ಮುಂದಿನ 4 ದಿನ ಅಧಿಕ ಮಳೆಗೆ ಸಾಕ್ಷಿಯಾಗಲಿವೆ ಈ ರಾಜ್ಯಗಳು
ನವದೆಹಲಿ, ಆಗಸ್ಟ್ 24: ದೇಶದಲ್ಲಿ ನೈಋತ್ಯ ಮುಂಗಾರು ಮುಂದುವರೆದಿದ್ದು, ಆಗಸ್ಟ್ 24ರಿಂದ ಉತ್ತರಾಭಿಮುಖವಾಗಿ ಸಾಗಲಿದೆ. ಆಗಸ್ಟ್ 26ರಿಂದ ದಕ್ಷಿಣದ ಕಡೆಗೆ ಚಲಿಸುವ ಸಾಧ್ಯತೆಯಿದೆ. ಈ ಕಾರಣಕ್ಕೆ ಭಾರತದ ಹಲವು ರಾಜ್ಯಗಳು ವ್ಯಾಪಕ ಮಳೆಗೆ ಸಾಕ್ಷಿಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇದರ ಪ್ರಭಾವದಿಂದಾಗಿ ತಮಿಳುನಾಡು ಹಾಗೂ ಕೇರಳದಲ್ಲಿ ಅಧಿಕ ಮಳೆಯಾಗಲಿದೆ. ಆಗಸ್ಟ್ 26 ಹಾಗೂ 27 ರಂದು ತಮಿಳುನಾಡು, ಕೇರಳ, ಮಾಹೆಯಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ಸೋಮವಾರ ಉತ್ತರಾಖಂಡ ಹಾಗೂ ಉತ್ತರ ಪ್ರದೇಶದಲ್ಲಿ ಅಧಿಕ ಮಳೆಯಾಗಿದೆ. ಇನ್ನೂ ನಾಲ್ಕು ದಿನಗಳ ಅವಧಿ ಉತ್ತರ ಭಾರತದಲ್ಲಿ ಚದುರಿದ ಮಳೆಯಾಗುವುದಾಗಿ ಮಾಹಿತಿ ನೀಡಿದೆ. ಆಗಸ್ಟ್ ದ್ವಿತೀಯಾರ್ಧದಲ್ಲಿ ಮಳೆಯಿಂದ ಬಿಡುವು ಪಡೆದುಕೊಂಡಿದ್ದ ಹಲವು ರಾಜ್ಯಗಳಲ್ಲಿ ಮತ್ತೆ ಮಳೆ ಚಟುವಟಿಕೆ ಆರಂಭವಾಗಿದೆ. ಯಾವ್ಯಾವ ರಾಜ್ಯಗಳಲ್ಲಿ ಮಳೆಯಾಗಲಿದೆ? ಮುಂದಿದೆ ವಿವರ...

ಆಗಸ್ಟ್ 27ರವರೆಗೂ ಈ ರಾಜ್ಯಗಳಲ್ಲಿ ಮಳೆ
ಬಿಹಾರ, ಉತ್ತರ ಪ್ರದೇಶ, ಉತ್ತರಾಖಂಡದಲ್ಲಿ ಈಗಾಗಲೇ ಅಧಿಕ ಮಳೆಯಾಗುತ್ತಿದ್ದು, ಆಗಸ್ಟ್ 27ರವರೆಗೂ ಈ ರಾಜ್ಯಗಳಲ್ಲಿ ಮಳೆ ಮುಂದುವರೆಯುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಅಸ್ಸಾಂ ಹಾಗೂ ಮೇಘಾಲಯದಲ್ಲಿ ಆಗಸ್ಟ್ 25ರವರೆಗೂ ಅತಿ ಹೆಚ್ಚಿನ ಮಳೆ ಸಂಭವಿಸಲಿದೆ ಎಂದು ಎಚ್ಚರಿಕೆ ರವಾನಿಸಿದೆ.
ಮುಂದಿನ ನಾಲ್ಕೈದು ದಿನಗಳ ಕಾಲ ಉತ್ತರಾಖಂಡ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶದಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ಈಶಾನ್ಯ ರಾಜ್ಯಗಳಲ್ಲಿ ಮಳೆ ಮುಂದುವರಿಕೆ
ಈಶಾನ್ಯ ರಾಜ್ಯಗಳಲ್ಲಿ ಕೂಡ ಭಾರೀ ಮಳೆಯಾಗುವ ಸೂಚನೆಯನ್ನು ನೀಡಿದೆ. ಈಶಾನ್ಯ ರಾಜ್ಯಗಳು, ಪಶ್ಚಿಮ ಬಂಗಾಳದಲ್ಲಿ ಆಗಸ್ಟ್ 27ರವರೆಗೂ ಮಳೆ ಇದ್ದೇ ಇರುತ್ತದೆ ಎಂದು ತಿಳಿಸಿದೆ. ದೇಶದ ಉಳಿದ ಕಡೆಗಳಲ್ಲಿ ಚದುರಿದ ಮಳೆಯಾಗಲಿದೆ. ರಾಜಸ್ಥಾನದಲ್ಲಿ ಆಗಸ್ಟ್ 25-27ರವರೆಗೆ ಒಣಹವೆ ಇರಲಿದೆ ಎಂದು ತಿಳಿಸಿದೆ.
ಆಗಸ್ಟ್ 24ರಿಂದ ಪಶ್ಚಿಮ ಬಂಗಾಳ, ಸಿಕ್ಕಿಂ, ಬಿಹಾರದಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ. ಆಗಸ್ಟ್ 24ರಿಂದ 26ರವರೆಗೆ ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯದಲ್ಲಿ ಮಳೆ ತೀವ್ರತೆ ಹೆಚ್ಚಾಗಲಿದೆ ಎಂದು ತಿಳಿಸಿದೆ.

