ವಿಧವೆಯರು ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲೇನಿದೆ?
ಬೆಂಗಳೂರು, ಜೂ. 01: ವಿಶ್ವ ತಂಬಾಕು ರಹಿತ ದಿನ ಮೇ 31 ಕಳೆದು ಹೋಗಿದೆ. ಆದರೆ ತಂಬಾಕು ಗುಲಾಮರಿಗೆ ಯಾವ ದಿನವಾದರೆ ಏನು? ಅದು ಅವರನ್ನು ಬಿಡುತ್ತದೆಯೇ? ಚಟಕ್ಕೆ ದಾಸರಾಗಿ ಜೀವ ಕಳೆದುಕೊಂಡ ಕುಟುಂಬಗಳ ಚಿತ್ರಣ ಈ ಪತ್ರದ ಮೂಲಕ ನಿಮ್ಮ ಮುಂದೆ ಇಡುತ್ತಿದ್ದೇವೆ. ದೇಶದ ಪ್ರಧಾನಿಗೇ ಬರೆದ ಪತ್ರ ಹೆಣ್ಣು ಮಕ್ಕಳ ಕಣ್ಣೀರ ಕತೆಯನ್ನು ಸಾರಿ ಸಾರಿ ಹೇಳುತ್ತಿದೆ.
ತಂಬಾಕು ಚಟಕ್ಕೆ ದಾಸರಾಗಿ ಜೀವ ಮತ್ತು ಜೀವನವನ್ನೇ ಕಳೆದುಕೊಂಡ ವಿಧವೆಯರು ಪ್ರಧಾನಿಗೆ ಬರೆದ ಪತ್ರದ ಸಾಲುಗಳನ್ನು ಹಾಗೇ ಇಟ್ಟರೆ ತಂಬಾಕಿನ ಹೋರಾಟದಲ್ಲಿ ತಮ್ಮವರನ್ನು ಕಳೆದುಕೊಂಡು ಭವಿಷ್ಯದ ಬೆಳಕಿಗಾಗಿ ಕಾಯುತ್ತಿರುವ ವಿಧವೆಯರ ಪಾಡು ನಿಮಗೆ ಅರ್ಥವಾದೀತು. ಇಂದಿಗೆ ತಂಬಾಕು ಚಟಕ್ಕೆ ತೀಲಾಂಜಲಿ ಹೇಳವ ನಿರ್ಧಾರವೂ ಸಾಧ್ಯವಾದೀತು.[ತಂಬಾಕು ತ್ಯಜಿಸಿದರೆ ಯಾರಿಗೆ ಲಾಭ? ಯಾರಿಗೆ ನಷ್ಟ?]

ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅವಗಾಹನೆಗೆ...
ನಮ್ಮ ಗಂಡಂದಿರು ನಿಮ್ಮ ಸರ್ಕಾರಕ್ಕೆ ತಂಬಾಕು ಕಂಪನಿಗಳ ಮೂಲಕ ಸಾಕಷ್ಟು ಆದಾಯ ತಂದು ಕೊಟ್ಟಿದ್ದಾರೆ. ವಿಮಾ ಯೋಜನೆ, ಮ್ಯೂಚುವಲ್ ಫಂಡ್ ಎಂದು ಸರ್ಕಾರಕ್ಕೆ ಆದಾಯ ಸಂದಾಯವಾಗಿದೆ.
ದೇಶದ ಎಲ್ಲೆಡೆ ಗುಟ್ಕಾ ನಿಷೇಧ ಮಾಡಲಾಗಿದೆ. ಆದರೆ ನಿಮ್ಮದೇ ತವರು ಗುಜರಾತ್ ನಲ್ಲಿ ಗುಟ್ಕಾ ತಯಾರು ಮಾಡುವುದಕ್ಕೆ ಯಾವ ನಿರ್ಬಂಧವಿಲ್ಲ. ಇಲ್ಲಿ ತಯಾರಾಗುವ 'ವಿಷ' ದೇಶದ ಎಲ್ಲ ಭಾಗಗಳಿಗೆ ತೆರಳಿ ಜೀವಗಳನ್ನು ಪ್ರತಿದಿನ ಕೊಲ್ಲುತ್ತದೆ. ಮಾನ್ಯ ಪ್ರಧಾನ ಮಂತ್ರಿಗಳೇ ಈ ಸಂಗತಿ ನಿಮಗೆ ಗೊತ್ತಿದೆಯೇ?[ಧೂಮಪಾನ ಮಾಡುವುದು ಬಿಡುವುದು ನಿಮ್ಮಿಷ್ಟ!]
ನಾವು ನಿಮ್ಮಲ್ಲಿ ಸೆರಗೊಡ್ಡಿ ಬೇಡಿಕೊಳ್ಳುತ್ತಿದ್ದೇವೆ. ದಯವಿಟ್ಟು ಈ ತಂಬಾಕು ಉತ್ಪನ್ನ ತಯಾರಿಕೆಗೆ ನಿಷೇಧ ಹಾಕಿ. ಉಸಿರಾಟ ಮಾಡಲು ಸಾಧ್ಯವಾಗದೇ ನಮ್ಮ ಪತಿ ಪರಿತಪಿಸಿದ್ದಕ್ಕೆ ಈ ನಿಧಾನ ವಿಷವೇ ಕಾರಣ. ಇದನ್ನು ಅಲ್ಲ ಎಂದು ನೀವು ಸಾಬೀತು ಮಾಡುತ್ತಿರೋ?

