ರಾಜಸ್ಥಾನದಲ್ಲಿ ಬಿಜೆಪಿಗೆ ತ್ರಿವಳಿ ತಲಾಖ್ ಸಿಕ್ಕಿದೆ: ಶತ್ರುಘ್ನ ಸಿನ್ಹಾ
ಪಾಟ್ನಾ, ಫೆಬ್ರವರಿ 03: ಬಿಜೆಪಿ ಕುರಿತು ಲೇವಡಿ ಮಾಡುವುದಕ್ಕೆ ಸಿಗುವ ಯಾವ ವಿಷಯವನ್ನೂ ಸುಲಭಕ್ಕೆ ಬಿಡದ ಬಿಜೆಪಿ ನಾಯಕ, ಬಾಲಿವುಡ್ ಮಾಜಿ ನಟ ಶತ್ರುಘ್ನ ಸಿನ್ಹಾ ಇದೀಗ ಬಿಜೆಪಿ ವಿರುದ್ಧ ಮತ್ತೊಂದು ಹೇಳಿಕೆ ನೀಡಿದ್ದಾರೆ.
"ರಾಜಸ್ಥಾನ ಉಪ ಚುನಾವಣೆಯಲ್ಲಿ ಜನರು ಬಿಜೆಪಿಗೆ ತ್ರಿವಳಿ ತಲಾಖ್ ನೀಡಿದ್ದಾರೆ" ಎಂದು ವ್ಯಂಗ್ಯವಾಗಿ ಟೀಕಿಸಿರುವ ಅವರು, ಈ ಚುನಾವಣೆಯಲ್ಲಿ ಬಿಜೆಪಿಯ ಕಳಪೆ ಪ್ರದರ್ಶನವನ್ನು ಆಡಿಕೊಂಡಿದ್ದಾರೆ.
ರಾಜಸ್ಥಾನದಲ್ಲಿ ಬಿಜೆಪಿಗೆ ಜನರು, ಅಜ್ಮೇರ್ ಕ್ಷೇತ್ರದಲ್ಲೊಂದು ತಲಾಖ್, ಅಲ್ವಾರ್ ಕ್ಷೇತ್ರದಲ್ಲೊಂದು ತಲಾಖ್ ಮತ್ತು ಮಂಡಲಗಢ ವಿಧಾನಸಭಾ ಕ್ಷೇತ್ರದಲ್ಲೊಂದು ತಲಾಖ್, ಒಟ್ಟು ಮೂರು ಅಂದರೆ ತ್ರಿವಳಿ ತಲಾಖ್ ನೀಡಿದ್ದಾರೆ ಎಂದು ಅವರು ಲೇವಡಿ ಮಾಡಿದ್ದಾರೆ.

"ನನ್ನ ಪಕ್ಷದ ಕುರಿತು ನನಗೂ ಕಾಳಜಿ ಇದೆ. ಈ ಸೋಲು ಬಿಜೆಪಿ ಪಾಠವಾಗಬೇಕಿದೆ. ತಕ್ಷಣವೇ ಅಗತ್ಯ ಪರಿಹಾರವನ್ನು ಬಿಜೆಪಿ ಕಂಡುಕೊಳ್ಳದಿದ್ದರೆ ಜನರು ಬಿಜೆಪಿಗೆ ಟಾಟಾ ಬೈ ಬೈ ಎನ್ನುವ ಕಾಲ ದೂರವಿಲ್ಲ" ಎಂದು ಅವರು ಎಚ್ಚರಿಸಿದ್ದಾರೆ.
ರಾಜಸ್ಥಾನದ ಎರಡು ಲೋಕಸಭಾ ಕ್ಷೇತ್ರ ಮತ್ತು ಒಂದು ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯ ಫಲಿತಾಂಶ ಫೆಬ್ರವರಿ 1 ರಂದು ಹೊರಬಿದ್ದಿತ್ತು. ಈ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ದಾಖಲೆ ಮತಗಳ ಅಂತರದಿಂದ ಜಯಗಳಿಸಿತ್ತು.












Click it and Unblock the Notifications