ಅಕ್ಷಯ ತದಿಗೆ ಮದುವೆಯಾಗಲು ಯೋಗ್ಯ ದಿನವಲ್ಲ!
ಬೆಂಗಳೂರು, ಮೇ 08: ಈ ಬಾರಿಯ ದುರ್ಮುಖ ನಾಮ ಸಂವತ್ಸರದ ಅಕ್ಷಯ ತದಿಗೆ (ಮೇ 09) ದಿನ ಮದುವೆಯಾಗುವವರಿಗೆ ಆಶುಭ ದಿನವಾಗಿದೆ ಎಂದು ದೇಶದ ಬಹುತೇಕ ಎಲ್ಲಾ ಜ್ಯೋತಿಷಿಗಳು ಘೋಷಿಸಿದ್ದಾರೆ. ಹೀಗಾಗಿ ವರ್ಷ ವರ್ಷ ಈ ಶುಭದಿನದಂದು ಮದುವೆಯಾಗ ಬಯಸುವ ಜೋಡಿಗಳು ಇನ್ನಷ್ಟು ಕಾಲ ಕಾಯಬೇಕಾಗುತ್ತದೆ.
ಅಲ್ಲಾ, ಅಕ್ಷಯ ತದಿಗೆ ದಿನ ಚಿನ್ನಾಭರಣ ಖರೀದಿಸಿದರೆ ಎಲ್ಲವೂ ಅಕ್ಷಯವಾಗುತ್ತದೆ ಎಂಬ ನಂಬಿಕೆ ಹುಟ್ಟಿಹಾಕಿದರು ಒಪ್ಪೋಣ. ಆದರೆ, ಮದುವೆಗೆ ಶುಭ ದಿನ ಹೇಗೆ ಸಾಧ್ಯ. ಇದೇ ಲಾಜಿಕ್ ಪ್ರಕಾರ ನೋಡಿದರೆ ಮದುವೆಯಾಗುವುದು ಕೂಡಾ ಅಕ್ಷಯವಾಗುವುದೇ ಎಂಬ ಪ್ರಶ್ನೆ ಹುಟ್ಟುತ್ತದೆ. [ಅಕ್ಷಯ ತದಿಗೆಯಂದು ಚಿನ್ನವನ್ನೇ ಖರೀದಿಸಬೇಕಾಗಿಲ್ಲ]
ಬಾಲಿವುಡ್ ನ ಸೆಲೆಬ್ರಿಟಿ ಜೋಡಿಯಾದ ಅಭಿಶೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಮದುವೆ ಕೂಡಾ ಅಕ್ಷಯ ತದಿಗೆ ದಿನ ಆಗಿದ್ದು ಎಂಬುದು ಫ್ಯಾನ್ಸ್ ಗಳ ಕಣ್ಣರಳಿಸುವ ಸುದ್ದಿಯಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ದಿನದಂದು ಮದುವೆಯಾದರೆ ಶುಭವಾಗಲಿದೆ, ಬದುಕಿನಲ್ಲಿ ಸುಖ ಸಂತೋಷ ಎಂದಿಗೂ ಕ್ಷಯವಾಗುವುದಿಲ್ಲ ಎಂಬುದು ನಂಬಿಕೆ. ಆದರೆ, ನಾಳೆ ಮಾತ್ರ ಶುಭದಿನವಲ್ಲ ಏಕೆ?

ಏನು ತೊಂದರೆ: ಮೇ 4 ರ ನಂತರ ಸುಲಗ್ನ ಸಾವಧಾನ, ಸುಮುಹೂರ್ತ ಸಾವಹಾನ, ಶುಭ ಮುಹೂರ್ತ, ಶೋಭನೇ ಮುಹೂರ್ತೆ ಎಂದು ಮಂತ್ರ ಘೋಷಿಸುವಂತಿಲ್ಲ. ಅದರಲ್ಲೂ ವೈಶಾಖ ಶುಕ್ಲಪಕ್ಷದ ಮೂರನೇ ದಿನದಂದು ಬುಧ ಸಂಕ್ರಮಣ ಕೂಡಾ ಇದೆ.[ಅಕ್ಷಯ ತೃತೀಯದಂದು ಚಿನ್ನ ಖರೀದಿ ಯಾಕೆ?]
