ಮೇಕೆದಾಟು ಯೋಜನೆ ವಿರುದ್ಧ ಮತ್ತೆ ತಕರಾರು ತೆಗೆದ ತಮಿಳುನಾಡು
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಬಹುನಿರೀಕ್ಷಿತ 5,912 ಕೋಟಿ ರೂಪಾಯಿ ವೆಚ್ಚದ ಮೇಕೆದಾಟು ಯೋಜನೆಗೆ ಒಪ್ಪಿಗೆ ಸಿಕ್ಕಿದೆ. ಆದರೆ, ತಮಿಳುನಾಡು ಮತ್ತೆ ಅಡ್ಡಗಾಲು ಹಾಕಿದೆ.
ಬೆಂಗಳೂರು, ಫೆಬ್ರವರಿ 17: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಬಹುನಿರೀಕ್ಷಿತ 5,912 ಕೋಟಿ ರೂಪಾಯಿ ವೆಚ್ಚದ ಮೇಕೆದಾಟು ಯೋಜನೆಗೆ ಒಪ್ಪಿಗೆ ಸಿಕ್ಕಿ ಒಂದು ದಿನ ಕಳೆಯುವುದರೊಳಗೆ ತಮಿಳುನಾಡು ಮತ್ತೆ ಅಡ್ಡಗಾಲು ಹಾಕಿದೆ.
ಈ ಯೋಜನೆ ಅನುಷ್ಠಾನಕ್ಕೆ ಅನುಮತಿ ನೀಡಬಾರದೆಂದು ಕಾವೇರಿ ಮೇಲುಸ್ತುವಾರಿ ಸಮಿತಿ ಸಮಿತಿ ಸಭೆ ಮುಂದೆ ಅರ್ಜಿ ಸಲ್ಲಿಸಿದೆ. ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಸಭೆಯಲ್ಲಿ ತಮಿಳುನಾಡು ಮೇಕೆದಾಟು ಯೋಜನೆಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದೆ.
ಕರ್ನಾಟಕದ ವಿದ್ಯುತ್ ಉತ್ಪಾದನೆ ಮತ್ತು ಕುಡಿಯುವ ನೀರು ಸೇರಿದಂತೆ ಬಹುಪಯೋಗಿ ನೀರಾವರಿ ಯೋಜನೆಯಲ್ಲಿ ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ತಮಿಳುನಾಡು ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ಈ ಯೋಜನೆ ಅನುಷ್ಠಾನಗೊಂಡರೆ ಸುಪ್ರೀಂಕೋರ್ಟ್ ಹಾಗೂ ಕಾವೇರಿ ನ್ಯಾಯಾಧಿಕರಣದ ನಿರ್ಣಯಕ್ಕೆ ಬೆಲೆ ಇಲ್ಲದ್ದಂತಾಗುತ್ತದೆ ಎಂದು ತಮಿಳುನಾಡಿನ ಸರ್ಕಾರ ಹೇಳಿದೆ.[ಮೇಕೆದಾಟು ಯೋಜನೆಗೆ ಸಿಕ್ಕಿತು ಗ್ರೀನ್ ಸಿಗ್ನಲ್]

ತಮಿಳುನಾಡಿನಲ್ಲಿ ಮುಖ್ಯಮಂತ್ರಿಯಾಗಿ ಎಡಪ್ಪಾಡಿ ಪಳನಿಸ್ವಾಮಿ ಅವರು ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು. ಶನಿವಾರದಂದು ವಿಶೇಷ ಅಧಿವೇಶನದಲ್ಲಿ ವಿಶ್ವಾಸಮತ ಯಾಚಿಸಲಿದ್ದಾರೆ. ಈ ನಡುವೆ ತಕರಾರು ಅರ್ಜಿಯನ್ನು ಹಾಕಲಾಗಿದೆ.[ಮೇಕೆದಾಟು ಕುಡಿಯುವ ನೀರಿನ ಯೋಜನೆ ಡಿಪಿಆರ್ ಸಿದ್ಧ]
ರಾಮನಗರ ಜಿಲ್ಲೆಯ ಕನಕಪುರದಲ್ಲಿ ಕಾವೇರಿ ನದಿಗೆ ಬೃಹತ್ ಅಣೆಕಟ್ಟು ಕಟ್ಟಲಾಗುತ್ತದೆ. 66 ಟಿಎಂಸಿ ನೀರು ಹಿಡಿದಿಡಬಹುದಾದ ಅಣೆಕಟ್ಟನ್ನು ಕರ್ನಾಟಕ ಸರಕಾರ ಮೇಕೆದಾಟುವಿನಲ್ಲಿ ಕಟ್ಟಲು ಹೊರಟಿದೆ.
ಇದರಿಂದ ಬೆಂಗಳೂರು ಮತ್ತು ರಾಮನಗರ ಜಿಲ್ಲೆಗಳ ಕುಡಿಯುವ ನೀರಿನ ಕೊರತೆಯನ್ನು ನೀಗಿಸಬಹುದು ಎಂದು ಕರ್ನಾಟಕ ಯೋಜನೆ ಹಾಕಿಕೊಂಡಿದೆ. ಮತ್ತು 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಸಾಧ್ಯವಾಗಲಿದೆ.












Click it and Unblock the Notifications