ಏರ್ಪೋರ್ಟ್ನಲ್ಲೇ ತಿರುಪತಿ ವಿಐಪಿ ದರ್ಶನ ಟಿಕೆಟ್ ಪಡೆಯಿರಿ
ಅಮರಾವತಿ, ಡಿಸೆಂಬರ್ 18; ತಿರುಪತಿಯಲ್ಲಿ ವಿಐಪಿ ಟಿಕೆಟ್ ಮೂಲಕ ದರ್ಶನ ಪಡೆಯುವ ಭಕ್ತರಿಗೆ ಟಿಟಿಡಿ ಸಿಹಿಸುದ್ದಿ ನೀಡಿದೆ. ದೇಶದ ವಿವಿಧ ರಾಜ್ಯಗಳಿಂದ ಲಕ್ಷಾಂತರ ಭಕ್ತರು ದೇವರ ದರ್ಶನಕ್ಕೆ ಆಗಮಿಸುತ್ತಾರೆ.
ಆಂಧ್ರ ಪ್ರದೇಶದ ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ವಿಮಾನ ನಿಲ್ದಾಣದಲ್ಲಿಯೇ ವಿಐಪಿ ಟಿಕೆಟ್ ಪಡೆಯಲು ವ್ಯವಸ್ಥೆ ಮಾಡಿದೆ. ಏರ್ಪೋರ್ಟ್ಗೆ ಬಂದಿಳಿದ ಜನರು ಅಲ್ಲಿಯೇ ದೇವರ ದರ್ಶನಕ್ಕೆ ಟಿಕೆಟ್ ಪಡೆಯಬಹುದಾಗಿದೆ.
ತಿರುಪತಿ ಸಂಸದ ಎಂ. ಗುರುಮೂರ್ತಿ ಟಿಟಿಡಿ ಮುಖ್ಯಸ್ಥರು, ಕಾರ್ಯಕಾರಿ ನಿರ್ದೇಶಕರಿಗೆ ತಿರುಪತಿ ವಿಮಾನ ನಿಲ್ದಾಣದಲ್ಲಿ ವಿಐಪಿ ಟಿಕೆಟ್ ನೀಡಲು ಕೌಂಟರ್ ಆರಂಭಿಸುವಂತೆ ಮನವಿ ಮಾಡಿದ್ದರು. ಈ ಬೇಡಿಕೆಗೆ ಒಪ್ಪಿಗೆ ನೀಡಲಾಗಿದೆ.

ಆಂಧ್ರ ಪ್ರದೇಶದ ತಿರುಪತಿ ವಿಮಾನ ನಿಲ್ದಾಣದಲ್ಲಿ ವಿಐಪಿ ಟಿಕೆಟ್ ನೀಡಲು ಪ್ರತ್ಯೇಕ ಕೌಂಟರ್ ಸ್ಥಾಪನೆ ಮಾಡಲಾಗಿದೆ. ವಿಮಾನದಲ್ಲಿ ತಿರುಪತಿಗೆ ಆಗಮಿಸಿದ ಭಕ್ತರು ವಿಮಾನ ನಿಲ್ದಾಣದಲ್ಲಿಯೇ ವಿಐಪಿ ದರ್ಶನದ ಟಿಕೆಟ್ ಖರೀದಿ ಮಾಡಬಹುದಾಗಿದೆ.
ಈ ಸೇವೆಯಿಂದ ವಿಐಪಿ ಟಿಕೆಟ್ ಪಡೆಯಲು ಕಾಯುವುದು, ಅಲೆದಾಡುವುದು ತಪ್ಪಲಿದೆ. ಶ್ರೀವಾನಿ ಟ್ರಸ್ಟ್ಗೆ ದೇಣಿಗೆ ನೀಡಲು, ವಿಐಪಿ ದರ್ಶನದ ಟಿಕೆಟ್ ನೀಡುವ ಸಲುವಾಗಿಯೇ ಕೌಂಟರ್ ಆರಂಭಿಸಲಾಗಿದೆ.

