ಜಲ್ಲಿಕಟ್ಟು: ಸದ್ಯದಲ್ಲೇ ಸಿಹಿಸುದ್ದಿ ನಿರೀಕ್ಷಿಸಿ-ಪನ್ನೀರ್ ಸೆಲ್ವಂ
ನವದೆಹಲಿ, ಜನವರಿ 19: ಗುರುವಾರ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ತಮಿಳುನಾಡು ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ 'ಸದ್ಯದಲ್ಲೇ ಸಿಹಿಸುದ್ದಿ ನಿರೀಕ್ಷಿಸಿ,' ಎಂದು ಹೇಳಿಕೆ ನೀಡಿದ್ದಾರೆ. ಪ್ರಧಾನಿ ಭೇಟಿಯ ಬೆನ್ನಿಗೇ ಪನ್ನೀರ್ ಸೆಲ್ವಂ ಈ ಹೇಳಿಕೆ ನೀಡಿದ್ದು, ಸಿಹಿಸುದ್ದಿ ಏನು ಎಂಬುದು ಕುತೂಹಲ ಹುಟ್ಟಿಸಿದೆ.[ಮೋದಿ-ಪನ್ನೀರ್ ಸೆಲ್ವಂ ಭೇಟಿ; ಜಲ್ಲಿಕಟ್ಟು ನಿಷೇಧ ವಾಪಸ್ಗೆ ಆಗ್ರಹ]
ಸುಗ್ರಿವಾಜ್ಞೆಗೆ ಆಗ್ರಹ
ಪ್ರಧಾನಿ ನರೇಂದ್ರ ಮೋದಿಯನ್ನು ದೆಹಲಿಯಲ್ಲಿ ಭೇಟಿಯಾದ ಪನ್ನೀರ್ ಸೆಲ್ವಂ ಜಲ್ಲಿಕಟ್ಟಿನ ಮೇಲಿನ ನಿಷೇಧ ಹಿಂತೆಗೆದುಕೊಳ್ಳಬೇಕು. ಇದಕ್ಕಾಗಿ ಕೇಂದ್ರ ಸರಕಾರ ಸುಗ್ರೀವಾಜ್ಞೆಯ ಕರಡು ಸಿದ್ಧಪಡಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮೋದಿ, 'ರಾಜ್ಯದ ಸಾಂಸ್ಕೃತಿಕ ಮೌಲ್ಯಗಳಿಗೆ ಹೆಚ್ಚಿನ ಮಹತ್ವ ನೀಡುತ್ತೇನೆ. ನಿಮ್ಮ ಬೆಂಬಲಕ್ಕೆ ನಾನಿದ್ದೇನೆ,' ಎಂದಿದ್ದಾರೆ.

"ಪ್ರಕರಣ ಇನ್ನೂ ಸುಪ್ರಿಂ ಕೋರ್ಟಿನಲ್ಲಿ ವಿಚಾರಣೆ ಹಂತದಲ್ಲಿದ್ದು ಆದೇಶ ಇನ್ನೂ ನೀಡಿಲ್ಲ. ಹೀಗಾಗಿ ರಾಜ್ಯ ಸರಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ನನ್ನ ಬೆಂಬಲ ಇದೆ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ," ಎಂದು ಪನ್ನೀರ್ ಸೆಲ್ವಂ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.[ಗ್ಯಾಲರಿ : ಜಲ್ಲಿಕಟ್ಟುಗಾಗಿ ಪ್ರತಿಭಟನೆ, ತಮಿಳರ ಅರ್ಭಟ]

ಇದು ಪ್ರತಿಭಟನೆಯಲ್ಲ ಕ್ರಾಂತಿ
ತಮಿಳು ಚಿತ್ರರಂಗ ಪ್ರತಿಭಟನೆಯ ಆರಂಭದ ದಿನದಿಂದಲೂ ಜಲ್ಲಿಕಟ್ಟಿಗೆ ವಿಧಿಸಲಾಗಿರುವ ನಿಷೇಧ ವಾಪಸ್ ಪಡೆಯಬೇಕು ಎಂದು ಒತ್ತಾಯಿಸುತ್ತಲೇ ಬಂದಿದೆ. ಇದೀಗ ಖ್ಯಾತ ನಟ ವಿಶಾಲ್, "ಇದು ಪ್ರತಿಭಟನೆಯಲ್ಲ. ಇದೊಂದು ಕ್ರಾಂತಿ. ತಮಿಳಿಗರ ಧ್ವನಿ ಕೇಂದ್ರವನ್ನು ತಲುಪಬೇಕು ಮತ್ತು ಕೇಂದ್ರ ಸುಗ್ರೀವಾಜ್ಞೆ ಹೊರಡಿಸಬೇಕು," ಎಂದು ಒತ್ತಾಯಿಸಿದ್ದಾರೆ.

ಅಂಬುಮಣಿ ರಾಮದಾಸ್ ಪೊಲೀಸ್ ವಶಕ್ಕೆ
ಜಲ್ಲಿಕಟ್ಟು ನಿಷೇಧ ವಾಪಸ್ಸಿಗೆ ಒತ್ತಾಯಿಸಿ ದೆಹಲಿಯಲ್ಲಿ 7 ಲೋಕ ಕಲ್ಯಾಣ ಮಾರ್ಗದ ಪ್ರಧಾನಿ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಪಿಎಂಕೆ ಪಕ್ಷದ ಸಂಸತ್ ಸದಸ್ಯ ಅನ್ಬುಮಣಿ ರಾಮದಾಸ್ ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. "ಪ್ರಧಾನಿ ನನ್ನನ್ನು ಭೇಟಿಯಾಗಿಲ್ಲ. ಹೀಗಾಗಿ ನಿವಾಸದ ಮುಂದೆ ಧರಣಿ ಕೂರದೆ ನನಗೆ ಬೇರೆ ಆಯ್ಕೆ ಇರಲಿಲ್ಲ," ಎಂದು ರಾಮದಾಸ್ ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications