ಪತ್ನಿಯನ್ನು ಪರಪುರುಷನ ಜೊತೆ ರೆಡ್ಹ್ಯಾಂಡ್ ಹಿಡಿದ ಪತಿ: ಭಾವನಾತ್ಮಕ ವಿಡಿಯೋ ಮಾಡಿ ಪರಾರಿ
ತಮಿಳುನಾಡಿನ ತಂಜಾವೂರು ಜಿಲ್ಲೆಯ ಪಟ್ಟುಕೊಟ್ಟೈ ಎಂಬ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಪತ್ನಿಯನ್ನು ಪರಪುರುಷನೊಂದಿಗೆ ಇರುವ ಸಂದರ್ಭದಲ್ಲಿ ರೆಡ್ಹ್ಯಾಂಡ್ ಆಗಿ ಹಿಡಿಯಲಾಗಿದೆ. ಅಲ್ಲದೆ ಈ ಬೆಳವಣಿಗೆಯ ನಂತರ ಆಕ್ರೋಶಗೊಂಡು ಪತ್ನಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಇದಾದ ಮೇಲೆ 5 ವರ್ಷದ ಮಗುವಿನೊಂದಿಗೆ ನಾಪತ್ತೆಯಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾವನಾತ್ಮಕ ವಿಡಿಯೋಗಳನ್ನು ಪೋಸ್ಟ್ ಮಾಡಿದ ನಂತರ ಪತಿ ಪರಾರಿಯಾಗಿದ್ದರಿಂದ ಪ್ರಕರಣ ಮತ್ತಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಧರ್ಮರಾಜ್ ಹಾಗೂ ಅಕ್ಷಯ ದಂಪತಿ ಪಟ್ಟುಕೊಟ್ಟೈ ಸಮೀಪದ ಮಾಯಿಲ್ ಪಳಯಂ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಐದು ವರ್ಷಗಳ ಹಿಂದೆ ವಿವಾಹವಾದ ಈ ದಂಪತಿಗೆ 5 ವರ್ಷದ ಮಗನಿದ್ದಾನೆ. ಅಕ್ಷಯ ಮತ್ತೊಬ್ಬ ವ್ಯಕ್ತಿಯೊಂದಿಗೆ ಅನುಚಿತ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಇತ್ತೀಚೆಗೆ ನಡೆದ ಜಗಳದ ವೇಳೆ ಕೋಪಗೊಂಡಿದ್ದ ಧರ್ಮರಾಜ್, ಪತ್ನಿಯ ಮುಖ ಸೇರಿದಂತೆ ಹಲವು ಭಾಗಗಳಿಗೆ ಚಾಕುವಿನಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದ ಅಲ್ಲದೆ ಮಗುವಿನೊಂದಿಗೆ ಪರಾರಿಯಾಗಿದ್ದಾನೆ.

ಈ ಘಟನೆಗೆ ಮೊದಲು ಧರ್ಮರಾಜ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿ ಕೊಂಡಿದ್ದ. ಅದರಲ್ಲಿ ಪತ್ನಿಯನ್ನು ಮತ್ತೊಬ್ಬ ವ್ಯಕ್ತಿಯೊಂದಿಗೆ ಮನೆಯಲ್ಲಿ ಹಿಡಿದಿದ್ದಾಗಿ ಆರೋಪಿಸಿದ್ದು, ಮನೆಯ ಒಳಗೆ ಯಾರು ಇದ್ದಾರೆ, ಅವನನ್ನು ಹೊರಗೆ ಬರಲು ಹೇಳು ಎಂದು ಆಕ್ರೋಶ ವ್ಯಕ್ತಪಡಿಸಿ ರುವುದು ವೈರಲ್ ವಿಡಿಯೋದಲ್ಲಿ ಇದೆ. ಅಲ್ಲದೆ ಮತ್ತೊಂದು ವಿಡಿಯೋದಲ್ಲಿ ತನ್ನ 5 ವರ್ಷದ ಮಗನ ಮುಂದೆ ನಿಂತು, ನನ್ನನ್ನು ಕ್ಷಮಿಸು ಮಗನೇ ಎಂದು ಅಳುತ್ತಲ್ಲೇ ಮಾತನಾಡಿರುವುದು ಸಹ ನೆಟ್ಟಿಗರ ಮನಸ್ಸನ್ನು ಕಲುಕಿದೆ. ಇನ್ನೊಂದು ವಿಡಿಯೋದಲ್ಲಿ ನಾನು ಸತ್ತರೂ ನೀನು ಚೆನ್ನಾಗಿ ಬಾಳಬೇಕು, ಬೆಳೆಯಬೇಕು ಎಂದು ಮಗನಿಗೆ ಹೇಳಿರುವುದು ಸಹ ಇದೆ.