ಒಂದು ವೇಳೆ ಜ್ಯೋತಿಷಿಗಳು, ಪುರೋಹಿತರ ಮಾತು ಮೀರಿ ಮದುವೆಯಾದರೆ ನಕ್ಷತ್ರ ದೋಷ ಕಾಡಲಿದೆಯಂತೆ. ಮದುವೆಗೆ ಬಲ ತರುವ ಗುರು ಹಾಗೂ ಶುಕ್ರ ಕೂಡಾ ಬಲಹೀನರಾಗಿರುತ್ತಾರೆ. ಹೀಗಾಗಿ ವಧು ವರರಿಗೆ ದೈವಬಲವೊಂದೇ ಶ್ರೀರಕ್ಷೆ ಎಂದು ಹೆಸರಾಂತ ಜ್ಯೋತಿಷಿಗಳು ಹೇಳಿದ್ದಾರೆ.
ತ್ರೇತಾಯುಗದ ಮೊದಲ ದಿನ, ವೇದವ್ಯಾಸರು ಹೇಳಿದ ಮಹಾಭಾರತ ಕಾವ್ಯವನ್ನು ಗಣೇಶ ಬರೆಯಲು ಆರಂಭಿಸಿದ ದಿನ ಹೀಗೆ ಅಕ್ಷಯ ತದಿಗೆಗೆ ವಿಶೇಷಗಳುಂಟು. [ಒಂದೇ ಕ್ಲಿಕ್ ನಲ್ಲಿ ವಿವಿಧ ನಗರಗಳ ಚಿನ್ನದ ಬೆಲೆ ತಿಳಿದುಕೊಳ್ಳಿ]
ಹೀಗಾಗಿ ಮೇ 4 ರ ನಂತರ ಯಾವುದೇ ಶುಭ ಮದುವೆ ಮುಹೂರ್ತವಿಲ್ಲ ಹಾಗೂ ಜುಲೈ 7ರ ನಂತರವಷ್ಟೇ 'ಮಾಂಗಲ್ಯ ತಂತುನಾನೇನಾ.. ' ಎನ್ನಬಹುದು ಎಂದು ವಾರಾಣಸಿಯ ಮುಕೇಶ್ ಮಿಶ್ರಾ ಅವರು ಘೋಷಿಸಿದ್ದಾರೆ.ಆದರೆ, ಕೆಲವು ಪಂಚಾಂಗದಂತೆ ಜೂನ್ 27, 29ರಂದು ಕೂಡಾ ಮದುವೆ ಮುಹೂರ್ತಗಳಿವೆ.
ಒಟ್ಟಾರೆ, ಪಂಚಾಂಗ, ಶುಭ ಮುಹೂರ್ತ, ಜ್ಯೋತಿಷಿಗಳು, ಪುರೋಹಿತರ ಮಾತು ಕೇಳಿಕೊಂಡು ವಿವಾಹಕ್ಕೆ ಸಿದ್ಧವಾಗುವ ಮಂದಿ, ಜುಲೈ 7 ರ ನಂತರದ ಶುಭ ಮುಹೂರ್ತಕ್ಕೆ ಕಾಯಬಹುದು. ಜ್ಯೋತಿಷ್ಯ ನಂಬದವರು ಸುಲಭವಾಗಿ ವಿವಾಹ ನೋಂದಣಿ ಕಚೇರಿಗೆ ತೆರಳಿ ವಿವಾಹ ಪ್ರಮಾಣ ಪತ್ರ ಪಡೆದುಕೊಂಡು ತಮ್ಮಿಚ್ಛೆಯಂತೆ ಮದುವೆಯಾಗಬಹುದು.












Click it and Unblock the Notifications