ಆಂಧ್ರದಲ್ಲೂ ಸಾರಿಗೆ ಸಂಸ್ಥೆ ಬಸ್ ಸುಟ್ಟು ಭಸ್ಮ!!
ಹೈದರಾಬಾದ್ ನಿಂದ ವಾರಂಗಲ್ ಗೆ ಹೊರಡುತ್ತಿದ್ದ ಬಸ್; ಶಾರ್ಟ್ ಸರ್ಕೂಟ್ ನಿಂದ ಬಸ್ ನಲ್ಲಿ ಕಿಡಿ; ನೋಡನೋಡುತ್ತಿದ್ದಂತೆ ಸುಟ್ಟು ಬೂದಿಯಾದ ಬಸ್.
ಹೈದರಾಬಾದ್, ಫೆಬ್ರವರಿ 22: ಮಂಗಳವಾರವಷ್ಟೇ, ನೆಲಮಂಗಲದಲ್ಲಿ ರಾಜ್ಯ ಸಾರಿಗೆ ಬಸ್ ಸುಟ್ಟು ಕರಕಲಾದ ಸುದ್ದಿ ಮಾಸುವ ಮುನ್ನವೇ ಹೈದರಾಬಾದ್ ಬಳಿಯೂ ಬುಧವಾರ ಇಂಥದ್ದೊಂದು ಘಟನೆ ನಡೆದು ಬಸ್ ಪ್ರಯಾಣಿಕರನ್ನು ದಿಗ್ರ್ಭಮೆಗೊಳಿಸಿದೆ.
ಹೈದರಾಬಾದ್ ನಿಂದ ಸುಮಾರು 50 ಕಿ.ಮೀ. ದೂರದಲ್ಲಿ ತೆಲಂಗಾಣ ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ಐಶಾರಾಮಿ ಬಸ್ ಒಂದು ಸುಟ್ಟು ಕರಕಲಾಗಿದೆ. ಬಸ್ ನಲ್ಲಿದ್ದ ಎಲ್ಲಾ 30 ಪ್ರಯಾಣಿಕರೂ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.[ನೆಲಮಂಗಲ:ಕೆಎಸ್ ಆರ್ ಟಿಸಿ ಬಸ್ ಗೆ ಬೆಂಕಿ,1 ಸಾವು,10 ಜನರಿಗೆ ಗಾಯ]
ಹೈದರಾಬಾದ್ ನಿಂದ ವಾರಂಗಲ್ ಗೆ ಹೊರಟಿದ್ದ ಈ ಬಸ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಿಡಿಗಳು ಹೊತ್ತಿಕೊಂಡಿವೆ. ತಕ್ಷಣವೇ ಜಾಗೃತನಾದ ಬಸ್ ಡ್ರೈವರ್, ಬಸ್ ಅನ್ನು ರಸ್ತೆ ಬದಿಗೆ ನಿಲ್ಲಿಸಿ, ಎಲ್ಲಾ ಪ್ರಯಾಣಿಕರಿಗೆ ಬಸ್ ನಿಂದ ಕೆಳಗಿಳಿಯುವಂತೆ ಸೂಚಿಸಿದ್ದಾನೆ. ಎಲ್ಲರೂ ಕೆಳಗಿಳಿದ ಕೆಲವೇ ನಿಮಿಷಗಳಲ್ಲಿ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ಬಸ್ ಅನ್ನೇ ಆವರಿಸಿಕೊಂಡಿದೆ. ಕೆಲವೇ ಗಂಟೆಗಳಲ್ಲಿ ಬಸ್ ಬೂದಿಯಾಗಿದೆ.
ಬಸ್ ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಘಟನೆಗಳು ಪುನರಾವರ್ತನೆಯಾಗಿರುವುದರಿಂದ ಬಸ್ ಗಳಲ್ಲೇ ಹೆಚ್ಚಾಗಿ ಓಡಾಡುವ ಜನ ಸಾಮಾನ್ಯರು ಚಿಂತೆಗೀಡಾಗಿದ್ದಾರೆ.