ನೋಟ್ ಬ್ಯಾನ್ಗೆ 2 ವರ್ಷ: ಅರುಣ್ ಜೇಟ್ಲಿ ನೀಡಿದರು ಅಂಕಿ-ಅಂಶ
ನವದೆಹಲಿ, ನವೆಂಬರ್ 08: ನೋಟು ರದ್ಧತಿ ನಿರ್ಧಾರಕ್ಕೆ ಇಂದು ಎರಡು ವರ್ಷ ಆಗಿರುವ ಕಾರಣ ಕೇಂದ್ರ ಹಣಕಾಸು ಸಚಿವ ಅಪನಗದೀಕರಣದಿಂದ ಆಗಿರುವ ಲಾಭಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದಾರೆ.
ನೋಟು ರದ್ಧತಿಯ ಬಳಿಕ 2018-19 ನೇ ಹಣಕಾಸು ವರ್ಷದಲ್ಲಿ ತೆರಿಗೆ ಸಂಗ್ರಹವು ಭಾರಿ ಹೆಚ್ಚಳ ಕಂಡಿದೆ. ಕಳೆದ ಹಣಕಾಸು ವರ್ಷಕ್ಕಿಂತಲೂ ಈ ಬಾರಿ 20.2% ಪಟ್ಟು ಹೆಚ್ಚು ತೆರಿಗೆ ಸಂಗ್ರಹವಾಗಿದೆ ಎಂದು ಅರುಣ್ ಜೇಟ್ಲಿ ಮಾಹಿತಿ ನೀಡಿದರು.
ಅಪನಗದೀಕರಣಕ್ಕೆ 2 ವರ್ಷ: ಕಪ್ಪುಹಣದ ಬಗ್ಗೆ ಜನಾಭಿಪ್ರಾಯ ಬಹಿರಂಗ
ಆದಾಯ ತೆರಿಗೆ ಮಾತ್ರವಲ್ಲದೆ ಕಾರ್ಪೊರೇಟ್ ತೆರಿಗೆ ಕೂಡ ಭಾರಿ ಹೆಚ್ಚಳ ಕಂಡಿದ್ದು, ಕಳೆದ ವರ್ಷಕ್ಕಿಂತಲೂ ಈ ಹಣಕಾಸು ವರ್ಷದಲ್ಲಿ 19.5% ಪ್ರತಿಶತ ಹೆಚ್ಚಳವಾಗಿದೆ. ನೇರ ತೆರಿಗೆ ಸಂಗ್ರಹದಲ್ಲಿ ಮೊದಲ ವರ್ಷ 6.6% ಹೆಚ್ಚಳ ಆದರೆ ಎರಡನೇ ವರ್ಷದಲ್ಲಿ 9% ಹೆಚ್ಚಳ ಆಗಿದೆ ಎಂದು ಜೇಟ್ಲಿ ಮಾಹಿತಿ ನೀಡಿದ್ದಾರೆ.
ಹಣಕಾಸು ಅಪರಾಧಿಗಳಿಗೆ ಶಿಕ್ಷೆ
ಅಪನಗದೀಕರಣ ವೇಳೆ ಅಧಿಕ ಆಸ್ತಿ ಹೊಂದಿದ್ದವರಿಗೆ, ಹಣಕಾಸು ತಪ್ಪಿತಸ್ತರು ಎಂದು ಗೊತ್ತಾದವರಿಗೆ ಶಿಕ್ಷೆ ಆಗಿದೆ ಎಂದ ಅವರು, ಅಪನಗದೀಕರಣ ನಂತರ ಬ್ಯಾಂಕುಗಳಿಗೆ ಶಕ್ತಿ ಬಂದಿವೆ, ಅವು ಹೆಚ್ಚು ಸಾಲ ನೀಡುವ ಶಕ್ತಿ ಪಡೆದುಕೊಂಡಿವೆ ಎಂದು ಹೇಳಿದರು.
