬೆಂಬಲ
ನವದೆಹಲಿ, ಮಾರ್ಚ್ 02: ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆಯಲ್ಲಿ ಭಾರತೀಯ ವಾಯುಪಡೆ ಕೂಡಾ ಬೆಂಬಲ ನೀಡಿದೆ. ಭಾರತೀಯ ವಾಯುಪಡೆಯ (ಐಎಎಫ್) ಸಿ-17 ವಿಮಾನವು ಬುಧವಾರ ಮುಂಜಾನೆ ರೊಮೇನಿಯಾಗೆ ಹೊರಟಿದೆ. ಮುಂಜಾನೆ 4 ಗಂಟೆ ಸುಮಾರಿಗೆ ಹಿಂಡನ್ ವಾಯುನೆಲೆಯಿಂದ ವಿಮಾನ ಟೇಕಾಫ್ ಆಗಿದೆ.
ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರುವ ಪ್ರಯತ್ನಗಳನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ವಾಯುಪಡೆಯ ಸಹಾಯವು ಉಕ್ರೇನ್ನಿಂದ ಭಾರತೀಯರನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆಯನ್ನು ಸುಲಭಗೊಳಿಸಲಿದೆ ಎಂದು ಹೇಳಿದ್ದರು. ಆಪರೇಷನ್ ಗಂಗಾ ಅಡಿಯಲ್ಲಿ ಉಕ್ರೇನ್ನಿಂದ ಭಾರತೀಯರ ಸ್ಥಳಾಂತರ ಪ್ರಯತ್ನಗಳಿಗೆ ಜೊತೆಯಾಗಲು ಭಾರತೀಯ ವಾಯುಪಡೆಗೆ ಮನವಿ ಮಾಡಿದ್ದರು ಎಂದು ವರದಿಯಾಗಿದೆ.
ವಾಯುಪಡೆಯ ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಳ್ಳುವುದರಿಂದ ಕಡಿಮೆ ಸಮಯದಲ್ಲಿ ಹೆಚ್ಚಿನ ಜನರನ್ನು ಸ್ಥಳಾಂತರಿಸಬಹುದು ಮತ್ತು ಇದು ಮಾನವೀಯ ಸಹಾಯವನ್ನು ಹೆಚ್ಚು ಪರಿಣಾಮಕಾರಿಯಾಗಿ ತಲುಪಿಸಲು ಸಹಾಯ ಮಾಡುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿದೆ.

ಫೆಬ್ರವರಿ 24 ರಂದು ರಷ್ಯಾದ ಪಡೆಗಳು ಉಕ್ರೇನ್ನಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ, ಸಂಘರ್ಷ ಪೀಡಿತ ಉಕ್ರೇನ್ನಿಂದ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಮರಳಿ ಕರೆತರಲು ಭಾರತ ಸರ್ಕಾರವು 'ಆಪರೇಷನ್ ಗಂಗಾ'ವನ್ನು ಪ್ರಾರಂಭಿಸಿತು. 'ಆಪರೇಷನ್ ಗಂಗಾ' ಮಿಷನ್ನ ಭಾಗವಾಗಿ ವಿಶೇಷ ವಿಮಾನಗಳ ಮೂಲಕ ಉಕ್ರೇನ್ನಲ್ಲಿ ಬಾಕಿಯಾಗಿರುವ ಭಾರತೀಯರನ್ನು ಉಚಿತವಾಗಿ, ಸರ್ಕಾರದ ವೆಚ್ಚದಲ್ಲಿ ವಾಪಾಸ್ ಕರೆತರಲಾಗುತ್ತದೆ. ಉಕ್ರೇನ್ನಲ್ಲಿ ಸಿಲುಕಿದ್ದ 219 ಭಾರತೀಯ ಪ್ರಜೆಗಳನ್ನು ಹೊತ್ತು ಮೊದಲ ವಿಮಾನ ಫೆಬ್ರವರಿ 26 ರಂದು ಮುಂಬೈಗೆ ಬಂದಿಳಿಯಿತು. ಸದ್ಯ ಹಲವಾರು ಬಾರಿ ಈ ಕಾರ್ಯಾಚರಣೆ ನಡೆದಿದೆ.
