ಕರ್ನಾಟಕ ಸೇರಿ ನಾಲ್ಕು ರಾಜ್ಯಗಳ ಚುನಾವಣೆ ಮೇಲೆ ಕಣ್ಣಿಟ್ಟೇ ಕೇಂದ್ರ ಬಜೆಟ್!
ನವದೆಹಲಿ, ಜನವರಿ 17 : 2018-19ನೇ ಸಾಲಿನ ಕೇಂದ್ರ ಬಜೆಟ್ ಫೆಬ್ರವರಿ 1ರ ಮಧ್ಯಾಹ್ನದ ಹೊತ್ತಿಗೆ ಮಂಡನೆ ಆಗುತ್ತದೆ. ಕಳೆದ ವರ್ಷದಿಂದ ಬದಲಾಗಿರುವ ಬಜೆಟ್ ಮಂಡಿಸುವ ದಿನಾಂಕವೇ ಈ ಬಾರಿಯೂ ಮುಂದುವರಿಯಲಿದೆ. ಈ ಬಾರಿ ಕೇಂದ್ರದಿಂದ ಮಂಡನೆಯಾಗುವ ಬಜೆಟ್ ನರೇಂದ್ರ ಮೋದಿ ನೇತೃತ್ವದಲ್ಲಿ ಜನರ ಮುಂದೆ ಬರುತ್ತಿರುವ ಐದನೇ ಬಜೆಟ್.
ಅಷ್ಟೇ ಅಲ್ಲ, 2019ಕ್ಕೆ ಲೋಕಸಭೆ ಚುನಾವಣೆ ಇರುವುದರಿಂದ ಈ ಬಾರಿ ಮಂಡನೆ ಆಗುವುದು ಪೂರ್ಣ ಪ್ರಮಾಣದ ಬಜೆಟ್. ಜನವರಿ ಇಪ್ಪತ್ತೊಂಬತ್ತರಿಂದ ಫೆಬ್ರವರಿ ಒಂಬತ್ತರವರೆಗೆ ಸಂಸತ್ ನ ಬಜೆಟ್ ಮೊದಲ ಹಂತದ ಅಧಿವೇಶನ ನಡೆಯುತ್ತದೆ. ಎರಡನೇ ಅಧಿವೇಶನವು ಮಾರ್ಚ್ ಐದರಿಂದ ಏಪ್ರಿಲ್ ಆರರವರೆಗೆ ಇದೆ.
ತೆರಿಗೆ ಮಿತಿ 3 ಲಕ್ಷಕ್ಕೆ, 80C ಸೆಕ್ಷನ್ ಹೂಡಿಕೆ 2 ಲಕ್ಷಕ್ಕೆ ಏರಿಕೆ?
ಕಳೆದ ಒಂದೂವರೆ ವರ್ಷದಲ್ಲಿ ಅಪನಗದೀಕರಣ ಹಾಗೂ ಜಿಎಸ್ ಟಿ ಜಾರಿಯಂಥ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡ ನಂತರದಲ್ಲಿ ಕೇಂದ್ರದಿಂದ ಮಂಡನೆ ಆಗುತ್ತಿರುವ ಈ ಬಾರಿಯ ಬಜೆಟ್ ಗೆ ಭಾರೀ ಮಹತ್ವ ಇದೆ. ಆದ್ದರಿಂದ ಕೇಂದ್ರ ಹಣಕಾಸು ಸಚಿವರು ಎಂಥ ಬಜೆಟ್ ಮಂಡಿಸಬಹುದು ಎಂಬ ಕುತೂಹಲವಂತೂ ಇದ್ದೇ ಇದೆ.
ಈಗಾಗಲೇ ಜೇಟ್ಲಿ ಅವರು ಸಂದರ್ಶನವೊಂದರಲ್ಲಿ ತಿಳಿಸಿದಂತೆ, ಕೃಷಿ ವಲಯಕ್ಕೆ ಈ ಬಾರಿಯ ಬಜೆಟ್ ನಲ್ಲಿ ಮೊದಲ ಪ್ರಾಶಸ್ತ್ಯ ಸಿಗಲಿದೆ. ಉತ್ಪಾದನೆ ಹೆಚ್ಚಾಗಿ, ರೈತರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂಬ ಸಮಸ್ಯೆ ಬಗ್ಗೆ ಕೂಡ ಕೇಂದ್ರಕ್ಕೆ ಗಮನವಿದೆ. ಈ ಸ್ಥಿತಿಯಿಂದ ರೈತರನ್ನು ಹೊರ ತರುವುದಕ್ಕೆ ಎಲ್ಲ ಪ್ರಯತ್ನ ಮಾಡಲಾಗುತ್ತಿದೆ ಎಂದು ಜೇಟ್ಲಿ ಹೇಳಿದ್ದಾರೆ.
ಎಲ್ಲರಿಗೂ ಮನೆಯೇನೋ ಸರಿ, ಬಜೆಟ್ ನಲ್ಲಿ ಇದಕ್ಕೆಲ್ಲ ಏನು ಮಾಡ್ತೀರಿ?
ಈ ಸಲದ್ದು ಖಂಡಿತವಾಗಿಯೂ ಜನಪ್ರಿಯ ಬಜೆಟ್ ಆಗಿರುತ್ತದೆ. ಏಕೆಂದರೆ ಕರ್ನಾಟಕ, ರಾಜಸ್ತಾನ, ಛತ್ತೀಸ್ ಗಢ ಹಾಗೂ ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಗಳು ಈ ವರ್ಷ ಇವೆ. ಆದ್ದರಿಂದ ಚುನಾವಣೆ ಮೇಲೆ ಕಣ್ಣಿಟ್ಟೇ ಬಜೆಟ್ ರೂಪಿಸಲಾಗುತ್ತದೆ ಎಂಬ ಅಭಿಪ್ರಾಯ ತಜ್ಞರಿಂದ ಕೇಳಿಬರುತ್ತಿದೆ.