Bengaluru 2nd Airport: ಬೆಂಗಳೂರಿಗೂ ಮೊದಲು ಹೊಸೂರು ಏರ್ಪೋರ್ಟ್ಗೆ 2 ಸ್ಥಳ ಆಯ್ಕೆ
ಚೆನ್ನೈ, ಡಿಸೆಂಬರ್ 25: ತಮಿಳುನಾಡು ಸರ್ಕಾರ ಬೆಂಗಳೂರು ನಗರದ ಸಮೀಪದ ಹೊಸೂರಿನಲ್ಲಿ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ಸ್ಥಾಪನೆ ಸಂಬಂಧ ಘೋಷಣೆ ಮಾಡಿದೆ. ಈ ಘೋಷಣೆ ಬಳಿಕ ಕರ್ನಾಟಕ ಸರ್ಕಾರವು ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಾಗಿ ಹೇಳಿದೆ. ಆದರೆ ವಿಮಾನ ನಿಲ್ದಾಣ ಎಲ್ಲಿ? ಎಂಬುದು ಅಂತಿಮವಾಗಿಲ್ಲ. ಆದರೆ ತಮಿಳುನಾಡು ಸರ್ಕಾರ ಹೊಸೂರು ವಿಮಾನ ನಿಲ್ದಾಣ ಯೋಜನೆಗೆ ಎರಡು ಸ್ಥಳಗಳನ್ನು ಅಂತಿಮಗೊಳಿಸಿದೆ.
ಹೊಸೂರು ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ಸ್ಥಾಪನೆ ಸಂಬಂಧ ಕೇಂದ್ರ ಸರ್ಕಾರಕ್ಕೆ ಇನ್ನೂ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ. ವಿಮಾನ ನಿಲ್ದಾಣದ ಸ್ಥಳ ಅಂತಿಮಗೊಳಿಸಿ ಬಳಿಕ ವರದಿ ಸಲ್ಲಿಕೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಸದ್ಯಕ್ಕೆ ಯಾವುದೇ ಪ್ರಸ್ತಾವ ಬಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಮೊದಲು 5 ಸ್ಥಳಗಳನ್ನು ಗುರುತಿಸಿದ್ದ ರಾಜ್ಯ ಸರ್ಕಾರ ಈಗ 2 ಸ್ಥಳಗಳನ್ನು ಆಯ್ಕೆ ಮಾಡಿದೆ.

ತಮಿಳುನಾಡು ಸರ್ಕಾರ ಗುರುತಿಸಿರುವ ಎರಡು ಸ್ಥಳಗಳಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ವಿವರವಾದ ಸಮೀಕ್ಷೆ ನಡೆಸಲಿದೆ. ಬಳಿಕ ವಿಮಾನ ನಿಲ್ದಾಣ ನಿರ್ಮಾಣದ ಸಂಬಂಧ ಅದು ಒಪ್ಪಿಗೆಯನ್ನು ನೀಡಲಿದೆ. ಹೊಸೂರು, ಕೃಷ್ಣಗಿರಿ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಸ್ಥಳಗಳನ್ನು ಆಯ್ಕೆ ಮಾಡಿದೆ.
ಯಾವ-ಯಾವ ಸ್ಥಳಗಳು?; ಎಎಐ ಶೀಘ್ರದಲ್ಲಿಯೇ ಈ ಎರಡು ಸ್ಥಳಗಳಲ್ಲಿ ವಿವರವಾದ ಸಮೀಕ್ಷೆಯನ್ನು ನಡೆಸಲಿದೆ. ಈ ಎರಡೂ ಸ್ಥಳಗಳು ಸುಮಾರು 20 ಕಿ. ಮೀ. ಅಂತರದಲ್ಲಿದೆ. ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಇತ್ತೀಚೆಗೆ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಎರಡು ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ.
ರಾಜ್ಯ ಸರ್ಕಾರದ ಬೇಡಿಕೆಯಂತೆ, ಎಎಐ ಮಾರ್ಗಸೂಚಿಗಳ ಅನ್ವಯ ತಮಿಳುನಾಡು ಕೈಗಾರಿಕಾ ಅಭಿವೃದ್ಧಿ ನಿಗಮ ಲಿಮಿಟೆಡ್ ಹೊಸೂರು ಸಮೀಪದ 5 ಸ್ಥಳಗಳಲ್ಲಿ ಹೊಸೂರು ವಿಮಾನ ನಿಲ್ದಾಣ ಯೋಜನೆಗೆ ಆಯ್ಕೆ ಮಾಡಿತ್ತು. ಇದರಲ್ಲಿ ಎರಡು ಸ್ಥಳಗಳನ್ನು ಉನ್ನತ ಮಟ್ಟದ ಸಭೆಯಲ್ಲಿ ಅಂತಿಮಗೊಳಿಸಲಾಗಿದೆ.
