ಟ್ರಕ್ ಚಾಲಕರು ಅಧಿಕಾರಿಗಳಿಗೆ ಪ್ರತಿ ವರ್ಷ ನೀಡುವ ಲಂಚ 47,852 ಕೋಟಿ ರೂ.
ನವದೆಹಲಿ, ಫೆಬ್ರವರಿ 29: ಒಂದು ದಿನ ಟ್ರಕ್ ಸಂಚಾರವಿಲ್ಲ ಎಂದರೆ ಇಡೀ ದೇಶವೇ ತತ್ತರಿಸುತ್ತದೆ. ಭಾರತದ ದೈನಂದಿನ ಹಾಗೂ ಇತರೆ ವಸ್ತುಗಳ ಪೂರೈಕೆ ಮುಖ್ಯವಾಗಿ ಅವಲಂಬಿಸಿರುವುದು ಟ್ರಕ್ ಸರಕು ಸಾಗಾಣಿಕೆ ವ್ಯವಸ್ಥೆಯನ್ನು. ಆದರೆ ಈ ಟ್ರಕ್ಗಳು ಓಡಾಟ ನಡೆಸಲು ಎಷ್ಟು ಹಣವನ್ನು ಲಂಚದ ರೂಪದಲ್ಲಿಯೇ ನೀಡಬೇಕಾಗುತ್ತದೆ ಎಂಬುದನ್ನು ತಿಳಿದರೆ ಅಚ್ಚರಿ ಮತ್ತು ಆಘಾತ ಎರಡೂ ಆಗುತ್ತದೆ.
ನಿಜ. ಭಾರತದ ಟ್ರಕ್ ಚಾಲಕರು ಮತ್ತು ಮಾಲೀಕರು ಸಂಚಾರ ಹಾಗೂ ಹೆದ್ದಾರಿ ಅಧಿಕಾರಿಗಳಿಗೆ ಪ್ರತಿ ವರ್ಷ 47,345 ಕೋಟಿ ರೂ ಹಣವನ್ನು ಲಂಚದ ರೂಪದಲ್ಲಿ ನೀಡುತ್ತಾರೆ ಎಂದು ಇತ್ತೀಚಿನ ಸಮೀಕ್ಷೆಯೊಂದು ಹೇಳಿದೆ.
ನಗರಗಳಲ್ಲಿ ಲಂಚದ ಲೆಕ್ಕವನ್ನು ತೆಗೆದುಕೊಂಡರೆ ಗುವಾಹಟಿ ಮೊದಲ ಸ್ಥಾನದಲ್ಲಿದೆ. ಇಲ್ಲಿ ಶೇ 97.5ರಷ್ಟು ಟ್ರಕ್ ಚಾಲಕರು ಲಂಚ ನೀಡಿದ್ದಾಗಿ ತಿಳಿಸಿದ್ದಾರೆ. ಚೆನ್ನೈನಲ್ಲಿ ಶೇ 89, ದೆಹಲಿಯಲ್ಲಿ ಶೇ 84ರಷ್ಟು ಟ್ರಕ್ ಚಾಲಕರು ರಸ್ತೆ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ ಎಂದು ಸೇವ್ ಲೈಫ್ ಫೌಂಡೇಷನ್ ನಡೆಸಿರುವ ಮಾದರಿ ಸಮೀಕ್ಷೆ ತಿಳಿಸಿದೆ. ಈ ಸಮೀಕ್ಷೆಯು ಭಾರತದ ಸರಕು ಸಾಗಾಟ ವ್ಯವಸ್ಥೆಯಲ್ಲಿ ಬೃಹತ್ ಲಂಚದ ಮಾರಿಯನ್ನು ಅನಾವರಣಗೊಳಿಸಿದೆ.
