ಗುರುವಾರದಂದು ಮೂರು ರೂಪದಲ್ಲಿ ದರ್ಶನ ಕೊಡುವ ತಿಮ್ಮಪ್ಪ
ಗುರುವಾರದಂದು ತಿರುಮಲದಲ್ಲಿರುವ ವೆಂಕಟೇಶ್ವರನನ್ನು ನಾವು ಮೂರು ರೂಪದಲ್ಲಿ ನೋಡಬಹುದು. ಇದೇನಿದು ಇರುವವನು ಒಬ್ಬನೇ ತಿಮ್ಮಪ್ಪ ಅವನನ್ನು ಮೂರು ರೂಪದಲ್ಲಿ ಹೇಗೆ ನೋಡುವುದು ಒಬ್ಬನೇ ತಿಮ್ಮಪ್ಪ ಮೂರು ರೂಪದಲ್ಲಿ ಹೇಗೆ ದರ್ಶನ ಕೊಡುವುದಕ್ಕೆ ಸಾಧ್ಯ ಎಂದರೆ ಖಂಡಿತ ಅದು ತಿಮ್ಮಪ್ಪನಿಂದ ಸಾಧ್ಯ ಇದೆ.
ತಿಮ್ಮಪ್ಪನಿಗೆ ಗುರುವಾರ ನಡೆಯುವ ಮೂರು ಸೇವೆಗಳಿಗೂ ಒಂದೊಂದು ವಿಶೇಷವಾದ ಹೆಸರು ಇದೆ. ಈ ಸೇವೆಗಳ ಮೂಲಕ ತಿಮ್ಮಪ್ಪನ ಮೂರು ರೀತಿಯ ದರ್ಶನ ಸಿಗುತ್ತದೆ ಭಕ್ತರಿಗೆ. ಇದರಲ್ಲಿ ಮೊದಲನೆಯ ಅಮೋಘವಾದ ದರ್ಶನವೇ ನೇತ್ರ ದರ್ಶನ. ನಿತ್ಯ ನಿರ್ಮಲನಾದ ವೆಂಕಟರಮಣನ ನೇತ್ರ ಗಳನ್ನು ದರುಶನ ಮಾಡುವುದೇ ನೇತ್ರ ದರ್ಶನ.
ನಿರುಪಮಾದೇವ ನಿಲವರ್ಣ ನಿಜದೈವ ಎನಿಸಿರುವ ತಿಮ್ಮಪ್ಪನ ನೇತ್ರ ದರ್ಶನ ಮಾಡುವುದು ಎಂದರೆ ಅದು ಸುಲಭದ ಮಾತಲ್ಲ. ತಪ್ಪು ಮಾಡಿದವರನ್ನು ದಂಡಿಸುವ ರೌಧ್ರನೇತ್ರಗಳವು ಶಿಷ್ಟರನ್ನು ರಕ್ಷಣೆ ಮಾಡುವ ದಾಯಾಮಯ ನೇತ್ರಗಳವು. ಪರಮ ಪುಣ್ಯನಾದ ತಿಮ್ಮಪ್ಪನ ಕಣ್ಣುಗಳ ದರುಶನ ಮಾಡುವುದೇ ಸ್ವಾಮಿಯ ಮೊದಲ ರೂಪ.

ನೇತ್ರ ದರ್ಶನ
ಗುರುವಾರ ಸ್ವಾಮಿಗೆ ಪ್ರಾತಃಕಾಲದ ಸುಪ್ರಭಾತ ಸೇವೆ ಮುಕ್ತಾಯ ಆಗುತ್ತಿದ್ದಂತೆ ಅರ್ಚಕರು ಗರ್ಭಗುಡಿಯನ್ನು ಪ್ರವೇಶ ಮಾಡುತ್ತಾರೆ. ಏಕಾಂತದಲ್ಲಿ ಸ್ವಾಮಿಗೆ ಹಾಕಿರುವ ಹೂವಿನ ಮಾಲೆಗಳನ್ನು ರತ್ನಾಭರಣಗಳನ್ನು ಸುವರ್ಣ ರತ್ನಹಾರಗಳು ಪಿತಾಂಬರವನ್ನು ತೆಗೆಯುತ್ತಾರೆ.
ತಿಮ್ಮಪ್ಪನನ್ನು ನಿರಾಭರಣನನ್ನಾಗಿ ಮಾಡುತ್ತಾರೆ ಪಚ್ಚ ಕರ್ಪೂರದಿಂದ ಸ್ವಾಮಿಯ ಹಣೆಗೆ ಧರಿಸಿರುವ ಉರ್ದ್ವ ಪುಂಡ್ರದ ಗಾತ್ರವನ್ನು ಕಡಿಮೆ ಮಾಡುತ್ತಾರೆ. ಈ ಮೂಲಕ ಸ್ವಾಮಿಯ ಕಣ್ಣುಗಳು ಭಕ್ತರಿಗೆ ಸ್ಪಷ್ಟವಾಗಿ ಕಾಣುವಂತೆ ಮಾಡುತ್ತಾರೆ. ಆ ಸಂದರ್ಭದಲ್ಲಿ ಸಣ್ಣ ನಾಮ ಮಾತ್ರ ಇರುತ್ತದೆ. ಆಗ ಶ್ರೀವಾರ್ಯನಯನಾರವಿಂದದ ಸೌಂದರ್ಯವನ್ನು ಅಭೂತಪೂರ್ವವಾಗಿ ಭಕ್ತ ವೃಂದ ಸವಿಯಬಹುದು.

