ಆಂಧ್ರಪ್ರದೇಶ ಚುನಾವಣೆ 2024: ದಸರಾ ಹಬ್ಬದ ಮೊದಲು ಟಿಡಿಪಿಯಿಂದ ವಿವರವಾದ ಪ್ರಣಾಳಿಕೆ ಬಿಡುಗಡೆ
ಅಮರಾವತಿ, ಜೂನ್. 20: ತೆಲುಗು ದೇಶಂ ಪಕ್ಷ (ಟಿಡಿಪಿ) ಅಕ್ಟೋಬರ್ನಲ್ಲಿ ದಸರಾ ಹಬ್ಬಕ್ಕೆ ಮುಂಚಿತವಾಗಿ 2024 ರ ಚುನಾವಣೆಗೆ ಪೂರ್ಣ ಪ್ರಮಾಣದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದೆ ಎಂದು ಪಕ್ಷದ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಘೋಷಿಸಿದ್ದಾರೆ. ಸಂಪತ್ತು ಸೃಷ್ಟಿ, ಹಿಂದುಳಿದ ವರ್ಗಗಳ (ಬಿಸಿ) ಕಲ್ಯಾಣ ಮತ್ತು ಇತರ ಅಂಚಿನಲ್ಲಿರುವ ವರ್ಗಗಳ ಮೇಲೆ ಗಮನ ಹರಿಸಲಾಗುವುದು ಎಂದು ಹೇಳಿದ್ದಾರೆ.
"ಮುಂದಿನ ಏಳು ತಿಂಗಳು ನಿರ್ಣಾಯಕವಾಗಿರುತ್ತದೆ. ಎಲ್ಲಾ 175 ಕ್ಷೇತ್ರಗಳಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷವನ್ನು (ವೈಎಸ್ಆರ್ಸಿಪಿ) ಸೋಲಿಸಲು ಪಕ್ಷದ ನಾಯಕರು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ವಿಶೇಷವಾಗಿ ಪುಲಿವೆಂದುಲ ಮತ್ತು ಕುಪ್ಪಂನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಬಹುಮತದೊಂದಿಗೆ ಗೆಲ್ಲಬೇಕು" ಎಂದು ಗುಂಟೂರು ಜಿಲ್ಲೆಯ ಮಂಗಳಗಿರಿ ಬಳಿಯ ಟಿಡಿಪಿ ಕೇಂದ್ರ ಕಚೇರಿಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಚಂದ್ರಬಾಬು ನಾಯ್ಡು ಸೂಚಿಸಿದ್ದಾರೆ.

ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ರಾಜ್ಯವನ್ನು ಆರ್ಥಿಕವಾಗಿ ನಾಶಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. "ಪ್ರಸ್ತುತ ಪರಿಸ್ಥಿತಿಯು ಜನಸಾಮಾನ್ಯರ ಅಭಿವೃದ್ಧಿ ಮತ್ತು ಕಲ್ಯಾಣಕ್ಕೆ ಸಮಾನಾರ್ಥಕವಾಗಿದ್ದ ಟಿಡಿಪಿ ಆಡಳಿತಕ್ಕೆ ತೀವ್ರ ವ್ಯತಿರಿಕ್ತವಾಗಿದೆ. ಭ್ರಷ್ಟಾಚಾರ ಮಿತಿಮೀರಿದೆ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಕುಸಿತದ ಅಂಚಿನಲ್ಲಿದೆ" ಎಂದು ಹೇಳಿದ್ದಾರೆ.
" ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸುವವರನ್ನು ಬಂಧಿಸಲಾಗುತ್ತಿದ್ದು, ಮರಳು ಮತ್ತು ಮದ್ಯದ ಮಾಫಿಯಾ ಆಡಳಿತ ನಡೆಸುತ್ತಿದೆ. ಸರ್ಕಾರ ಕಣ್ಣು ಮುಚ್ಚಿ ಕುಳಿತಿರುವುದರಿಂದ ಗಾಂಜಾ ಕೃಷಿ ಮತ್ತು ಕಳ್ಳಸಾಗಾಣಿಕೆ ದೊಡ್ಡ ಸಮಸ್ಯೆಗಳಾಗಿ ಪರಿಣಮಿಸಿದೆ' ಎಂದು ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.
"ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಷ್ಟು ದುರ್ಬಲವಾಗಿದೆ ಎಂದರೆ ವಿಶಾಖಪಟ್ಟಣದಲ್ಲಿ ಲೋಕಸಭಾ ಸಂಸದರ ಪುತ್ರ ಮತ್ತು ಪತ್ನಿಯನ್ನು ಅಪಹರಿಸಲಾಗಿದೆ ಮತ್ತು ಬಾಪಟ್ಲಾ ಜಿಲ್ಲೆಯಲ್ಲಿ ತನ್ನ ಸಹೋದರಿಯ ಕಿರುಕುಳವನ್ನು ವಿರೋಧಿಸಿದ ಹುಡುಗನನ್ನು ಜೀವಂತವಾಗಿ ಸುಟ್ಟುಹಾಕಲಾಗಿದೆ" ಎಂದು ಚಂದ್ರಬಾಬು ನಾಯ್ಡು ಆರೋಪಿಸಿದ್ದು, ಭ್ರಷ್ಟಾಚಾರ ಈ ಸರ್ಕಾರದ ವಿಶಿಷ್ಟ ಲಕ್ಷಣವಾಗಿದೆ ಎಂದು ಕಿಡಿಕಾರಿದ್ದಾರೆ.
ಟಿಡಿಪಿಯು 'ದೀಪಂ' ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ವರ್ಷದಲ್ಲಿ ಮೂರು ಎಲ್ಪಿಜಿ ಸಿಲಿಂಡರ್ಗಳನ್ನು ಉಚಿತವಾಗಿ ನೀಡಲಿದೆ. 'ತಲ್ಲಿಕಿ ವಂದನಂ' ಯೋಜನೆಯಡಿ18 ರಿಂದ 59 ವರ್ಷದೊಳಗಿನ ಬಡ ಮಹಿಳೆಯರಿಗೆ ತಿಂಗಳಿಗೆ 1,500 ರೂಪಾಯಿ ಪ್ರತಿ ವಿದ್ಯಾರ್ಥಿಗೆ 15,000 ಆರ್ಥಿಕ ನೆರವು ನೀಡಲಾಗುತ್ತದೆ. APSRTC ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಸಾರಿಗೆ, ನಿರುದ್ಯೋಗಿ ಯುವಕರಿಗೆ ಮಾಸಿಕ ₹ 3,000 ಭತ್ಯೆ ಮತ್ತು ಕೃಷಿ ವಲಯದಿಂದ ಎದುರಾಗುವ ಸವಾಲುಗಳನ್ನು ಎದುರಿಸಲು ಪ್ರತಿ ರೈತರಿಗೆ ವಾರ್ಷಿಕ 20,000 ರೂಪಾಯಿ ನೀಡಲಾಗುತ್ತದೆ ಎಂದು ಘೋಷಿಸಿದ್ದಾರೆ.
ಜಗನ್ ಮೋಹನ್ ರೆಡ್ಡಿ ಸರ್ಕಾರದ ನೀತಿಗಳಿಂದ ತೀವ್ರ ಸಂಕಷ್ಟದಲ್ಲಿರುವ ವಿದ್ಯುತ್ ಕ್ಷೇತ್ರವನ್ನು ಪುನಶ್ಚೇತನಗೊಳಿಸಲು ಟಿಡಿಪಿ ಕ್ರಮಕೈಗೊಳ್ಳಲಿದೆ .ಇದಲ್ಲದೆ, ಕಸ ಸಂಗ್ರಹಣೆ ಸೇರಿದಂತೆ ವಿವಿಧ ತೆರಿಗೆಗಳ ರೂಪದಲ್ಲಿ ಜನರ ಮೇಲೆ 'ಅಸಹನೀಯ' ಹೊರೆಯನ್ನು ಹೇರುತ್ತಿದೆ ಎಂದು ವೈಎಸ್ಆರ್ಸಿಪಿ ಸರ್ಕಾರವನ್ನು ಚಂದ್ರಬಾಬು ನಾಯ್ಡು ಟೀಕಿಸಿದ್ದಾರೆ.












Click it and Unblock the Notifications