Gruha Jyothi: ಕರ್ನಾಟಕ ಮಾದರಿ ಅನುಸರಿಸಲು ಮುಂದಾದ ತೆಲಂಗಾಣ ಸರ್ಕಾರ
ಬೆಂಗಳೂರು, ಫೆಬ್ರವರಿ 06: ವಿಧಾನಸಭಾ ಚುನಾವಣೆಯಲ್ಲಿ ಗೆಲುವಿಗೆ ಕೊಡುಗೆ ನೀಡಿದ ಯೋಜನೆಗಳ ಪೈಕಿ ಗೃಹ ಜ್ಯೋತಿ ಯೋಜನೆಯನ್ನು ತೆಲಂಗಾಣದಲ್ಲೂ ಕಾಂಗ್ರೆಸ್ ಘೋಷಣೆ ಮಾಡಿತ್ತು. ಇದೀಗ ಅಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಅಲ್ಲಿ ಈ ಯೋಜನೆ ಜಾರಿಗೆ ಆಗಲಿದೆ.
ಈ ಗೃಹ ಜ್ಯೋತಿ ಯೋಜನೆಯ ಬಗ್ಗೆ ತಿಳಿದುಕೊಳ್ಳಲು ತೆಲಂಗಾಣ ರಾಜ್ಯ ಇಂಧನ ಇಲಾಖೆಯ ಅಧಿಕಾರಿಗಳು ಕರ್ನಾಟಕದಲ್ಲಿ ತಮ್ಮ ಸಹವರ್ತಿಗಳೊಂದಿಗೆ ಸಭೆ ನಡೆಸಿದರು.

ತೆಲಂಗಾಣ ರಾಜ್ಯ ಸದರನ್ ಪವರ್ ಡಿಸ್ಟ್ರಿಬ್ಯೂಷನ್ ಕಂಪನಿ ಲಿಮಿಟೆಡ್ (TSSPDCL) ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಷರಫ್ ಫಾರೂಕಿ ಸೇರಿದಂತೆ ಅಧಿಕಾರಿಗಳು ಬೆಂಗಳೂರಿನಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ (ಬೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕ ಮಹಾತೇಶ ಬಿಳಗಿ ಮತ್ತು ಹಣಕಾಸು ನಿರ್ದೇಶಕ ದರ್ಶನ್ ಜೆ ಅವರೊಂದಿಗೆ ಯೋಜನೆ ನಿರ್ವಹಣೆ ಕುರಿತು ಸಮಾಲೋಚಿಸಿದರು.
ತೆಲಂಗಾಣ ಅಧಿಕಾರಿಗಳಿಗೆ ತಿಳಿಸಿದ್ದೇನು?
ಬೆಸ್ಕಾಂ ಮತ್ತು ಇತರ ಇಂಧನ ಇಲಾಖೆ ಅಧಿಕಾರಿಗಳು ಪಂಜಾಬ್, ದೆಹಲಿ ಮತ್ತು ತಮಿಳುನಾಡಿನಲ್ಲಿ ಜಾರಿಗೆ ತಂದ ವಿದ್ಯುತ್ ಯೋಜನೆ ಅಧ್ಯಯನ ನಡೆಸುವ ವೇಳೆ ಗೃಹ ಜ್ಯೋತಿಗಾಗಿ ತನ್ನದೇ ಆದ ಯೋಜನೆ ರೂಪಿಸಿತು. ಫಲಾನುಭವಿಗಳಿಗೆ ಈ ಯೋಜನೆಯಡಿ 200 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ.
ಇದನ್ನು ಇತ್ತೀಚೆಗೆ ಸಚಿವ ಸಂಪುಟ ಸಭೆ ಪರಿಷ್ಕರಣೆ ಮಾಡಿದೆ. ಸಮಾಜದ ಕಟ್ಟಕಡೆಯ ವರ್ಗಗಳಿಗೆ ಹೆಚ್ಚುವರಿ 10 ಯುನಿಟ್ಗಳ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇದೆಲ್ಲವನ್ನೂ ತೆಲಂಗಾಣ ತಂಡಕ್ಕೆ ವಿವರಿಸಲಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ತೆಲಂಗಾಣ ಅಧಿಕಾರಿಗಳಿಗೆ ತಿಳಿಸಿದರು.
ಕರ್ನಾಟಕ ಮಾದರಿಯೇ ತೆಲಂಗಾಣದಲ್ಲೂ ಜಾರಿ ಶೀಘ್ರ
ತೆಲಂಗಾಣದಲ್ಲಿ ಜಾರಿಗೆ ಬಂದ ಕಾಂಗ್ರೆಸ್ ಸರ್ಕಾರವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಇದೇ ರೀತಿಯ ಉಚಿತ ವಿದ್ಯುತ್ ಯೋಜನೆ ಘೋಷಣೆ ಮಾಡಿದೆ. ಆದರೆ ಸರ್ಕಾರ ರಚನೆ ಆದರೂ ಸಹ ಇನ್ನೂ ಉಚಿತ ವಿದ್ಯುತ್ ಯೋಜನೆ ಜಾರಿ ಆಗಿಲ್ಲ. ತೆಲಂಗಾಣದ ತಂಡವು ಕರ್ನಾಟಕದಲ್ಲಿ ಜಾರಿಗೆ ತಂದ ಯೋಜನೆಗಳ ಮಾದರಿಯನ್ನೇ ನೆರೆಯ ರಾಜ್ಯದಲ್ಲೂ ತರಲು, ನಕಲು ಮಾಡಲು ಅತ್ಯುತ್ಸಾಹ ತೋರಿದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎನ್ನಲಾಗಿದೆ.

