ಪಾಕ್ ದಾಳಿಗೆ ಭಾರತ ಪ್ರತಿ ದಾಳಿ, ಇಬ್ಬರು ಪಾಕ್ ಸೈನಿಕರು ಉಡೀಸ್
ಶ್ರೀನಗರ, ಜೂನ್ 15 : ಜಮ್ಮು ಕಾಶ್ಮೀರದ ರಜೌರಿ ಮತ್ತು ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಗುರುವಾರ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಪ್ರತಿ ದಾಳಿ ನಡೆಸಿದ ಭಾರತೀಯ ಸೇನೆ ಪಾಕ್ ನ ಇಬ್ಬರು ಸೈನಿಕರನ್ನು ಹೊಡೆದುರುಳಿಸಿದೆ.
ಪಾಕಿಸ್ತಾನ ಪಡೆ ಸೇನಾ ನೆಲೆಗಳು ಹಾಗೂ ನಾಗರಿಕ ವಸತಿ ಪ್ರದೇಶಗಳನ್ನು ಗುರಿಯಾಗಿರಿಸಿ ಷೆಲ್, ಮಾರ್ಟರ್ ಬಾಂಬ್ ಮತ್ತು ಸಣ್ಣ ಪ್ರಮಾಣದ ಗುಂಡಿನ ದಾಳಿ ನಡೆಸಿದೆ.
ಜನವರಿ ಒಂದರಿಂದ ಈಚೆಗೆ ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಒಟ್ಟು 14 ಬಾರಿ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿದ್ದು, ಒಬ್ಬ ನಾಗರಿ ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ.
ಪಾಕ್ ದಾಳಿಗೆ ಭಾರತೀಯ ಪಡೆ ಪ್ರತಿದಾಳಿ ನಡೆಸಿದ್ದು, ಭಿಂಬೊರೆ ಗಲಿ ವಲಯದಲ್ಲಿ ಇಬ್ಬರು ಪಾಕಿಸ್ತಾನ ಸೈನಿಕರನ್ನು ಹೊಡೆದುರುಳಿಸಿದೆ ಎಂದು ಸೇನೆ ಮೂಲಗಳು ತಿಳಿಸಿವೆ.
ಪಾಕಿಸ್ತಾನ ಸೇನೆ ನೌಶೆರಾ ವಲಯ ಮತ್ತು ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಅಪ್ರಚೋದಿತ ದಾಳಿ ನಡೆಸುತ್ತಿದ್ದು, ಮಾರ್ಟರ್ ಷೆಲ್ ಗಳು, ಸಣ್ಣ ಶಸ್ತ್ರಾಸ್ತ್ರ, ಸ್ವಯಂ ಚಾಲಿತ ಬಂದೂಕುಗಳ ಮೂಲಕ ಗುಂಡಿನ ದಾಳಿ ಮಾಡಿದೆ. ಭಾರತೀಯ ಸೇನೆ ಪ್ರತಿ ದಾಳಿ ನಡೆಸಿದೆ ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಮನೀಶ್ ಮೆಹ್ತಾ ತಿಳಿಸಿದ್ದಾರೆ.