ತಿರುಪ್ಪಾವಳಿ ಸೇವೆ
ಈ ಸೇವೆಗೆ ಅನ್ನಕುಟೋತ್ಸವ ಅನ್ನಕುಟ ಮಹೋತ್ಸವ ಎಂದು ಕರೆಯುತ್ತಾರೆ. ಸ್ವಾಮಿಯ ನೇತ್ರ ದರ್ಶನದ ನಂತರ ತಿರುಪ್ಪಾವಳಿ ಸೇವೆ ನಡೆಯುತ್ತದೆ. ಈ ಸೇವೆಯಲ್ಲಿ ವೇದ ಪಂಡಿತರು ವೇದ ಪಾರಾಯಣದ ಮೂಲಕ ಶ್ರೀನಿವಾಸನ ಗದ್ಯಗಳನ್ನು ಪಠಿಸುತ್ತಾರೆ ಬಂಗಾರದ ಬಾಗಿಲ ಮುಂದೆ ಶ್ರೀನಿವಾಸನಿಗೆ ಸಮರ್ಪಿಸುವ ಅನ್ನದ ನಿವೇದನೆ ಇದು.
ಬಂಗಾರದ ಬಾಗಿಲ ಮುಂದೆ ಗರುಡಾಳ್ವರ ಎದುರು ನಾಲ್ಕು ಸ್ತಂಭಗಳ ನಡುವೆ ನಾಲ್ಕುನೂರಾ ಎಂಬತ್ನಾಲ್ಕು ಕಿಲೋ ಅಕ್ಕಿಯಲ್ಲಿ ತಯಾರಾಗುವ ಪುಳಿಯೋಗರೆಯನ್ನು ತಯಾರಿಸಲಾಗುತ್ತದೆ. ಪುಳಿಯೋಗರೆ ಅನ್ನ ರಾಶಿಯನ್ನು ನೈವೇದ್ಯಕ್ಕೆ ಸಿದ್ದ ಮಾಡಲಾಗುತ್ತದೆ.

ಅನ್ನವನ್ನು ಯಾಕೆ ನೈವೇದ್ಯ ಮಾಡಬೇಕು?
ಅನ್ನವನ್ನು ಸ್ವಾಮಿಗೇಕೆ ನೈವೇದ್ಯ ಮಾಡಬೇಕು ಅಂದರೆ ನಾವೆಲ್ಲ ಜೀವಿಸುವುದಕ್ಕೆ ಮೂಲವಾಗಿರುವುದೆ ಅನ್ನ. ಕಲಿಯುಗದಲ್ಲಿ ನಮ್ಮ ಪ್ರಾಣ ಉಳಿಯುವುದಕ್ಕೆ ಅನ್ನ ಬೇಕೇಬೇಕು. ಹೀಗಾಗಿ ಭಗವಂತನೆದುರು ನೀನು ನೀಡಿರುವ ಈ ಪ್ರಾಣದಿಂದ ಧರ್ಮ ಕಾರ್ಯವನ್ನು ಮಾಡಲು ನಿನಗೆ ಪುಳಿಯೋಗರೆಯನ್ನು ಅರ್ಪಿಸುತ್ತಿದ್ದೇನೆ. ಸ್ವೀಕರಿಸಿ ಪ್ರಭು ಎಂದು ಅನ್ನ ನೈವೇದ್ಯವನ್ನು ಮಾಡಲಾಗುತ್ತದೆ. ಜೊತೆಗೆ ಈ ಲೋಕವನ್ನು ಸುಭಿಕ್ಷವಾಗಿ ನೋಡಿಕೋ ಎಂದು ಮಾಡುವ ಪುಳಿಯೋಗರೆ ಸೇವೆಯೇ ತಿರುಪ್ಪಾವಾಳಿ ಸೇವೆ.
ಈ ಸೇವೆಯನ್ನು ಮಾಡುವ ವೇಳೆ ಭಗವಂತನಿಗೆ ಹೂವಿನ ಅಲಂಕಾರ ಕಡಿಮೆಯಿರುತ್ತದೆ. ಹಣೆಯಲ್ಲಿ ಪಚ್ಚಕರ್ಪೂರದ ಉರ್ದ್ವ ಪುಂಡ್ರದ ಗಾತ್ರ ದೊಡ್ಡದಾಗಿರುತ್ತದೆ. ತಿಮ್ಮಪ್ಪ ಅಂದರೆ ಶ್ರೀಮಂತಿಕೆ. ಆದರೆ ಈ ಸೇವೆಯ ವೇಳೆ ಸ್ವಾಮಿಯನ್ನು ಸರಳವಾಗಿ ಅಲಂಕರಿಸಲಾಗುತ್ತದೆ. ಇದು ಗುರುವಾರ ಕಾಣಸಿಗುವ ತಿಮ್ಮಪ್ಪನ ಎರಡನೇ ರೂಪ.

