ಕಾಂಗ್ರೆಸ್ ಬಲಪಡಿಸಲು ಕಠಿಣ ನಿರ್ಧಾರಗಳ ಅಗತ್ಯವಿದೆ: ಮಲ್ಲಿಕಾರ್ಜುನ ಖರ್ಗೆ
ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಪ್ರದರ್ಶನ ನೀಡಿದೆ. ಚುನಾವಣೆ ಸೋಲಿನ ಬಗ್ಗೆ ಚರ್ಚಿಸಲು ಶುಕ್ರವಾರ ಕಾಂಗ್ರೆಸ್ ಉನ್ನತ ನಾಯಕರು ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತಳಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ಹೇಳಿದ್ದಾರೆ. ಪಕ್ಷದ ನಾಯಕರು ಒಗ್ಗಟ್ಟಾಗಿ ಇರುವುದು ಮತ್ತು ಸಾರ್ವಜನಿಕವಾಗಿ ಪರಸ್ಪರ ವಿರುದ್ಧವಾಗಿ ಮಾತನಾಡುವುದನ್ನು ತಪ್ಪಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ದೆಹಲಿಯ ಎಐಸಿಸಿ ಪ್ರಧಾನ ಕಛೇರಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿರುವ ಖರ್ಗೆ, ಇವಿಎಂಗಳಿಂದ ಚುನಾವಣೆ ಫಲಿತಾಂಶದ ಮೇಲೆ ನಂಬಿಕೆ ಕಡಿಮೆಯಾಗಿದೆ. ನ್ಯಾಯಯುತ ಚುನಾವಣೆ ನಡೆಯುವಂತೆ ನೋಡಿಕೊಳ್ಳುವುದು ಚುನಾವಣಾ ಆಯೋಗದ ಸಾಂವಿಧಾನಿಕ ಜವಾಬ್ದಾರಿ ಎಂದು ಹೇಳಿದರು.

ಪಕ್ಷದ ಆಂತರಿಕ ಒಗ್ಗಟ್ಟಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕರಲ್ಲಿ ಒಗ್ಗಟ್ಟಿನ ಕೊರತೆ ಇದೆ. ಪಕ್ಷದ ನಾಯಕರ ವಿರುದ್ಧವೇ ಹೇಳಿಕೆ ನೀಡುತ್ತಿರುವುದು ಪಕ್ಷಕ್ಕೆ ವ್ಯಾಪಕ ಹಾನಿ ಮಾಡುತ್ತಿವೆ ಎಂದು ಹೇಳಿದರು. ನಮ್ಮಲ್ಲೇ ಒಗ್ಗಟ್ಟಿಲ್ಲದಿದ್ದರೆ, ಒಗ್ಗಟ್ಟಿನಿಂದ ಹೋರಾಡದೇ ಇದ್ದರೆ ಎದುರಾಳಿಗಳನ್ನು ರಾಜಕೀಯವಾಗಿ ಸೋಲಿಸಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.
ತಪ್ಪು ತಿದ್ದಿಕೊಳ್ಳದಿದ್ದರೆ ಕಷ್ಟ
ಚುನಾವಣಾ ಫಲಿತಾಂಶಗಳಿಂದ ಪಾಠ ಕಲಿಯಬೇಕು ಎಂದಿರುವ ಅವರು, ಪ್ರತಿಸ್ಪರ್ಧಿಗಳು ನಡೆಸುವ ಅಪಪ್ರಚಾರ ಮತ್ತು ತಪ್ಪು ಸಂದೇಶಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಪಕ್ಷವು ಕಾರ್ಯತಂತ್ರ ರೂಪಿಸಬೇಕು ಎಂದು ಸಲಹೆ ನೀಡಿದ್ದಾರೆ. ಎಂತಹದೇ ಸಂದರ್ಭ ಬಂದರೂ ಪಕ್ಷದಲ್ಲಿ ಒಗ್ಗಟ್ಟಿರಬೇಕು, ಪಕ್ಷದಲ್ಲಿ ಶಿಸ್ತಿನಿಂದ ಇರುವುದು ಮುಖ್ಯ ಎಂದು ಹೇಳಿದರು.
ಪಕ್ಷದ ಗೆಲುವು ನಮ್ಮ ಗೆಲುವು, ಪಕ್ಷದ ಸೋಲು ನಮ್ಮ ಸೋಲು ಎಂದು ಕಾರ್ಯಕರ್ತರು ಭಾವಿಸಬೇಕು. ನಮ್ಮ ಶಕ್ತಿಯು ಪಕ್ಷವನ್ನು ಬಲಪಡಿಸುವುದರಲ್ಲಿದೆ. ಈಗ ಬಂದಿರುವ ಫಲಿತಾಂಶಗಳಿಂದ ನಿರಾಶೆಗೊಳ್ಳಬಾರದು. ಪಕ್ಷವನ್ನು ಬಲಪಡಿಸಲು ತಳ ಮಟ್ಟದಿಂದ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ವರೆಗೆ ಬದಲಾವಣೆ ತರಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದ್ದಾರೆ.
ಮಹಾರಾಷ್ಟ್ರ ಚುನಾವಣೆ ಕುರಿತು ಮಾತನಾಡಿದ ಖರ್ಗೆ, ಲೋಕಸಭೆ ಚುನಾವಣೆಯ ಉತ್ತಮ ಫಲಿತಾಂಶದ ನಂತರ ವಿಧಾನಸಭೆ ಚುನಾವಣೆ ಫಲಿತಾಂಶ ಪಕ್ಷಕ್ಕೆ ಅಚ್ಚರಿ ತಂದಿದೆ. ರಾಜ್ಯ ಚುನಾವಣೆಗಳಲ್ಲಿ ಬಂದಿರುವ ಫಲಿತಾಂಶದಿಂದ ಕೆಲವು ಕಠಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಅದರ ಸಾಧನೆಯ ಮೇಲೆ ಸವಾರಿ ಮಾಡುತ್ತಾ, ಕಾಂಗ್ರೆಸ್ ಹೊಸ ಉತ್ಸಾಹದಿಂದ ವಿಧಾನಸಭಾ ಚುನಾವಣೆಗೆ ಹೋಯಿತು ಆದರೆ ಚುನಾವಣಾ ಫಲಿತಾಂಶಗಳು ಪಕ್ಷದ ನಿರೀಕ್ಷೆಯಂತೆ ಇರಲಿಲ್ಲ ಎಂದು ಕಾಂಗ್ರೆಸ್ ಮುಖ್ಯಸ್ಥರು ಹೇಳಿದರು.












Click it and Unblock the Notifications