Tirupati Seva: ತಿರುಮಲ ಭಕ್ತರಿಗೆ ಸಿಹಿಸುದ್ದಿ- ಶ್ರೀವಾರಿಯ ಸೇವೆ ಮಾಡುವ ಅವಕಾಶ ನೀಡಿದ ಟಿಟಿಡಿ
ದೇಶ ವಿದೇಶಗಳಿಂದ ತಿಮ್ಮಪ್ಪನ ದರ್ಶನಕ್ಕಾಗಿ ತಿರುಪತಿಗೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಈ ಪೈಕಿ ಕೆಲ ಭಕ್ತಾಧಿಗಳು ಕಾಣಿಕೆ, ದಾನ ನೀಡುವ ಮೂಲಕ ಹರಕೆ ತೀರಿಸುತ್ತಾರೆ. ದಾನ ಮಾಡಲು ಸಾಧ್ಯವಾಗದ ಭಕ್ತರು ಶ್ರೀವಾರಿಯ ಸೇವೆ ಮಾಡುವ ಮೂಲಕ ತಿಮ್ಮಪ್ಪನ ಆಶೀರ್ವಾದ ಪಡೆಯಬಹುದು.
ಹೌದು.. ಬೇಡಿದ ವರವನ್ನು ನೀಡುವ ತಿಮ್ಮಪ್ಪನಿಗೆ ನೀವು ಕೂಡ ಸೇವೆ ಸಲ್ಲಿಸಬೇಕು ಅಂದುಕೊಂಡಿದ್ದರೆ ಅದಕ್ಕೆ ಟಿಟಿಡಿ ಸುವರ್ಣ ಅವಕಾಶವನ್ನು ನೀಡಿದೆ. ಭಗವಂತನ ಸೇವೆ ಮಾಡಲು ಭಕ್ತರಿಗೆ ಅವಕಾಶವನ್ನು ಟಿಟಿಡಿ ನೀಡಿದೆ. ಕೆಲ ಸಾಮಾನ್ಯ ಭಕ್ತರಿಗೆ ಶ್ರೀಗಳ ಸೇವೆ ಮಾಡುವ ಮಹದಾಸೆ ಇರುತ್ತದೆ. ಅಂತಹ ಭಕ್ತರಿಗಾಗಿ ಟಿಟಿಡಿ ಈ ಅವಕಾಶವನ್ನು ನೀಡಿದೆ. ಹೀಗೆ ತಿಮ್ಮಪ್ಪನ ಸೇವೆ ಮಾಡಲು ಬಯಸುವ ಭಕ್ತರು ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಹಾಗಾದರೆ ಶ್ರೀವಾರಿಯ ಸೇವೆ ಮಾಡಲು ಆನ್ಲೈನ್ನಲ್ಲಿ ಬುಕ್ ಮಾಡುವುದು ಹೇಗೆ? ಎಂದು ತಿಳಿಯೋಣ.

ಶ್ರೀಗಳಿಗೆ ಸೇವಕರಾಗಲು ನೊಂದಣಿ ಹೇಗೆ?
ಶ್ರೀಗಳಿಗೆ ಸೇವಕರಾಗಿ ಬರಲು ಬಯಸುವ ಭಕ್ತರು ಆನ್ಲೈನ್ನಲ್ಲಿ ನೊಂದಣಿ ಮಾಡಿಕೊಳ್ಳಬೇಕಾಗುತ್ತದೆ. ಸೆಪ್ಟೆಂಬರ್ ತಿಂಗಳ ಶ್ರೀವಾರಿ ಸೇವಾ ಕೋಟಾವನ್ನು ಗುರುವಾರ (ಜೂನ್ 27) ಆನ್ಲೈನ್ನಲ್ಲಿ ಬಿಡುಗಡೆ ಮಾಡಲಾಗಿದೆ. ತಿರುಪತಿ ಶ್ರೀವಾರಿ ಸೇವಾ ಕೋಟಾ ಗುರುವಾರ ಬೆಳಗ್ಗೆ 11 ಗಂಟೆಗೆ ಆನ್ಲೈನ್ನಲ್ಲಿ ಲಭ್ಯವಿರುತ್ತದೆ.
ಇದಲ್ಲದೆ, ಮಧ್ಯಾಹ್ನ 12 ಗಂಟೆಗೆ ನವನೀತ ಸೇವೆ ಬಿಡುಗಡೆ ಮಾಡಲಾಗುವುದು. ಪರಕಾಮಣಿ ಸೇವೆಯನ್ನು ಮಧ್ಯಾಹ್ನ 1 ಗಂಟೆಗೆ ಆನ್ಲೈನ್ನಲ್ಲಿ ಬಿಡುಗಡೆ ಮಾಡಲಾಗುತ್ತದೆ. https://ttdevasthanams.ap.gov.in ವೆಬ್ಸೈಟ್ ಮೂಲಕ ಶ್ರೀವಾರಿ ಸೇವೆಗೆ ಸಂಬಂಧಿಸಿದಂತೆ ಬುಕ್ ಮಾಡಲು ಟಿಟಿಡಿ ಸೂಚಿಸಿದೆ.

ಏನೆಲ್ಲಾ ಮಾಡಬೇಕು?
ಹಣ, ಚಿನ್ನಾಭರಣ, ವಸ್ತು, ಇತರ ಆಹಾರ ಪದಾರ್ಥಗಳನ್ನು ನೀಡಲು ಸಾಧ್ಯವಾಗದೇ ಇರುವ ಭಕ್ತರು ಈ ಸೇವೆಯಲ್ಲಿ ಭಾಗವಹಿಸುತ್ತಾರೆ. ಇದನ್ನು ದೇವರು ತಮಗೆ ನೀಡಿದ ಕೆಲಸ ಎಂದು ಭಾವಿಸಿ ಶ್ರೀವಾರಿ ಸೇವೆಯಲ್ಲಿ ಭಕ್ತರು ಭಾಗಿಯಾಗುತ್ತಾರೆ. ಅಂದಹಾಗೆ ಆನ್ಲೈನ್ ಮೂಲಕ ಶ್ರೀವಾರಿ ಸೇವೆಗಾಗಿ ನೊಂದಾಯಿಸಿಕೊಂಡ ಭಕ್ತರಿಗೆ ಟಿಟಿಡಿ ದಿನಾಂಕವನ್ನು ನೀಡುತ್ತದೆ. ಆ ದಿನಾಂಕದಂದು ಭಕ್ತರು ಸೇವೆಯಲ್ಲಿ ತೊಡಗಿಕೊಳ್ಳಬೇಕು.
ಅವರಿಗೆ ಕೆಲ ಕೆಲಸವನ್ನು ವಹಿಸುವ ಮೂಲಕ ತಿರುಮಲ ಶ್ರೀಗಳ ಸೇವೆ ಮಾಡಲು ಟಿಟಿಡಿ ಅವಕಾಶ ನೀಡುತ್ತಿದೆ. ದರ್ಶನಂ ಸರತಿ ಸಾಲುಗಳು, ತಿರುಮಲ ವಸತಿ ನಿಲಯ, ಕಲ್ಯಾಣಕಟ್ಟೆ, ಅನ್ನಪ್ರಸಾದ, ಲಡ್ಡು ಕಾಂಪ್ಲೆಕ್ಸ್, ಲಗೇಜ್ ಕೌಂಟರ್ ಇತ್ಯಾದಿಗಳಲ್ಲಿ ಭಕ್ತರು ಸೇವೆ ಸಲ್ಲಿಸಬೇಕಾಗುತ್ತದೆ.

ಶ್ರೀವಾರಿ ಹುಂಡಿಯಲ್ಲಿ ಭಕ್ತರು ಸಲ್ಲಿಸುವ ಕಾಣಿಕೆ ಎಣಿಕೆಗೆ ಶ್ರೀವಾರಿ ಸೇವಾಕುಲದ ಸೇವೆಯನ್ನು ಟಿಟಿಡಿ ಬಳಸಿಕೊಳ್ಳುತ್ತದೆ. ನವನೀತ ಸೇವೆಯ ಅಂಗವಾಗಿ ಗೋಶಾಲೆ ಆವರಣ ಸ್ವಚ್ಛಗೊಳಿಸುವುದು, ರಂಗೋಲಿ ಬಿಡಿಸುವುದು, ಗೋವುಗಳಿಗೆ ಆಹಾರ ನೀಡುವುದು ಮುಂತಾದವುಗಳು ಈ ಸೇವೆಯಲ್ಲಿ ಸೇರಿವೆ.
ಸೇವೆ ಸಲ್ಲಿಸಲು ಬರುವ ಭಕ್ತರ ಉಡುಪು ಹೇಗಿರಬೇಕು?
ತಿರುಮಲ ಜೊತೆಗೆ ತಿರುಪತಿ, ತಿರುಚಾನೂರ್ ಮತ್ತು ಟಿಟಿಡಿಯ ಸ್ಥಳೀಯ ದೇವಾಲಯಗಳಲ್ಲಿಯೂ ಶ್ರೀವಾರಿ ಸೇವಕರಿಗೆ ಸೇವೆಗಳಿಗೆ ಅವಕಾಶ ನೀಡಲಾಗುತ್ತದೆ. ತಿರುಮಲ ಶ್ರೀವಾರಿ ಸೇವೆಗೆ ಬರುವ ಪುರುಷರು ಬಿಳಿ ಬಟ್ಟೆಯನ್ನು ಮಾತ್ರ ಧರಿಸಬೇಕು. ಮಹಿಳೆಯರು ಕಿತ್ತಳೆ ಬಣ್ಣದ ಸೀರೆ ಉಡಬೇಕು. ಶ್ರೀಗಳ ಸೇವೆ ಮಾಡಿದವರಿಗೆ ಕೊನೆಯ ದಿನದಂದು ಟಿಟಿಡಿ ಶ್ರೀಗಳ ದರ್ಶನ ಹಾಗೂ ಲಡ್ಡುವನ್ನು ಉಚಿತವಾಗಿ ನೀಡಲಾಗುತ್ತದೆ.












Click it and Unblock the Notifications