ಈ ಬಾರಿ ಮುಂಗಾರು ದುರ್ಬಲ
ಭಾರತದ ಪ್ರಮುಖ ಹವಾಮಾನ ವಿಶ್ಲೇಷಣಾ ಸಂಸ್ಥೆ ಸ್ಕೈಮೇಟ್ ವೆದರ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, ಸೋಮವಾರ ನವೀಕರಿಸಿದ ಹವಾಮಾನ ಮುನ್ಸೂಚನೆ ವಿವರಗಳನ್ನು ಹಂಚಿಕೊಂಡಿದೆ. ಅದರಂತೆ, ಮುಂಗಾರು ಮಳೆ ದೀರ್ಘಾವಧಿ ಸರಾಸರಿ 94%ನಷ್ಟಿದೆ ಎಂದು ತಿಳಿಸಿದೆ. ಮುಂಗಾರು ಜೂನ್ ಅಂತ್ಯದಲ್ಲಿ ಉತ್ತಮ ರೀತಿ ಆರಂಭವಾಯಿತು. ದೀರ್ಘ ಸರಾಸರಿ 110% ಮಳೆಯಾಗಿತ್ತು. ಜುಲೈನಲ್ಲಿ ಮುಂಗಾರು ಅಬ್ಬರ ತಗ್ಗಿತ್ತು. ಸಾಮಾನ್ಯಕ್ಕಿಂತ ಕಡಿಮೆ ಮಳೆ ಪ್ರಮಾಣ ದಾಖಲಾಗಿತ್ತು. ಆಗಸ್ಟ್ ಎರಡನೇ ವಾರದಲ್ಲಿ ಕೂಡ ವಿರಾಮವನ್ನು ಪಡೆದಿದೆ. ಇದರಿಂದ ಆಗಸ್ಟ್ ಮಧ್ಯದಲ್ಲಿ 9% ಕಡಿಮೆ ಮಳೆ ಪ್ರಮಾಣ ದಾಖಲಾಗಿದೆ. ಮುಂಗಾರು ಸುಧಾರಣೆಯಾಗಿಲ್ಲ ಎಂದು ತಳಿಸಿದೆ.

ಕರ್ನಾಟಕದ 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಕರ್ನಾಟಕ ರಾಜ್ಯದಲ್ಲಿ ಕೂಡ ಈ ಅವಧಿಯಲ್ಲಿ ಮಳೆಯಾಗಲಿದ್ದು, ಆಗಸ್ಟ್ 26ರವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಮಂಗಳವಾರದಿಂದ ಆರಂಭಗೊಂಡು ಮೂರು ದಿನ ಹೆಚ್ಚಿನ ಮಳೆಯಾಗಲಿದೆ. ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಅಧಿಕ ಮಳೆ ಮುನ್ಸೂಚನೆ ನೀಡಲಾಗಿದೆ. ಶಿವಮೊಗ್ಗ, ರಾಮನಗರ, ಕೊಡಗು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಣೆ ಮಾಡಲಾಗಿದೆ.












Click it and Unblock the Notifications