ರೌಂಡ್ ಟ್ರಿಪ್ ವೇಳೆ ಅಧಿಕ ಲಂಚ
'ಭಾರತದಲ್ಲಿನ ಟ್ರಕ್ ಚಾಲಕರ ಸ್ಥಿತಿಗತಿ' ವರದಿಯ ಪ್ರಕಾರ ರಾಜಧಾನಿ ನವದೆಹಲಿಯಲ್ಲಿನ ಟ್ರಕ್ ಚಾಲಕರು ಸರಾಸರಿ 557 ರೂ ಲಂಚ ನೀಡುತ್ತಾರೆ. ಮುಂಬೈನಲ್ಲಿ ಈ ಸರಾಸರಿ ಪ್ರಮಾಣ 1,135 ರೂ ಇದೆ. ಗುವಾಹಟಿ ಮತ್ತು ಜೈಪುರಗಳಲ್ಲಿ ಟ್ರಕ್ ಚಾಲಕರು ರೌಂಡ್ ಟ್ರಿಪ್ ಮಾಡುವಾಗ ಹೆಚ್ಚು ಹಣ ತೆರಬೇಕಾಗುತ್ತದೆ. ಗುವಾಹಟಿಯಲ್ಲಿ ಚಾಲಕರು ಪ್ರತಿ ರೌಂಡ್ ಟ್ರಿಪ್ ವೇಳೆ ನೀಡುವ ಸರಾಸರಿ ಲಂಚದ ಮೊತ್ತ 1,608 ರೂ ಇದ್ದರೆ, ಜೈಪುರದಲ್ಲಿ 1,125 ರೂ ಇದೆ.
ಆರ್ಟಿಒ ಅಧಿಕಾರಿಗಳಿಗೂ ಲಂಚ
ಸಂಚಾರ ಮತ್ತು ಹೈವೇ ಅಧಿಕಾರಿಗಳಿಗೆ ಮಾತ್ರವಲ್ಲದೆ ಕೆಲವು ಟ್ರಕ್ ಚಾಲಕರು ಆರ್ಟಿಒ ಅಧಿಕಾರಿಗಳಿಗೂ ಲಂಚ ನೀಡಿದ್ದಾರೆ. ಒಟ್ಟಾರೆ ಸುಮಾರು ಶೇ 44ರಷ್ಟು ಟ್ರಕ್ ಚಾಲಕರು ಆರ್ಟಿಒ ಅಧಿಕಾರಿಗಳಿಗೆ ತಾವು ಲಂಚ ನೀಡಿರುವುದನ್ನು ಖಚಿತಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.
ಟ್ರಾಫಿಕ್ ಪೊಲೀಸರ ಕಣ್ಣು ಲುಂಗಿ ಮೇಲೆ: ಜಡಾಯಿಸಿದ್ರು ನೋಡಿ ಅದಕ್ಕೂ ಫೈನು!
ಸ್ಥಳೀಯರಿಂದ ಹಣ ಸುಲಿಗೆ
ನಾಲ್ಕನೇ ಒಂದರಷ್ಟು ಟ್ರಕ್ ಚಾಲಕರು ಸ್ಥಳೀಯ ಗುಂಪುಗಳಿಗೆ ಸುಲಿಗೆ ರೂಪದ ಹಣ ನೀಡಿದ್ದಾರೆ. ಸ್ಥಳೀಯ ಗುಂಪುಗಳ ಸುಲಿಗೆಯ ಸರಾಸರಿ ಮೊತ್ತ 608 ರೂ. ಅತಿ ಹೆಚ್ಚು ಹಣವನ್ನು ಜೈಪುರದಲ್ಲಿ (ಸರಾಸರಿ 1,000 ರೂ) ನೀಡಿದ್ದರೆ, ಗುವಾಹಟಿಯಲ್ಲಿ 985 ರೂ ಸರಾಸರಿ ಸುಲಿಗೆ ಹಣ ಪಾವತಿ ಮಾಡಿದ್ದಾರೆ.
ನವೀಕರಣ, ನೋಂದಣಿಗೂ ಲಂಚ
ಒಟ್ಟಾರೆಯಾಗಿ ಶೇ 47ರಷ್ಟು ಟ್ರಕ್ ಚಾಲಕರು ತಮ್ಮ ಚಾಲನಾ ಪರವಾನಗಿಯನ್ನು ನವೀಕರಣ ಮಾಡಿಕೊಳ್ಳು ಸರಾಸರಿ 1,789 ರೂ ಲಂಚ ಕೊಟ್ಟಿದ್ದಾರೆ. ಶೇ 43ರಷ್ಟು ವಾಹನ ಮಾಲೀಕರು ಕೂಡ ತಮ್ಮ ವಾಹನಗಳ ನೋಂದಣಿ ಮಾಡಿಸಿಕೊಳ್ಳಲು ಸಾರಿಗೆ ಇಲಾಖೆಗೆ ಸರಾಸರಿ 1,360 ರೂ. ನೀಡಿದ್ದಾರೆ.
ಟ್ರಾಫಿಕ್ ನಿಯಮ ಉಲ್ಲಂಘನೆ: ಟ್ರಕ್ ಚಾಲಕನಿಗೆ 6.5 ಲಕ್ಷ ರೂ. ದಂಡ!
1,217 ಟ್ರಕ್ ಚಾಲಕರಿಂದ ಮಾಹಿತಿ
ಸಮೀಕ್ಷೆಯು ದೇಶದಾದ್ಯಂತ ಟ್ರಕ್ ಚಾಲಕರು ಮತ್ತು ಮಾಲೀಕರನ್ನು ಮಾತನಾಡಿಸಿ ನಡೆಸಲಾಗಿದೆ. ಶೇ 34ರಷ್ಟು ಚಾಲಕರು ದೇವರ ಆರಾಧನೆ ಹೆಸರಿನಲ್ಲಿ ದೇಣಿಗೆ ನೀಡಿದ್ದಾರೆ. ಇನ್ನು ಶೇ 13ರಷ್ಟು ಮಂದಿ ಸರಕುಗಳ ದರೋಡೆ, ಜೀವಕ್ಕೆ ಅಪಾಯದ ಪರಿಸ್ಥಿತಿಯಲ್ಲಿ ಹಣ ನೀಡಿದ್ದಾರೆ. ದೇಶದ ಹತ್ತು ಪ್ರಮುಖ ಸಂಚಾರ ಮತ್ತು ಸಾರಿಗೆಯ ಕೇಂದ್ರಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. 1,217 ಟ್ರಕ್ ಚಾಲಕರು ಮತ್ತು 110 ವಾಹನ ಮಾಲೀಕರನ್ನು ವಿವರವಾದ ಸಮೀಕ್ಷೆಗೆ ಒಳಗಾಗಿ ಈ ಮಾಹಿತಿಗಳನ್ನು ಪಡೆದುಕೊಳ್ಳಲಾಗಿದೆ.
ಬೆಂಗಳೂರಿನಲ್ಲಿ ಲಂಚದ ಪ್ರಮಾಣ
ಬೆಂಗಳೂರಿನಲ್ಲಿ ಸಂಚಾರ ಅಥವಾ ಹೆದ್ದಾರಿ ಪೊಲೀಸರಿಗೆ ಶೇ 50ಕ್ಕೂ ಹೆಚ್ಚು ಮಂದಿ ಲಂಚ ನೀಡಿದ್ದಾಗಿ ಹೇಳಿಕೊಂಡಿದ್ದಾರೆ. ದೇಶದಾದ್ಯಂತ ಈ ಪ್ರಮಾಣ ಶೇ 67ರಷ್ಟಿದೆ. 2006-07ರ ಅವಧಿಯಲ್ಲಿ ಲಂಚದ ಮೊತ್ತ 22,048 ರೂ.ದಷ್ಟಿತ್ತು. ಈಗ ಅದು ದುಪ್ಪಟ್ಟಾಗಿದ್ದು, ಪ್ರತಿ ವರ್ಷವೂ ಹೆಚ್ಚಾಗುತ್ತಿದೆ ಎಂದು ಸಮೀಕ್ಷೆಯ ವರದಿ ತಿಳಿಸಿದೆ.