ಯೋಜನೆ ಜಾರಿ ತೊಡಕು, ಸಾಧಕ-ಬಾಧಕ ಚರ್ಚೆ
ತೆಲಂಗಾಣದಿಂದ ಬೆಂಗಳೂರಿಗೆ ಬಂದಿದ್ದ ಅಧಿಕಾರಿಗಳ ಪೈಕಿ ಅಧಿಕಾರಿ ರಾಮುಲು ಮಾತನಾಡಿ, ಯೋಜನೆ ಜಾರಿಗೆ ತರುವಾಗ ಅನ್ವಯಿಸುವ ಅರ್ಹತೆ, ಮಾನದಂಡಗಳು, ಅನುಷ್ಠಾನದಲ್ಲಿನ ಸಮಸ್ಯೆಗಳು, ಅರ್ಹತೆ ಮತ್ತು ನ್ಯೂನತೆಗಳು ಮತ್ತು ಇತರ ಸೂಕ್ಷ್ಮ ವಿವರ ಅಧ್ಯಯನ ಮಾಡಲಿದ್ದೇವೆ. ಅದಕ್ಕಾಗಿ ಇಲ್ಲಿಗೆ ಬಂದಿದ್ದೇವೆ.
ಅದನ್ನೇ ಸಚಿವ ಸಂಪುಟದಲ್ಲಿ ಚರ್ಚಿಸಿ ಅನುಷ್ಠಾನಕ್ಕೆ ತರಲಾಗುವುದು. ನಮ್ಮ ತೆಲಂಗಾಣ ಸರ್ಕಾರವು ಕರ್ನಾಟಕ ರಾಜ್ಯದ ಮಾದರಿಯನ್ನು ಅಳವಡಿಸಿಕೊಳ್ಳಲು ಉತ್ಸುಕವಾಗಿದೆ. ಸರ್ಕಾರವು ಅಗತ್ಯವಿದ್ದರೆ ಕೆಲವು ಬದಲಾವಣೆ ಆಗಬಹುದು. ಸದ್ಯಕ್ಕೆ ರಾಜ್ಯದಲ್ಲಿ ಗೃಹ ಜ್ಯೋತಿಯಂತಹ ಉಚಿತ ವಿದ್ಯುತ್ ನೀಡುತ್ತಿಲ್ಲ. ಆದಾಗ್ಯೂ ಸಮಾಜದ ಕೆಲವು ವರ್ಗಗಳಿಗೆ ಸಬ್ಸಿಡಿ ವಿದ್ಯುತ್ ಪೂರೈಕೆ ಇದೆ ಎಂದು ಅವರು ಮಾಹಿತಿ ನೀಡಿದೆ.
ಒಟ್ಟಾರೆಯಾಗಿ ಕರ್ನಾಟಕ ಕಾಂಗ್ರೆಸ್ ಉಚಿತ ಯೋಜನೆಗಳ ಘೋಷಣೆ ಮತ್ತು ಜಾರಿಗೆ ಮಾದರಿಯಾಗಿ ನಿಲ್ಲುತ್ತದೆ. ಇದೇ ಯೋಜನೆಗಳಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪ್ರಚಂಡ ಬಹುಮತ ಪಡೆದು ಗೆದ್ದು ಬೀಗಿತ್ತು.












Click it and Unblock the Notifications