ಉಕ್ರೇನ್ನಲ್ಲಿ ನವೀನ್ ಸಾವು ಭೀಕರ ದುರಂತ ಎಂದು ಶಶಿ ತರೂರ್ ಟ್ವೀಟ್
ಕೀವ್, ಮಾರ್ಚ್ 1: ಉಕ್ರೇನ್ನ ಖಾರ್ಕಿವ್ ನಗರದಲ್ಲಿ ರಷ್ಯಾ ನಡೆಸಿದ ದಾಳಿಯಲ್ಲಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಗ್ಯಾನಗೌಡರ್ ಸಾವು ಒಂದು ಭೀಕರ ದುರಂತ ಎಂದು ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.
ಮೃತ ವಿದ್ಯಾರ್ಥಿ ನವೀನ್ ಸಾವಿನ ಕುರಿತು ಮರುಕ ವ್ಯಕ್ತಪಡಿಸಿದ ಶಶಿ ತರೂರ್, ಉಕ್ರೇನ್ ನೆಲದಲ್ಲಿ ಸಿಲುಕಿದ ಪ್ರತಿಯೊಬ್ಬ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬ ಸದಸ್ಯರಲ್ಲಿ ಮನೆ ಮಾಡಿರುವ ಆತಂಕದ ಬಗ್ಗೆ ಉಲ್ಲೇಖಿಸಿದ್ದಾರೆ.
ನವೀವ್ ಗ್ಯಾನಗೌಡರ್ ಸಾವಿನ ಕುರಿತು ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂಧರ್ ಬಾಗ್ಚಿ ಮಾಡಿರುವ ಟ್ವೀಟ್ ಸಂದೇಶಕ್ಕೆ ಶಶಿ ತರೂರ್ ಪ್ರತಿಕ್ರಿಯೆ ನೀಡಿದ್ದಾರೆ. ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಮತ್ತು ಪ್ರಜೆಗಳನ್ನು ಮರಳಿ ವಾಪಸ್ ಕರೆ ತರುವುದಕ್ಕೆ ಅಗತ್ಯವಾದ ಎಲ್ಲ ಕಾರ್ಯಗಳನ್ನು ತುರ್ತು ಗತಿಯಲ್ಲಿ ಮಾಡಬೇಕಿದೆ ಎಂದು ಮಾಜಿ ಸಚಿವ ಶಶಿ ತರೂರ್ ಆಗ್ರಹಿಸಿದ್ದಾರೆ.

ಭಾರತೀಯ ವಿದೇಶಾಂಗ ಸಚಿವಾಲಯದ ಟ್ವೀಟ್:
ಇಂದು ಬೆಳಿಗ್ಗೆ ಖಾರ್ಕಿವ್ನಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬರು ಶೆಲ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ನಾವು ತೀವ್ರ ದುಃಖದಿಂದ ದೃಢಪಡಿಸುತ್ತೇವೆ. ಸಚಿವಾಲಯವು ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ. ಕುಟುಂಬಕ್ಕೆ ನಾವು ಸಂತಾಪವನ್ನು ತಿಳಿಸುತ್ತೇವೆ.
ಖಾರ್ಕಿವ್ನಲ್ಲಿರುವ ಭಾರತೀಯ ಪ್ರಜೆಗಳು ಸೇರಿದಂತೆ ಇತರ ಸಂಘರ್ಷ ವಲಯಗಳಲ್ಲಿರುವ ನಗರಗಳಿಂದ ಸುರಕ್ಷಿತವಾಗಿ ಭಾರತೀಯ ಪ್ರಜೆಗಳನ್ನು ಕಳುಹಿಸಿಕೊಡುವಂತೆ ವಿದೇಶಾಂಗ ಕಾರ್ಯದರ್ಶಿ ರಷ್ಯಾ ಮತ್ತು ಉಕ್ರೇನ್ನ ರಾಯಭಾರಿಗಳನ್ನು ಸಂಪರ್ಕಿಸಿದ್ದಾರೆ.
ಕರೆನ್ಸಿ ಬದಲಾಯಿಸಿಕೊಂಡು ಬರಲು ಹೋದಾಗ ದಾಳಿ:
ಕರ್ನಾಟಕದ ಹಾವೇರಿ ಜಿಲ್ಲೆಯ ನವೀನ್ ಕಳೆದ ನಾಲ್ಕು ವರ್ಷಗಳಿಂದ ಉಕ್ರೇನ್ನ ಖಾರ್ಕಿವ್ ನಗರದಲ್ಲಿ ವಾಸವಾಗಿದ್ದರು. ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ನವೀನ್, ಮಂಗಳವಾರ ಬೆಳಗ್ಗೆ ಕರೆನ್ಸಿ ಬದಲಾಯಿಸಿಕೊಂಡು ಬರುವುದಕ್ಕೆ ತೆರಳಿದ ಸಂದರ್ಭದಲ್ಲಿ ರಷ್ಯಾ ನಡೆಸಿದ ಶೆಲ್ ದಾಳಿಯಲ್ಲಿ ವಿದ್ಯಾರ್ಥಿ ಮೃತಪಟ್ಟಿದ್ದಾರೆ ಎಂದು ಅವರ ಜೊತೆಗಿದ್ದ ವಿದ್ಯಾರ್ಥಿಗಳು ವಿವರಿಸಿದ್ದಾರೆ. ಇದಕ್ಕೂ ಮೊದಲು
ನವೀನ್ ಜೊತೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ರಾಣೆಬೆನ್ನೂರು ತಾಲೂಕಿನ ಸ್ನೇಹಿತ ಪ್ರವೀಣ್ ಎಂಬಾತನು ಈ ಸಾವಿನ ಬಗ್ಗೆ ಪೋಷಕರಿಗೆ ಮೊಬೈಲ್ ಮೂಲಕ ಸಂದೇಶ ರವಾನಿಸಿದ್ದಾನೆ. ಸ್ನೇಹಿತನ ಸಂದೇಶದ ನಡುವೆ ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಕೂಡ ಭಾರತೀಯ ವಿದ್ಯಾರ್ಥಿಯೊಬ್ಬರು ಮೃತಪಟ್ಟಿರುವ ಬಗ್ಗೆ ಟ್ವೀಟ್ ಮಾಡಿದ್ದಾರೆ.












Click it and Unblock the Notifications