ಪೂಲಂಗಿ ಸೇವೆ
ಈ ಸೇವೆಯಲ್ಲಿ ತಿಮ್ಮಪ್ಪನನ್ನು ನೋಡುವುದಕ್ಕೆ ಎರಡು ಕಣ್ಣು ಸಾಲುವುದಿಲ್ಲ. ಸೇವಂತಿಗೆ ಗುಲಾಬಿ ಸ್ಫಟಿಕ ಮಲ್ಲಿಗೆ ತುಳಸಿ ಹೀಗೆ ಸುವಾಸನೆ ಭರಿತ ಹೂಗಳು ಬಣ್ಣ ಬಣ್ಣದ ಹಾರಗಳು ತಿಮ್ಮಪ್ಪನನ್ನು ಸಿಂಗರಿಸಲು ಸಜ್ಜಾಗಿ ನಿಂತಿರುವ ಹೂವಿನ ಲೋಕವದು ತಿಮ್ಮಪ್ಪನಿಗೆ ನಡೆಯುವ ಗುರುವಾರದ ಸೇವೆಗಳಲ್ಲಿ ಪೂಲಂಗಿ ಸೇವೆ ರಮಣೀಯವಾದುದು. ವೆಂಕಟೇಶ್ವರ ಸ್ವಾಮಿ ಬಗೆ ಬಗೆಯ ಹೂವಿನ ಅಲಂಕಾರದಲ್ಲಿ ಭಕ್ತರಿಗೆ ಮನ್ಮಥನಂತೆ ಕಾಣುತ್ತಾನೆ.
ಬಣ್ಣ ಬಣ್ಣದ ಹೂವುಗಳನ್ನು ವಸ್ತ್ರಾಭರಣಗಳನ್ನಾಗಿ ಮಾಡಿಕೊಂಡು ದರ್ಶನ ನೀಡುವ ಈ ಸ್ವಾಮಿಯನ್ನು ಎಷ್ಟು ನೋಡಿದರೂ ನಿಮ್ಮ ಕಣ್ಣು ದಣಿಯುವುದಿಲ್ಲ. ಯಾವುದೇ ರೇಷ್ಮೆ ಚಿನ್ನ ವಸ್ತ್ರಾಭರಣಗಳಿಲ್ಲದೆ ಕೇವಲ ಹೂವಿನ ಅಲಂಕಾರದಲ್ಲಿ ಸ್ವಾಮಿಯ ದರ್ಶನ ನೀಡುವ ಪೂಲಂಗಿ ಸೇವೆ ಅತ್ಯಂತ ರಮಣೀಯವಾಗಿರುತ್ತದೆ.
ತಿಮ್ಮಪ್ಪನ ಈ ರೂಪ ದರ್ಶನವೇ ಗುರುವಾರದ ಸ್ವಾಮಿಯ ಮೂರನೇ ರೂಪ. ಇದಿಷ್ಟು ಗುರುವಾರದ ದಿನ ಸ್ವಾಮಿ ತಿಮ್ಮಪ್ಪನ ಸನ್ನಿಧಿಯಲ್ಲಿ ನಡೆಯುವ ಚಮತ್ಕಾರ. ಆ ದಿನ ತಿಮ್ಮಪ್ಪ ಅತ್ಯಂತ ವಿಶೇಷವಾಗಿ ರಮ್ಯ ರಮಣೀಯವಾಗಿ ಕಾಣುತ್ತಾನೆ ಎಂಬುದೆ ವಿಶೇಷ.












Click it and Unblock the Notifications