ಪೊಲೀಸರನ್ನು ಉದ್ದೇಶಿಸಿ ಮಾತನಾಡಿದ ಮತ್ತೊಂದು ವಿಡಿಯೋದಲ್ಲಿ, ನನ್ನ ಕುಟುಂಬ ನಾಶವಾಗಿದೆ. ಇದಕ್ಕೆಲ್ಲ ಕಾರಣ ಜೋಶ್ ಎಂಬ ವ್ಯಕ್ತಿ ಅವನಿಗೆ ಶಿಕ್ಷೆ ಆಗಬೇಕು ಎಂದು ಕಣ್ಣೀರಿಟ್ಟಿದ್ದಾನೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ತಕ್ಷಣ ಕಾರ್ಯಾಚರಣೆ ಆರಂಭಿಸಿದ್ದಾರೆ. ಗಾಯಗೊಂಡಿದ್ದ ಮಹಿಳೆಯನ್ನು ಪಟ್ಟುಕೊಟ್ಟೈ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರ ಮುಂದೆ ಮಹಿಳೆಯು ನನ್ನ ಗಂಡ ಮದ್ಯದ ಅಮಲಿನಲ್ಲಿ ಹಲ್ಲೆ ನಡೆಸಿದ್ದಾನೆ ಎಂದು ದೂರಿದ್ದಾಳೆ.
ಇನ್ನೊಂದೆಡೆ ಮಗುವಿನೊಂದಿಗೆ ಪರಾರಿಯಾಗಿದ್ದ ಧರ್ಮರಾಜ್ಗಾಗಿ ವಿಶೇಷ ಪೊಲೀಸ್ ತಂಡ ಶೋಧ ಕಾರ್ಯ ಆರಂಭಿಸಿತು. ಬಳಿಕ ತಂಜಾವೂರು ಸಮೀಪದ ವಲ್ಲಂ ಪ್ರದೇಶದಲ್ಲಿ ಮಗುವನ್ನು ರಕ್ಷಿಸಿ ಮಹಿಳಾ ಪೊಲೀಸ್ ಠಾಣೆಗೆ ಒಪ್ಪಿಸಲಾಯಿತು. ಧರ್ಮರಾಜ್ನನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಧರ್ಮರಾಜ್ ಚಾಲಕರಾಗಿದ್ದು, ದಂಪತಿ ತಿರುಚ್ಚಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎಂಬುದು ತಿಳಿದುಬಂದಿದೆ. ಅಕ್ಷಯ ಇನ್ಸ್ಟಾಗ್ರಾಂ ಮೂಲಕ ಜೋಶ್ ಎಂಬ ವ್ಯಕ್ತಿಯ ಪರಿಚಯ ಮಾಡಿಕೊಂಡಿದ್ದು, ಆತ ಮನೆಗೆ ಆಗಾಗ್ಗೆ ಬರುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಚಾರವೇ ದಂಪತಿ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು.
ಈ ಘಟನೆ ಸಾಮಾಜಿಕ ಜಾಲತಾಣಗಳ ದುರುಪಯೋಗ, ಕುಟುಂಬ ಕಲಹ ಹಾಗೂ ಮಕ್ಕಳ ಮೇಲಿನ ಪರಿಣಾಮದ ಕುರಿತು ಮತ್ತೊಮ್ಮೆ ದೊಡ್ಡ ಚರ್ಚೆಗೆ ಕಾರಣವಾಗಿದೆ ಎಂದೇ ವಿಶ್ಲೇಷಿಸಲಾಗಿದೆ.












Click it and Unblock the Notifications