ಅಪನಗದೀಕರಣವನ್ನು ಅನಾಹುತ ಎಂದು ಕರೆದು ಅಂಕಿ-ಅಂಶ ತೆರೆದಿಟ್ಟ ಚಿದಂಬರಂ
ದಾಸ್ತಾನು ಮಾಡಿದ್ದ ಹಣ ಚಲಾವಣೆಗೆ
ಬ್ಯಾಂಕ್ಗಳ ಸಂಪರ್ಕಕ್ಕೆ ಬಾರದೆ ದಾಸ್ತಾನು ಮಾಡಲ್ಪಟ್ಟಿದ್ದ ಹಣ ಬ್ಯಾಂಕಿಗೆ ಸೇರಿ ಆ ಮೂಲಕ ಹಣಕಾಸು ವಲಯಕ್ಕೆ ಸೇರಿಕೊಂಡಿತು, ಅಧಿಕ ಮೊತ್ತವನ್ನು ಬ್ಯಾಂಕುಗಳಿಗೆ ಡೆಪಾಸಿಟ್ ಮಾಡಿದ 17.42 ಲಕ್ಷ ಜನರಿಗೆ ನೊಟೀಸ್ ನೀಡಿ ಉತ್ತರ ಪಡೆದುಕೊಳ್ಳಲಾಗಿದೆ. ಇದನ್ನು ಸೌಮ್ಯರೀತಿಯಲ್ಲಿ ನಿರ್ವಹಿಸಲಾಗಿದೆ ಎಂದು ಜೇಟ್ಲಿ ಮಾಹಿತಿ ನೀಡಿದರು.
ಮೋದಿ ಸರಕಾರದ ಡಿಜಿಟಲ್ ವ್ಯವಹಾರದ ಜಾದೂ ಭಾರತವನ್ನು ಬದಲಿಸಿದ್ದು ಹೇಗೆ?
ಅಪನಗದೀಕರಣ ಅತ್ಯಂತ ಮಹತ್ವದ ನಿರ್ಧಾರ
ಅಪನಗದೀಕರಣವು ಕೇಂದ್ರ ಸರ್ಕಾರ ಇಷ್ಟು ವರ್ಷ ತೆಗೆದುಕೊಂಡಿರುವ ನಿರ್ಧಾರಗಳಲ್ಲಿ ಅತ್ಯಂತ ಪ್ರಮುಖ ಮತ್ತು ಯಶಸ್ವಿಯಾದದ್ದು ಎಂದು ನೋಟ್ ಬ್ಯಾನ್ ಅನ್ನು ಸಮರ್ಥಿಸಿಕೊಂಡ ಅರುಣ್ ಜೇಟ್ಲಿ ಇದರಿಂದ ಭಾರತದ ಆರ್ಥಿಕತೆಗೆ ಬಲ ಬಂದಿತು ಎಂದು ಹೇಳಿದರು.
ವಿದೇಶದ ಕಪ್ಪು ಹಣ ಸರ್ಕಾರದ ಗುರಿ ಆಗಿತ್ತು
ಸರ್ಕಾರವು ಮೊದಲಿಗೆ ವಿದೇಶದಲ್ಲಿರುವ ಕಪ್ಪುಹಣವನ್ನು ಗುರಿಯಾಗಿಸಿಕೊಂಡಿತು, ಅದನ್ನು ತೆರಿಗೆ ಒಳಕ್ಕೆ ತರಲು ಯಶಸ್ವಿಯಾಯಿತು, ಯಾರು ತೆರಿಗೆ ವ್ಯಾಪ್ತಿಗೆ ಬರಲಿಲ್ಲವೋ ಅವರ ಮೇಲೆ ಕಪ್ಪುಹಣ ಆರೋಪ ಹೊರಿಸಲಾಯಿತು, ಅವರ ವಿದೇಶಿ ಆಸ್ತಿ ಮತ್ತು ಬ್ಯಾಂಕ್ ಖಾತೆಗಳನ್ನು ಜಪ್ತು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.