ಅತಿ ಶ್ರೀಮಂತ ದೇವಾಲಯವಾಗಿರುವ ಟಿಟಿಡಿ ಟ್ರಸ್ಟ್ ನವೆಂಬರ್ನಲ್ಲಿ ಆಸ್ತಿ ಘೋಷಣೆ ಮಾಡಿತ್ತು. 10.3 ಟನ್ ಚಿನ್ನದ ಸಂಗ್ರಹವಿದೆ. 15,938 ಕೋಟಿ ಹಣ ಜಮೆ ಮಾಡಲಾಗಿದೆ ಎಂದು ಹೇಳಿತ್ತು. ಟಿಟಿಡಿ ಟ್ರಸ್ಟ್ ದೇಶಾದ್ಯಂತ 960 ಆಸ್ತಿಗಳನ್ನು ಹೊಂದಿದ್ದು, ಇದರ ಮೌಲ್ಯ ಸುಮಾರು 8,5705 ಕೋಟಿ ಆಗಿದೆ.
ವಸತಿ ಸಮಸ್ಯೆ ಆರಂಭ; ಡಿಸೆಂಬರ್ 1ರಿಂದ ಜಾರಿಗೆ ಬರುವಂತೆ ತಿರುಪತಿಯಲ್ಲಿ ವಿಐಪಿ ದರ್ಶನದ ಸಮಯ ಬದಲಾವಣೆ ಮಾಡಲಾಗಿದೆ. ತಿರುಪತಿ ವೆಂಕಟೇಶ್ವರನ ದರ್ಶನಕ್ಕೆ ಮುಂಜಾನೆ ಬರುವ ಭಕ್ತರಿಗೆ ಅನುಕೂಲ ಮಾಡಿಕೊಡಲು ಪ್ರಾಯೋಗಿಕವಾಗಿ ವಿಐಪಿ ದರ್ಶನದ ಸಮಯ ಬದಲಾಯಿಸಲಾಗಿದೆ.
ಆದರೆ ವಿಐಪಿ ದರ್ಶನ ನಿಯಮದಲ್ಲಿ ಬದಲಾವಣೆ ಮಾಡಿದ ಬಳಿಕ ವಸತಿ ಸಮಸ್ಯೆ ಎದುರಾಗಿದೆ. ವಿಐಪಿ ದರ್ಶನ ಮುಗಿಸಿಕೊಂಡು ಭಕ್ತರು ವಸತಿ ವ್ಯವಸ್ಥೆ ಖಾಲಿ ಮಾಡುವುದು ಮಧ್ಯಾಹ್ನವಾಗಿದ್ದು, ಇದರಿಂದ ಸಾಮಾನ್ಯ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ರೂಂಗಳು ಸಿಗುತ್ತಿಲ್ಲ.
ಈಗ ವಿಐಪಿ ದರ್ಶನದ ಸಮಯವನ್ನು ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯ ತನಕ ನಿಗದಿ ಮಾಡಲಾಗಿದೆ. ಉಚಿತ ದರ್ಶನಕ್ಕೆ ಬರುವ ಭಕ್ತರಿಗೆ ಅನುಕೂಲ ಮಾಡಿಕೊಡಲು ಈ ತೀರ್ಮಾನ ಕೈಗೊಳ್ಳಲಾಗಿದೆ.
ಈ ಹಿಂದೆ ವಿಐಪಿ ದರ್ಶನ ಮುಂಜಾನೆ 2.30ರಿಂದ ಬೆಳಗ್ಗೆ 8ರ ತನಕ ಇರುತ್ತಿತ್ತು. ಭಕ್ತರು ದರ್ಶನ ಮುಗಿಸಿಕೊಂಡು ವಾಸ್ತವ್ಯ ಹೂಡಿರುವ ಜಾಗ ಖಾಲಿ ಮಾಡುತ್ತಿದ್ದರು. ಆದರೆ ಈಗ ದರ್ಶನ ಮುಗಿಯುವುದೇ 12 ಗಂಟೆಯಾದ ಕಾರಣ ರೂಂ ಖಾಲಿ ಮಾಡುವುದು ಮಧ್ಯಾಹ್ನವಾಗಿದೆ.
ಉಚಿತ ದರ್ಶನಕ್ಕೆ ಬರುವ ಭಕ್ತರು ವಿಐಪಿ ದರ್ಶನ ಮುಗಿಯುವ ತನಕ ವೈಕುಂಠಂ ಕ್ಯೂ ಕಾಂಪ್ಲೆಕ್ಸ್ನಲ್ಲಿ ಕಾಯಬೇಕಿತ್ತು. ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಟಿಟಿಡಿ ಪ್ರಾಯೋಗಿಕವಾಗಿ ವಿಐಪಿ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಿದೆ.
ವಿಐಪಿ ದರ್ಶನದ ಸಮಯ ಬದಲಾವಣೆ ಯಶಸ್ವಿಯಾದರೆ ಮಾತ್ರ ಅದನ್ನು ಮುಂದುವರೆಸಲಾಗುತ್ತದೆ ಎಂದು ಟಿಟಿಡಿ ಹೇಳಿತ್ತು. ಈಗ ವಸತಿ ಸಮಸ್ಯೆ ಎದುರಾಗುತ್ತಿರುವುದರಿಂದ ವಿಐಪಿ ದರ್ಶನದ ವೇಳಾಪಟ್ಟಿಯಲ್ಲಿಯೂ ಬದಲಾವಣೆ ಮಾಡುವ ನಿರೀಕ್ಷೆ ಇದೆ.
ಕಳೆದ ಮೂರು ತಿಂಗಳಿನಿಂದ ತಿರುಪತಿಗೆ ಆಗಮಿಸುತ್ತಿರುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಅದರಲ್ಲೂ ವಾರಾಂತ್ಯ ಮತ್ತು ಸರ್ಕಾರಿ ರಜೆ ದಿನಗಳ ಅವಧಿಯಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಅವರಿಗೆ ವಸತಿ ವ್ಯವಸ್ಥೆ ಮಾಡುವುದು ಸವಾಲಿನ ಕೆಲಸವಾಗಿದೆ.
ಡಿಸೆಂಬರ್ ಅಂತ್ಯದಲ್ಲಿ ಸಹ ಸಾವಿರಾರು ಭಕ್ತರು ತಿರುಪತಿಗೆ ಆಗಮಿಸುವ ನಿರೀಕ್ಷೆ ಇದೆ. ಇದರಿಂದಾಗಿ ಉಚಿತ ದರ್ಶನಕ್ಕೆ ಬಂದವರು ಒಂದು ದಿನಕ್ಕೂ ಹೆಚ್ಚು ಕಾಲ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಅಕ್ಟೋಬರ್ ಅಂತ್ಯದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ತಿರುಪತಿ ಭೇಟಿ ಮುಂದೂಡಿ ಎಂದು ಭಕ್ತರಿಗೆ ಟಿಟಿಡಿ ಮನವಿ ಮಾಡಿತ್ತು.












Click it and Unblock the Notifications