ಮನೆಯಲ್ಲಿ ಆಡುವ ಮಕ್ಕಳು ಅಪ್ಪ ಎಲ್ಲಿ? ಎಂದು ಕೇಳಿದರೆ ಉತ್ತರ ಹೇಳಲು ಬಾಯಿ ಬರುತ್ತಿಲ್ಲ. ಮೌನದ ಜತೆಗೆ ಕಣ್ಣೀರು ಕೋಡಿಯಾಗಿ ಹರಿಯುತ್ತದೆ. ತವರನ್ನು ತೊರೆದು ಬಂದವರಿಗೆ ಇಂದು ಉಳಿದಿರುವುದು ತಂಬಾಕಿನ ಬೂದಿ ಮಾತ್ರ!
ಮೊದಲು ಅವರು ತಂಬಾಕಿನ ಸೆಳೆತಕ್ಕೆ ಬಲಿಯಾಗಿದ್ದರು. ನಂತರ ಅದೇ ಅವರನ್ನು ದಾಸರನ್ನಾಗಿ ಮಾಡಿಕೊಂಡಿತು. ನೀವು ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇವನೆ ಮಾಡಿದರೆ ದಂಡ ಹಾಕುತ್ತೀರಿ ನಿಜ. ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚು ಮಾಡಿ ಬೆಲೆ ಹೆಚ್ಚಳ ಮಾಡಿದ್ದೀರಿ ಅದು ನಿಜ. ಆದರೆ ಮಾರುಕಟ್ಟೆಗೆ ಬರದಂತೆ ಯಾಕೆ ತಡೆಯುತ್ತಿಲ್ಲ? ನಿಷೇಧ ಮಾಡಿದರೆ ಸರ್ಕಾರಕ್ಕೆ ಆದಾಯ ನಿಂತು ಹೋಗತ್ತೆ ಎಂಬ ಅಳುಕೆ? ಆದಾಯ ಗಳಿಸಲು ಬೇರೆ ಮೂಲಗಳಿಲ್ಲವೇ?
ನಮ್ಮ ಈ ನೂರಾರು ಪ್ರಶ್ನೆಗಳಿಗೆ, ಅಂತರಂಗದ ನೋವಿಗೆ ಉತ್ತರ ನೀಡಿ. ಇನ್ನಾದರೂ ದೇಶದ ಗೃಹಿಣಿಯರ ತಾಳಿ ಭಾಗ್ಯ ಕಾಪಾಡಿ. ಉಳಿದ ಸಹೋದರಿಯರಿಗಾದರೂ ನೆಮ್ಮದಿಯ ಜೀವನ ಕಲ್ಪಿಸಿಕೊಡಿ....
ನಿಮ್ಮ ವಿಶ್ವಾಸಿಗಳು
* ಶ್ರೀಮತಿ ಅನುಪ್ ಶಕ್ತಿ ನಿಗಮ್(ಧೂಮಪಾನಕ್ಕೆ ದಾಸರಾಗಿದ್ದ ಅನುಪ್ ಶಕ್ತಿ ನಿಗಮ್ 2000 ನೇ ಇಸವಿಯಲ್ಲಿ ಕೊನೆ ಉಸಿರೆಳೆದಿದ್ದರು)
* ಅಲ್ಕಾ ಪಾಂಡೆ( ಪಾನ್ ಪರಾಗ್ ಪ್ಯಾಕೇಟ್ ಗೆ ಸಿಕ್ಕು ರಾಜೀವ್ ಪಾಂಡೆ 2010 ರಲ್ಲಿ ಇಹಲೋಕ ತ್ಯಜಿಸಿದ್ದರು)
* ಕೌಮುದಿ ಚತಿರ್ವೇದಿ( ಬಾಯಿ ಕ್ಯಾನ್ಸರ್ ನಿಂದ್ ಮನೋಜ್ ಚತುರ್ವೇದಿ 2009 ರಲ್ಲಿ ತೀರಿಕೊಂಡಿದ್ದರು)
* ನಿಕು ಸಿಧು( ತಂಬಾಕು ಜಗಿಯುತ್ತಿದ್ದ ರಾಹುಲ್ ಸಘಾಲ್ 2015 ರ ಮೇ ತಿಂಗಳಲ್ಲಿ ಅಸುನೀಗಿದ್ದರು)
* ಸುಮಿತ್ರಾ ಪೆಡ್ನೆಕರ್( ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಸತೀಶ್ ಪೆಡ್ನೆಕರ್ ಮಾವಾ ಅಗಿಯುವ ಚಟಕ್ಕೆ ಸಿಕ್ಕು 2011ರಲ್ಲಿ ಸಾವನ್ನಪ್ಪಿದ್ದರು)












Click it and Unblock the Notifications