ಮೋದಿಗೆ ಮತ ಹಾಕುವವರನ್ನು ಸಮುದ್ರಕ್ಕೆ ಎಸೆಯಬೇಕು
ಶ್ರೀನಗರ, ಏ. 28: 'ಹಾಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ನರೇಂದ್ರ ಮೋದಿಗೆ ಮತ ಹಾಕುವವರನ್ನು ಸಮುದ್ರದೊಳಕ್ಕೆ ಹಾಕಿ ಮುಳುಗಿಸಬೇಕು' ಎಂದು ಕೇಂದ್ರ ಸಚಿವ ಫಾರೂಕ್ ಅಬ್ದುಲ್ಲಾ ಫರ್ಮಾನು ಹೊರಡಿಸಿದ್ದಾರೆ.
ಕಾಶ್ಮೀರದ ಜನತೆಗೆ ಕೋಮುವಾದ ಆಗಿಬರುವುದಿಲ್ಲ. ಒಂದು ವೇಳೆ ಭವಿಷ್ಯದಲ್ಲಿ ಭಾರತ ಕೋಮುವಾದಿ ರಾಷ್ಟ್ರವಾದರೆ ಕಾಶ್ಮೀರ ಭಾರತದೊಂದಿಗೆ ಉಳಿಯಲು ಬಯಸುವುದಿಲ್ಲ ಎಂದೂ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಸೀನಿಯರ್ ಅಬ್ದುಲ್ಲಾ ಹೇಳಿದ್ದಾರೆ.

'ನಮ್ಮದು ಜಾತ್ಯಾತೀತ ನಾಡು. ಕೋಮುವಾದಿ ಶಕ್ತಿಗಳಿಂದ ನಮ್ಮನ್ನು ರಕ್ಷಿಸಿ ಎಂದು ದೇವರಲ್ಲಿ ಪ್ರಾರ್ಥಿಸುವೆ. ಇದರಿಂದ ದೇಶ ಮುನ್ನಡೆಯಲು ಸಾಧ್ಯವಾಗಲಿದೆ. ದೇಶ ಕೋಮುವಾದದತ್ತ ಹೊರಳಲು ಸಾಧ್ಯವಿಲ್ಲ' ಎಂದು ಚುನಾವಣಾ ಪ್ರಚಾರ ಸಭೆಯಲ್ಲಿ ಸೀನಿಯರ್ ಅಬ್ದುಲ್ಲಾ ನಿನ್ನೆ ಮತದಾರರನ್ನುದ್ದೇಶಿಸಿ ಹೇಳಿದ್ದಾರೆ.
ಬಿಜೆಪಿ ನಾಯಕರಾದ ಗಿರಿರಾಜ್ ಸಿಂಗ್ ಮತ್ತು ವಿಹಿಂಪ ನಾಯಕ ಪ್ರವೀಣ್ ತೊಗಾಡಿಯಾ ಅವರ ವಿವಾದಾತ್ಮಕ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಕೇಂದ್ರ ಸಚಿವ ಫಾರೂಕ್, 'ಮೋದಿಗೆ ಮತ ಹಾಕದವರನ್ನು ಪಾಕಿಸ್ತಾನಕ್ಕೆ ಅಟ್ಟಿ ಎಂದು ಆ ನಾಯಕರು ಹೇಳುತ್ತಾರೆ. ಆದರೆ ನಾನು ಹೇಳುತ್ತೇನೆ ಕೇಳಿ 'ಮೋದಿಗೆ ಮತ ಹಾಕುವವರನ್ನು ಸಮುದ್ರದಲ್ಲಿ ಮುಳುಗಿಸಿಬಿಡಬೇಕು' ಎಂದು ವ್ಯಗ್ರರಾದರು.












Click it and Unblock the Notifications