ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ : ಸರ್ಕಾರಕ್ಕೆ ಬೇಕು, ಆಯೋಗಕ್ಕೆ ಬೇಡ!
ನವದೆಹಲಿ, ಜುಲೈ 19: ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದರ ಬಗ್ಗೆ ತಕಾರರು ಅರ್ಜಿಯನ್ನು ಸುಪ್ರೀಂಕೋರ್ಟ್ ಕೈಗೊಂಡಿದೆ. ಈ ರೀತಿ ಸ್ಪರ್ಧಿಸುವುದರಿಂದ ಯಾವುದೇ ತೊಂದರೆಯಿಲ್ಲ ಎಂದು ಕೇಂದ್ರ ಸರ್ಕಾರ ತಮ್ಮ ಅಭಿಪ್ರಾಯ ಮಂಡಿಸಿದರೆ, ಚುನಾವಣಾ ಆಯೋಗ ಮಾತ್ರ ಈ ವ್ಯವಸ್ಥೆಗೆ ವಿರುದ್ಧವಾಗಿದೆ.
ಇತ್ತೀಚೆಗೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು, ಚಾಮುಂಡೇಶ್ವರಿ ಹಾಗೂ ಬಾದಾಮಿ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಬಿ ಶ್ರೀರಾಮುಲು ಅವರು ಮೊಳಕಾಲ್ಮೂರು ಹಾಗೂ ಬಾದಾಮಿ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದಿಂದ ಗೆಲುವು ಸಾಧಿಸಿದರು.
ಒಬ್ಬ ಅಭ್ಯರ್ಥಿಗೆ ಒಂದೇ ಕ್ಷೇತ್ರ: ಒಬ್ಬ ಅಭ್ಯರ್ಥಿ ಒಂದೇ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ನಿಯಮ ಬಂದರೆ, ವ್ಯಕ್ತಿಯ ಸ್ಪರ್ಧಾ ಹಕ್ಕನ್ನು ಕಸಿದ್ದಂತಾಗುತ್ತದೆ. ಈ ನಿಯಮ ತರಲು ಹೊಸ ನಿಯಮಾವಳಿ, ಕಾನೂನಿನ ತಿದ್ದುಪಡಿಯೂ ಅಗತ್ಯ ಎಂದು ಸುಪ್ರೀಂಕೋರ್ಟಿಗೆ ಕೇಂದ್ರ ಸರ್ಕಾರ ಹೇಳಿದೆ.

ಆದರೆ, ಅಭ್ಯರ್ಥಿಗಳು ಎರಡು ಕ್ಷೇತ್ರಗಳಿಂದ ಮಾತ್ರ ಸ್ಪರ್ಧಿಸಲು ಅವಕಾಶ ನೀಡುವ ನಿಯಮವುಳ್ಳ 1951ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 33(7) ಅನ್ನು ಕೇಂದ್ರ ಸರ್ಕಾರ ಬೆಂಬಲಿಸಿದೆ. ಎರಡಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ವಾದಿಸಿದೆ. ಕಾಯ್ದೆಗೆ ತಿದ್ದುಪಡಿ ಮಾಡಿದ್ದರಿಂದ ಈ ನಿಯಂತ್ರಣ ಸಾಧ್ಯವಾಗಿದೆ.
ಆಯೋಗದ ವಾದ: ಎರಡು ಕ್ಷೇತ್ರದಿಂದ ಸ್ಪರ್ಧಿಸುವುದನ್ನು ಆಯೋಗ ವಿರೋಧಿಸಿದ್ದು, 2004ರಲ್ಲೇ ಚುನಾವಣಾ ಪ್ರಕ್ರಿಯೆ ತಿದ್ದುಪಡಿಗೆ ಆಗ್ರಹಿಸಿತ್ತು. ಒಂದು ವೇಳೆ ಅಭ್ಯರ್ಥಿಯು ಎರಡು ಕ್ಷೇತ್ರಗಳಲ್ಲೂ ಗೆದ್ದು, ಒಂದು ಕ್ಷೇತ್ರವನ್ನು ಉಳಿಸಿಕೊಂಡರೆ, ಮತ್ತೊಂದು ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸಬೇಕಾಗುತ್ತದೆ
ಅನಗತ್ಯ ಉಪ ಚುನಾವಣೆ ಹೇರಿಕೆಯಿಂದ ಹೆಚ್ಚುವರಿ ಖರ್ಚು, ಹೊರೆ ಬೀಳುತ್ತದೆ. ಆಯೋಗಕ್ಕೆ ಸಿಬ್ಬಂದಿಗಳ ಕೊರತೆಯು ಎದುರಾಗುತ್ತದೆ. ಒಂದು ವೇಳೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಕ್ಕೆ ಕಡಿವಾಣ ಹಾಕಲು ಸಾಧ್ಯವಾಗದಿದ್ದರೆ, ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಬಯಸುವ ಅಭ್ಯರ್ಥಿಯು ಅಸೆಂಬ್ಲಿ ಚುನಾವಣೆಯಾದರೆ 5 ಲಕ್ಷ ರು ಹಾಗೂ ಲೋಕಸಭೆ ಚುನಾವಣೆಯಾದರೆ 10 ಲಕ್ಷ ರು ಠೇವಣಿ ಇಡಬೇಕು. ಇದನ್ನು ಮುಂದಿನ ಉಪ ಚುನಾವಣೆ ನಡೆಸಲು ಬಳಸಲಾಗುವುದು ಎಂದು ಚುನಾವಣಾ ಅಯೋಗ ಹೇಳಿದೆ.












Click it and Unblock the Notifications