ತೇಜಸ್ವಿ ಯಾದವ್ ರಾಜೀನಾಮೆಗೆ ನಿತೀಶ್ ಬಿಗಿಪಟ್ಟು
On Saturday, Bihar Chief Minister Nitish Kumar met with Congress vice president Rahul Gandhi. During the much hyped up meeting Kumar made it clear to Rahul that Tejashwi Yadav had to go.
ಪಾಟ್ನಾ, ಜುಲೈ 23: ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ರಾಜೀನಾಮೆ ನೀಡಲೇಬೇಕು ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಗಿಪಟ್ಟು ಹಿಡಿದು ಕುಳಿತಂತೆ ಕಾಣಿಸುತ್ತಿದೆ. ಶನಿವಾರ ನಿತೀಶ್ ಕುಮಾರ್ ಮತ್ತು ರಾಹುಲ್ ಗಾಂಧಿ ಭೇಟಿಯಾಗಿದ್ದು ಈ ವೇಳೆ ತೇಜಸ್ವಿ ಯಾದವ್ ರಾಜೀನಾಮೆ ನೀಡಲೇಬೇಕು ಎಂದು ನಿತೀಶ್ ಹೇಳಿದ್ದಾಗಿ ವರದಿಯಾಗಿದೆ.
ಭೇಟಿ ಬಗ್ಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದರೂ ನಿತೀಶ್ ಮಾತ್ರ ಈ ವಾರದಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಜುಲೈ 28ರಿಂದ ಬಿಹಾರ ವಿಧಾನಸಭೆಯ ಅಧಿವೇಶನ ಆರಂಭವಾಗಲಿದೆ. ಅದಕ್ಕಿಂತ ಮೊದಲು ತೇಜಸ್ವೀ ಯಾದವ್ ತಮ್ಮ ರಾಜೀನಾಮೆ ಸಲ್ಲಿಸಬೇಕು ಎಂದು ನಿತೀಶ್ ಕುಮಾರ್ ರಾಹುಲ್ ಗಾಂಧಿಯವರಿಗೆ ಹೇಳಿದ್ದಾರಂತೆ.
ಲಾಲು ಪ್ರಸಾದ್ ಯಾದವ್ ಮನೆ ಮೇಲೆ ಸಿಬಿಐ ದಾಳಿ ನಡೆಸಿದ ನಂತರ ಅವರ ಪುತ್ರ ತೇಜಸ್ವಿ ಯಾದವ್ ಸಿಬಿಐ ತನಿಖೆ ಎದುರಿಸುತ್ತಿದ್ದಾರೆ. ವಿರೋಧ ಪಕ್ಷಗಳು ಕೂಡಾ ತೇಜಸ್ವಿ ರಾಜೀನಾಮೆ ನೀಡಲೇಬೇಕು ಎಂದು ಒತ್ತಾಯಿಸುತ್ತಿವೆ.
ಆದರೆ ಲಾಲು ಪುತ್ರ ಮಾತ್ರ ತಾನು ರಾಜೀನಾಮೆ ನೀಡುವುದಿಲ್ಲ ಎಂದು ಹಠ ಹಿಡಿದು ಕೂತಿದ್ದಾರೆ. ಬಿಹಾರದ ಮಹಾಮೈತ್ರಿಕೂಟದಲ್ಲಿ ಕಾಂಗ್ರೆಸ್ ಕೂಡ ಪಾಲುದಾರ ಪಕ್ಷವಾಗಿದ್ದು ಜೆಡಿಯು ಮತ್ತು ಆರ್'ಜೆಡಿ ನಡುವಿನ ಮುಸುಕಿನ ಗುದ್ದಾಟಕ್ಕೆ ತೆರೆ ಎಳೆಯಲು ಯತ್ನಿಸುತ್ತಿದೆ. ಆದರೆ ನಿತೀಶ್ ಮಾತ್ರ ತೇಜಸ್ವಿ ಇಳಿಯಲೇಬೇಕು ಎಂದು ಪಟ್ಟು ಹಿಡಿದು ಕುಳಿತಿರುವುದರಿಂದ ಮೈತ್ರಿಯ ಅನಿಶ್ಚಿತತೆ ಮುಂದುವರಿದಿದೆ.