ಶೂಲಗಿರಿ, ದಾಸಪಲ್ಲಿ ಈ ಎರಡು ಸ್ಥಳಗಳಾಗಿದ್ದು, ಇವು ಸದ್ಯ ಇರುವ ಹೊಸೂರು ತನೇಜಾ ಏರೋಡ್ರೋಮ್ ಸಮೀಪದಲ್ಲಿವೆ. ಎಎಐ ನೀಡಿದ ಮಧ್ಯಂತರ ವರದಿ ಆಧರಿಸಿ ಈ ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. ಮುಂದಿನ ವಾರ ಸಮೀಕ್ಷೆ ಕೈಗೊಳ್ಳುವಂತೆ ರಾಜ್ಯ ಸರ್ಕಾರದಿಂದ ಎಎಐಗೆ ಪ್ರಸ್ತಾವನೆ ಸಲ್ಲಿಕೆ ಮಡಲಾಗುತ್ತದೆ.
ಹೊಸೂರು ತನೇಜಾ ಏರೋಡ್ರೋಮ್ ಖಾಸಗಿಯಾಗಿದ್ದು, ಇದರ ಸಮೀಪದಲ್ಲಿಯೇ ರಾಜ್ಯ ಸರ್ಕಾರ ಹೊಸ ಸ್ಥಳಗಳನ್ನು ಅಂತಿಮಗೊಳಿಸಿದೆ. ಇದರಿಂದಾಗಿ ಹೊಸ ನಿಲ್ದಾಣ ನಿರ್ಮಾಣಕ್ಕೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ. ಖಾಸಗಿ ಏರೋಡ್ರೋಮ್ ಭೂಮಿಯನ್ನು ಸಹ ಯೋಜನೆಗೆ ಬಳಕೆ ಮಾಡಿಕೊಳ್ಳಬಹುದಾಗಿದೆ.
ಹೊಸ ಹೂಸೂರು ವಿಮಾನ ನಿಲ್ದಾಣ ರಾಜ್ಯದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಸ್ಥಳೀಯ ಉದ್ಯಮಿಗಳಿಗೆ ಸಹಾಯಕವಾಗಲಿದೆ ಎಂದು ಅಂದಾಜಿಸಲಾಗಿದೆ. ಬೆಂಗಳೂರು ಸಮೀಪವೇ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದೆ. ಅದರಲ್ಲೂ ಕರ್ನಾಟಕ ಟ್ವಿನ್ ಸಿಟಿ ಯೋಜನೆ ರೂಪಿಸಿದ್ದು, ಇದರ ಸಮೀಪವೇ ವಿಮಾನ ನಿಲ್ದಾಣ ಬರಲಿದೆ ಎಂಬ ಮಾಹಿತಿ ಇದೆ.
ಹೊಸೂರು ದಶಕಗಳ ಕಾಲದಿಂದ ಆಟೋಮೊಬೈಲ್ ಕ್ಷೇತ್ರದ ಹಬ್ ಆಗಿತ್ತು. ಸದ್ಯ ಇಲ್ಲಿ ಎಲೆಕ್ಟ್ರಿಕ್ ವಾಹನ ತಯಾರಿಕಾ ಘಟಕಗಳು ಆರಂಭವಾಗುತ್ತಿವೆ. ಈ ವರ್ಷದ ಜೂನ್ನಲ್ಲಿ ಎಂ. ಕೆ. ಸ್ಟಾಲಿನ್ 2 ಸಾವಿರ ಎಕರೆ ಪ್ರದೇಶದಲ್ಲಿ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದ್ದರು.
ಈ ಘೋಷಣೆ ಬಳಿಕವೇ ಕರ್ನಾಟಕ ಸರ್ಕಾರ ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣದ ಘೋಷಣೆ ಮಾಡಿತು. ಆದರೆ ಇನ್ನೂ ಸಹ ಎಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು? ಎಂದು ಸ್ಥಳ ಅಂತಿಮಗೊಳಿಸಿಲ್ಲ. ನೆಲಮಂಗಲ, ಕನಕಪುರ ರಸ್ತೆ, ಮೈಸೂರು ರಸ್ತೆ ಹೀಗೆ ವಿವಿಧ ಸ್ಥಳಗಳ ಹೆಸರುಗಳು ಕೇಳಿ ಬರುತ್ತಿವೆ.












Click it and Unblock the Notifications