ಪೋಲೆಂಡ್, ರೊಮೇನಿಯಾ, ಹಂಗೇರಿ ಮತ್ತು ಸ್ಲೋವಾಕಿಯಾ ಗಡಿ ದಾಟಿದ ಬಳಿಕ ಭಾರತೀಯ ಪ್ರಜೆಗಳನ್ನು ಭಾರತಕ್ಕೆ ಕರೆತರಲಾಗುತ್ತಿದೆ. ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಸಹಾಯ ಮಾಡಲು 24×7 ನಿಯಂತ್ರಣ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮೊಲ್ಡೊವಾ ಮೂಲಕ ಹೊಸ ಮಾರ್ಗವನ್ನು ತೆರೆಯಲಾಗಿದೆ. ಈಗಾಗಲೇ ಎಂಇಎ ತಂಡವು ಮೊಲ್ಡೊವಾದಲ್ಲಿದೆ. ರೊಮೇನಿಯಾ ಮೂಲಕ ಭಾರತೀಯರನ್ನು ಸ್ಥಳಾಂತರಿಸಲು ತಂಡವು ಸಹಾಯ ಮಾಡಲಿದೆ.
ಆಪರೇಷನ್ ಗಂಗಾ ಟ್ವಿಟ್ಟರ್ ಖಾತೆ
ಆಪರೇಷನ್ ಗಂಗಾ ಕಾರ್ಯಾಚರಣೆಗೆ ಸಹಾಯ ಮಾಡಲು ಟ್ವಿಟ್ಟರ್ ಖಾತೆಯನ್ನು ಕೂಡಾ ಆರಂಭ ಮಾಡಲಾಗಿದೆ. (@opganga). ಈ ಟ್ವಿಟ್ಟರ್ ಖಾತೆಯಲ್ಲಿ ಯಾವುದೇ ತುರ್ತು ಮಾಹಿತಿಯನ್ನು ನೀಡಲಾಗುತ್ತದೆ. ಗಡಿ ಪೋಸ್ಟ್ಗಳಲ್ಲಿ ಸರ್ಕಾರಿ ಅಧಿಕಾರಿಗಳೊಂದಿಗೆ ಮೊದಲೇ ಮಾತುಕತೆ ನಡೆಸದೆ ಯಾವುದೇ ಗಡಿ ಚೆಕ್ಪೋಸ್ಟ್ಗಳಿಗೆ ತೆರಳದಂತೆ ಕೀವ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾರತೀಯ ನಾಗರಿಕರಿಗೆ ಸಲಹೆ ನೀಡಿದೆ.
ಇಂದು ಉಕ್ರೇನ್ನಲ್ಲಿರುವ ಭಾರತೀಯರಿಗೆ ತುರ್ತು ಸಲಹೆಯನ್ನು ಆಪರೇಷನ್ ಗಂಗಾ ಟ್ವಿಟ್ಟರ್ ಖಾತೆಯ ಮೂಲಕ ನೀಡಲಾಗಿದೆ. ಪೋಲೆಂಡ್ ಸಮೀಪಕ್ಕೆ ತೆರಳದೆ ಹಂಗೇರಿ ಅಥವಾ ರೋಮೆನಿಯಾ ಗಡಿಗೆ ತೆರಳುವಂತೆ ತಿಳಿಸಲಾಗಿದೆ. ಹಾಗೆಯೇ ಶೆಹೈನಿ-ಮೆಡಿಕಾ ಗಡಿ ಮೂಲಕ ಬರದಂತೆ ಸಲಹೆ ನೀಡಲಾಗಿದೆ.
ಸ್ಥಳಾಂತರ ಪ್ರಕ್ರಿಯೆ ನೋಡಿಕೊಳ್ಳಲು ನಾಲ್ಕು ವಿಶೇಷ ರಾಯಭಾರಿಗಳನ್ನು ಭಾರತ ಸರ್ಕಾರ ನೇಮಿಸಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹಂಗೇರಿಯಲ್ಲಿ, ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಸ್ಲೋವಾಕಿಯಾದಲ್ಲಿ, ಜನರಲ್ (ನಿವೃತ್ತ) ವಿಕೆ ಸಿಂಗ್ ಪೋಲೆಂಡ್ನಲ್ಲಿ ಮತ್ತು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ರೊಮೇನಿಯಾದಲ್ಲಿ ಇದ್ದಾರೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications