ಟಿಆರ್ಎಸ್ ಶಾಸಕರ ಖರೀದಿ ಪ್ರಕರಣ: ಬಿಜೆಪಿ ಮುಖಂಡ ಬಿಎಲ್ ಸಂತೋಷ್ಗೆ ಲುಕ್ಔಟ್ ನೋಟಿಸ್
ಹೈದರಾಬಾದ್, ನವೆಂಬರ್ 22: ತೆಲಂಗಾಣದ ವಿಶೇಷ ತನಿಖಾ ತಂಡ (ಎಸ್ಐಟಿ) ಮಂಗಳವಾರ ಟಿಆರ್ಎಸ್ ಶಾಸಕರ ಖರೀದಿ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್, ತುಷಾರ್ ಮತ್ತು ಜಗ್ಗು ಸ್ವಾಮಿ ವಿರುದ್ಧ ಲುಕ್ಔಟ್ ನೋಟಿಸ್ ಹೊರಡಿಸಿದೆ.
ಸೋಮವಾರದಂದು ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರ ಸಂಬಂಧಿ ವಕೀಲರಾದ ಭೂಸರಪು ಶ್ರೀನಿವಾಸ್ ಎಂಬುವವರು ಶಾಸಕರ ಖರೀದಿ ಪ್ರಕರಣದ ತನಿಖೆ ನಡೆಸುತ್ತಿರುವ ರಾಜ್ಯ ಪೊಲೀಸ್ ಎಸ್ಐಟಿ ಮುಂದೆ ಹಾಜರಾಗಿದ್ದರು. ಆದರೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಮತ್ತು ಇತರ ಇಬ್ಬರು ತಮಗೆ ನೀಡಲಾದ ನೋಟಿಸ್ಗೆ ಇನ್ನೂ ಪ್ರತಿಕ್ರಿಯಿಸಿರಲಿಲ್ಲ.
ಎಸ್ಐಟಿ ನೀಡಿದ ಸಮಯಕ್ಕೆ ಸರಿಯಾಗಿ ಕರೀಂನಗರದ ವಕೀಲ ಭೂಸರಪು ಶ್ರೀನಿವಾಸ್ ಅವರು ಹೈದರಾಬಾದ್ನಲ್ಲಿರುವ ಪೊಲೀಸ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ಗೆ ಬೆಳಗ್ಗೆ 10.30ಕ್ಕೆ ತಲುಪಿದರು. ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್ಎಸ್) ನಾಲ್ವರು ಶಾಸಕರನ್ನು ಖರೀದಿಸಲು ಯತ್ನಿಸಿದ ಆರೋಪದಲ್ಲಿ ಬಂಧಿತರಾಗಿರುವ ಮೂವರು ಆರೋಪಿಗಳಲ್ಲಿ ಒಬ್ಬರಾದ ಸಿಂಹಯಾಜಿಗೆ ಶ್ರೀನಿವಾಸ್ ಅವರು ವಿಮಾನದ ವೆಚ್ಚಕ್ಕೆ ಹಣವನ್ನು ನೀಡಿದ್ದರು. ಆದರೆ ಬಿಎಲ್ ಸಂತೋಷ್, ಭಾರತ್ ಧರ್ಮ ಜನಸೇನೆ (ಬಿಡಿಜೆಎಸ್) ಅಧ್ಯಕ್ಷ ತುಷಾರ್ ವೆಲ್ಲಪಲ್ಲಿ ಮತ್ತು ಜಗ್ಗು ಸ್ವಾಮಿ ಮಧ್ಯಾಹ್ನದವರೆಗೆ ವಿಚಾರಣೆಗೆ ಹಾಜರಾಗಿರಲಿಲ್ಲ ಹಾಗಾಗಿ ಲುಕ್ಔಟ್ ನೋಟಿಸ್ ಹೊರಡಿಸಲಾಗಿದೆ.
ಬಿಎಲ್ ಸಂತೋಷ್ ಸೋಮವಾರ ತಮ್ಮ ಹೇಳಿಕೆಗಳನ್ನು ನೀಡಲು ಎಸ್ಐಟಿಗೆ ಲಭ್ಯವಾಗುತ್ತಾರೆಯೇ ಅಥವಾ ಹೆಚ್ಚಿನ ಸಮಯ ಕೇಳುತ್ತಾರೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ನವೆಂಬರ್ 19 ರಂದು ತೆಲಂಗಾಣ ಹೈಕೋರ್ಟ್ ಬಿಎಲ್ ಸಂತೋಷ್ಗೆ ನೀಡಲಾದ ನೋಟಿಸ್ಗೆ ತಡೆ ನೀಡುವಂತೆ ತೆಲಂಗಾಣ ರಾಜ್ಯ ಬಿಜೆಪಿ ಘಟಕದ ಮನವಿಯನ್ನು ತಿರಸ್ಕರಿಸಿತ್ತು. ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 41 ಎ ಅಡಿಯಲ್ಲಿ ಎಸ್ಐಟಿ ಈಗಾಗಲೇ ನೋಟಿಸ್ ಜಾರಿ ಮಾಡಿರುವುದರಿಂದ ಸಂತೋಷ್ ಅವರನ್ನು ಬಂಧಿಸಬಾರದು ಎಂದು ನ್ಯಾಯಮೂರ್ತಿ ಬಿ.ವಿಜಯ್ಸೇನ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ವಿಧಿಸಿರುವ ಷರತ್ತುಗಳನ್ನು ಪಾಲಿಸುವಂತೆ ಸೂಚನೆ
ಬಿಎಲ್ ಸಂತೋಷ್ನನ್ನು ಬಂಧಿಸಬಾರದು ಎಂದು ಹೇಳಿದ ನ್ಯಾಯಾಧೀಶರು, ವಿಶೇಷ ತನಿಖಾ ತಂಡದ ನೋಟಿಸ್ನಲ್ಲಿ ವಿಧಿಸಿರುವ ಷರತ್ತುಗಳನ್ನು ಪಾಲಿಸುವಂತೆ ಸೂಚಿಸಿದರು. ಅದೇ ದಿನ, ಸಂತೋಷ್ಗೆ ನೋಟಿಸ್ ನೀಡಲು ಎಸ್ಐಟಿಗೆ ಸಹಕರಿಸುವಂತೆ ದೆಹಲಿ ಪೊಲೀಸ್ ಕಮಿಷನರ್ಗೆ ಸೂಚನೆ ಕೋರಿ ತೆಲಂಗಾಣ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತ್ತು.

ವಾಟ್ಸಾಪ್ ಮೂಲಕ ಸಂತೋಷ್ಗೆ ನೋಟಿಸ್
ಪ್ರಕರಣ ಸಂಬಂಧ ಯಾವುದೇ ವಿಳಂಬ ಮಾಡದೆ ಬಿಜೆಪಿಯ ಬಿಎಲ್ ಸಂತೋಷ್ಗೆ ನೋಟಿಸ್ ಜಾರಿ ಮಾಡಬೇಕು ಎಂದು ನ್ಯಾಯಾಧೀಶರು ಆದೇಶಿಸಿದರು. ಪ್ರಕರಣದಲ್ಲಿ ಸಂಬಂಧಿತ ದೆಹಲಿ ಪೊಲೀಸ್ ಅಧಿಕಾರಿಗೆ ಇ-ಮೇಲ್ ಅಥವಾ ವಾಟ್ಸಾಪ್ ಮೂಲಕ ಸಂತೋಷ್ಗೆ ನೋಟಿಸ್ ನೀಡಲು ಅವರು ಎಸ್ಐಟಿಗೆ ಅವಕಾಶ ನೀಡಿದರು.

ಭಾರಿ ಹಣದ ಆಮಿಷವೊಡ್ಡಿ ಬಿಜೆಪಿಗೆ ಸೆಳೆಯಲು ಯತ್ನ
ನವೆಂಬರ್ 21 ರಂದು ಹೈದರಾಬಾದ್ನಲ್ಲಿ ತನ್ನ ಮುಂದೆ ಹಾಜರಾಗುವಂತೆ ಎಸ್ಐಟಿ ತನ್ನ ನೋಟಿಸ್ನಲ್ಲಿ ಬಿಎಲ್ ಸಂತೋಷ್ಗೆ ತಿಳಿಸಿದೆ. ಒಂದು ವೇಳೆ ಅವರು ಹಾಜರಾಗಲು ವಿಫಲವಾದರೆ ಅವರನ್ನು ಬಂಧಿಸಲಾಗುವುದು ಎಂದು ಅದು ಹೇಳಿದೆ. ಕಳೆದ ತಿಂಗಳು ಟಿಆರ್ಎಸ್ನ ನಾಲ್ವರು ಶಾಸಕರನ್ನು ಭಾರಿ ಹಣದ ಆಮಿಷವೊಡ್ಡಿ ಬಿಜೆಪಿಗೆ ಸೆಳೆಯಲು ಯತ್ನಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದ ಮೂವರು ಬಿಜೆಪಿ ಏಜೆಂಟ್ಗಳ ನಡುವಿನ ಸಂಭಾಷಣೆಯಲ್ಲಿ ಬಿಎಲ್ ಸಂತೋಷ್ ಹೆಸರು ಕಾಣಿಸಿಕೊಂಡಿತ್ತು.

ನಾಲ್ವರಿಗೆ ಒಂದೇ ದಿನ ವಿಚಾರಣೆ
ಕಳೆದ ತಿಂಗಳು ಆಪರೇಷನ್ ಕಮಲ ಪ್ರಕರಣದಲ್ಲಿ ಬಂಧಿತರಾದ ಮೂವರು ಆರೋಪಿಗಳ ಜತೆಗಿನ ಸಂಬಂಧದ ಆರೋಪದ ಮೇರೆಗೆ ನಾಲ್ವರನ್ನು ಒಂದೇ ದಿನ ವಿಚಾರಣೆಗೆ ಕರೆಸಲಾಗಿತ್ತು. ಜಗ್ಗು ಕೊಟ್ಟಿಲಿಲ್ ಅಲಿಯಾಸ್ ಜಗ್ಗು ಸ್ವಾಮಿ ಕೊಚ್ಚಿಯ ಅಮೃತ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನಲ್ಲಿ ಕೆಲಸ ಮಾಡುತ್ತಿದ್ದರೆ, ತುಷಾರ್ ವೆಲ್ಲಪಲ್ಲಿ ಕೇರಳದ ಬಿಜೆಪಿಯ ಮಿತ್ರಪಕ್ಷವಾದ ಬಿಡಿಜೆಎಸ್ ನಾಯಕರಾಗಿದ್ದಾರೆ.












Click it and Unblock the Notifications