ನ್ಯಾಯಾಧೀಶರ 'ಒಳ ಒಪ್ಪಂದ' ಬಗ್ಗೆ ಕಾಟ್ಜು ಬಹಿರಂಗ
ನವದೆಹಲಿ, ಜು.21: ಯುಪಿಎ ಅಧಿಕಾರದಲ್ಲಿದ್ದ ಕಾಲದಲ್ಲಿ ಡಿಎಂಕೆ ಒತ್ತಾಯಕ್ಕೆ ಮಣಿದು ಹಲವು ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿದ್ದ ಮದ್ರಾಸ್ ಹೈಕೋರ್ಟ್ನ ಹೆಚ್ಚುವರಿ ನ್ಯಾಯಾಧೀಶರೊಂದಿಗೆ ಸುಪ್ರೀಂ ಕೋರ್ಟ್ನ ಮೂವರು ನಿವೃತ್ತ ಮುಖ್ಯ ನ್ಯಾಯಾಧೀಶರು 'ಒಳ ಒಪ್ಪಂದ' ಮಾಡಿಕೊಂಡಿದ್ದರು ಎಂದು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶ ಹಾಗೂ ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷ ಮಾರ್ಕಂಡೇಯ ಕಾಟ್ಜು ಅವರು ಸೋಮವಾರ ಆರೋಪಿಸಿದ್ದಾರೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಆರ್.ಸಿ.ಲಹೋತಿ, ವೈ.ಕೆ. ಸಬರ ಮತ್ತು ಕೆ.ಜಿ.ಬಾಲಕೃಷ್ಣನ್ ಅವರು ಹಲವು ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿದ್ದ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರನ್ನು ಅಧಿಕಾರದಲ್ಲಿ ಮುಂದುವರೆಸಲು ಒಳ ಒಪ್ಪಂದ ಮಾಡಿಕೊಂಡಿದ್ದರು ಎಂದು ಮದ್ರಾಸ್ ಹೈಕೋರ್ಟ್ ನಿವೃತ ಮುಖ್ಯ ನ್ಯಾಯಮೂರ್ತಿ ಕಾಟ್ಟು ಸೋಮವಾರ ಗಂಭೀರ ಆರೋಪ ಮಾಡಿದ್ದಾರೆ.

ಎಂ. ಕರುಣಾನಿಧಿ ನೇತೃತ್ವದ ಡಿಎಂಕೆ ಹಿತ ಕಾಪಾಡಲು ಯುಪಿಎ ಸರ್ಕಾರ ಈ ಮೂವರು ನ್ಯಾಯಾಧೀಶರ ಮೇಲೆ ಒತ್ತಡ ಹೇರಿತ್ತು. ಅಲ್ಲದೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ರಾಜಕೀಯ ಒತ್ತಡಕ್ಕೆ ಮಣಿಯುವುದು ಎಷ್ಟು ಸರಿ ಎಂದು ಕಾಟ್ಜು ಪ್ರಶ್ನಿಸಿದ್ದಾರೆ.
ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರ ಭ್ರಷ್ಟಾಚಾರದ ಕುರಿತು ತಮಗೆ ಹಲವು ವರದಿಗಳು ಬಂದಿದ್ದ ಹಿನ್ನಲೆಯಲ್ಲಿ ಈ ಕುರಿತು ಗೌಪ್ಯ ತನಿಖೆ ನಡೆಸುವಂತೆ ಅಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಲಹೋತಿ ಅವರಿಗೆ ಮನವಿ ಮಾಡಿದ್ದೆ. ಗೌಪ್ಯ ತನಿಖೆ(IB)ಯಲ್ಲಿ ನ್ಯಾಯಾಧೀಶರ ವಿರುದ್ಧದ ಆರೋಪಗಳು ಸಾಬೀತಾಗಿದ್ದು, ಅವರನ್ನು ವಜಾಗೊಳಿಸಬೇಕಾಗಿತ್ತು. ಆದರೆ ಈ ಎಲ್ಲಾ ಬೆಳವಣಿಗೆಗಳ ನಂತರವೂ ಅವರನ್ನು ಮತ್ತೆ ಒಂದು ವರ್ಷದ ಅವಧಿಗೆ ಹೆಚ್ಚುವರಿ ನ್ಯಾಯಾಧೀಶರನ್ನಾಗಿ ಮುಂದುರೆಸಿದ್ದು ತಮಗೆ ಅಚ್ಚರಿ ಮೂಡಿಸಿದೆ ಎಂದು ಕಾಟ್ಜು ಹೇಳಿದ್ದಾರೆ.(ಪಿಟಿಐ)












Click it and Unblock the Notifications