Breaking; ಕೆಎಸ್ಆರ್ಟಿಸಿ ಬಸ್ಗೆ ಟೂರಿಸ್ಟ್ ಬಸ್ ಡಿಕ್ಕಿ, 9 ಜನರು ಸಾವು
ತಿರುವನಂತಪುರಂ, ಅಕ್ಟೋಬರ್ 06; ವಿದ್ಯಾರ್ಥಿಗಳು ಸಂಚಾರ ನಡೆಸುತ್ತಿದ್ದ ಪ್ರವಾಸಿ ಬಸ್ ಕೇರಳ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಬಸ್ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ 9 ಜನರು ಮೃತಪಟ್ಟಿದ್ದು, ಸುಮಾರು 38 ಪ್ರಯಾಣಿಕರು ಗಾಯಗೊಂಡಿದ್ದಾರೆ.
ಬುಧವಾರ ತಡರಾತ್ರಿ ಕೇರಳದ ಪಾಲಕ್ಕಾಡ್ ಸಮೀಪದ ಮಂಗಳಂ ಸಮೀಪ ಈ ಅಪಘಾತ ನಡೆದಿದೆ. ಪ್ರವಾಸಿ ಬಸ್ ಕೆಎಸ್ಆರ್ಟಿಸಿ ಬಸ್ಗೆ ಮುಂಭಾಗದಿಂದ ಡಿಕ್ಕಿ ಹೊಡೆದಿದೆ ಎಂದು ಕೇರಳದ ಸಾರಿಗೆ ಸಚಿವ ಎಂ. ಬಿ. ರಾಜೇಶ್ ಹೇಳಿದ್ದಾರೆ.
ಪ್ರವಾಸಿ ಬಸ್ನಲ್ಲಿ ಬಲಸೋಲಿಸ್ ವಿದ್ಯಾನಿಕೇತನ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿದ್ದರು. ಊಟಿಯಿಂದ ಈ ಬಸ್ ಎರ್ನಾಕುಲಂಕಗೆ ತೆರಳುತ್ತಿತ್ತು. ಕೆಎಸ್ಆರ್ಟಿಸಿ ಬಸ್ ಕೊಯಮುತ್ತೂರಿಗೆ ಸಂಚಾರ ನಡೆಸುತ್ತಿತ್ತು.

ಪ್ರವಾಸಿ ಬಸ್ನಲ್ಲಿದ್ದ ಐವರು ವಿದ್ಯಾರ್ಥಿಗಳು, ಒಬ್ಬರು ಶಿಕ್ಷಕರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕೆಎಸ್ಆರ್ಟಿಸಿ ಬಸ್ನಲ್ಲಿದ್ದ ಮೂವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಅಪಘಾತದಲ್ಲಿ 38 ಜನರು ಗಾಯಗೊಂಡಿದ್ದಾರೆ. ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
"ಅಪಘಾತದಲ್ಲಿ 5 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ" ಎಂದು ಸಚಿವ ಎಂ. ಬಿ. ರಾಜೇಶ್ ಮಾಹಿತಿ ನೀಡಿದ್ದಾರೆ.
ಮೃತಪಟ್ಟ ಕೆಎಸ್ಆರ್ಟಿಸಿ ಬಸ್ ಪ್ರಯಾಣಿಕರನ್ನು ಕೊಲ್ಲಂನ ದೀಪಾ ಬಾನು (27), ತ್ರಿಶೂರ್ನ ರೋಹಿತ್ (24), ಕೊಲ್ಲಂನ ಅನೂಪ್ (22) ಎಂದು ಗುರುತಿಸಲಾಗಿದೆ. ಪಾಲಕ್ಕಾಡ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಶವಗಳನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ ಪ್ರವಾಸಿ ಬಸ್ನ ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ. ಖಾಸಗಿ ಬಸ್ ಹಿಂದಿಕ್ಕುವ ಭರದಲ್ಲಿ ಬಸ್ ವೇಗವಾಗಿ ಆಗಮಿಸಿ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿಯಾಗಿದೆ.
ಡಿಕ್ಕಿಯ ರಭಸಕ್ಕೆ ಎರಡೂ ಬಸ್ಗಳು ರಸ್ತೆಯಿಂದ ಪಕ್ಕಕ್ಕೆ ಸರಿದಿವೆ. ಮುಖಾಮುಖಿ ಡಿಕ್ಕಿಯಾಗಿದ್ದರಿಂದ ಘಟನೆಯಲ್ಲಿ 9 ಜನರು ಸಾವನ್ನಪ್ಪಿದ್ದಾರೆ. ವಡಕ್ಕಾಂಚೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications