Tamil Nadu: ತಮಿಳುನಾಡು ಬಿಜೆಪಿ ರಾಜ್ಯ ಕಾರ್ಯದರ್ಶಿ ಬಂಧನ- ಕಾರಣ ತಿಳಿಯಿರಿ
ಚೆನ್ನೈ, ಜೂನ್ 17: ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್ ಜಿ ಸೂರ್ಯ ಅವರನ್ನು ಮಧುರೈ ಜಿಲ್ಲೆಯ ಸೈಬರ್ ಕ್ರೈಂ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ಕೆಲವು ದಿನಗಳ ಹಿಂದೆ ಮಧುರೈ ಸಂಸದ ಸು ವೆಂಕಟೇಶನ್ ವಿರುದ್ಧ ಟ್ವೀಟ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಈ ಬಂಧನವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಚರಂಡಿಯನ್ನು ಸ್ವಚ್ಛಗೊಳಿಸುವ ನೈರ್ಮಲ್ಯ ಕಾರ್ಯಕರ್ತೆಯೊಬ್ಬರು ಸಾವನ್ನಪ್ಪಿದ ನಂತರ ವೆಂಕಟೇಶನ್ ಅವರು ಸಾಕಷ್ಟು ಕ್ರಮ ಕೈಗೊಂಡಿಲ್ಲ ಎಂದು ಸೂರ್ಯ ಟ್ವೀಟ್ನಲ್ಲಿ ಆರೋಪಿಸಿದ್ದರು. ಸಂಸದ ವೆಂಕಟೇಶ ಅವರಿಗೆ ಬರೆದ ಪತ್ರದಲ್ಲಿ ಸೂರ್ಯ ಅವರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದರು.

'ನಿಮ್ಮ ಪ್ರತ್ಯೇಕತಾವಾದದ ನಕಲಿ ರಾಜಕೀಯವು ಆ ಮೋರಿಗಿಂತ ಕೆಟ್ಟದಾಗಿ ಗಬ್ಬು ನಾರುತ್ತಿದೆ. ಮನುಷ್ಯನಾಗಿ ಬದುಕುವ ಮಾರ್ಗವನ್ನು ಕಂಡುಕೊಳ್ಳಿ' ಎಂದು ಸೂರ್ಯ ಟ್ವೀಟ್ ಮಾಡಿದ್ದರು.
ಬಂಧನವನ್ನು ಖಂಡಿಸಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ, 'ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್ಜಿ ಸೂರ್ಯ ಅವರನ್ನು ಬಂಧಿಸಿರುವುದು ಖಂಡನೀಯ. ಡಿಎಂಕೆಯ ಮಿತ್ರಪಕ್ಷಗಳಾದ ಕಮ್ಯುನಿಸ್ಟರ ಅಸಹ್ಯ ದ್ವಂದ್ವ ನೀತಿಯನ್ನು ಬಹಿರಂಗಪಡಿಸಿರುವುದು ನಮ್ಮ ಏಕೈಕ ತಪ್ಪು. ಈ ಬಂಧನಗಳು ನಮ್ಮನ್ನು ತಡೆಯುವುದಿಲ್ಲ. ನಾವು ಸತ್ಯವನ್ನು ಪ್ರತಿಪಾದಿಸುವತ್ತ ಮುಂದುವರಿಯುತ್ತೇವೆ' ಎಂದು ವಾಗ್ದಾಳಿ ನಡೆಸಿದ್ದಾರೆ.
ವಾಕ್ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ರಾಜ್ಯ ಯಂತ್ರವನ್ನು ಬಳಸುವುದು ಮತ್ತು ಸಣ್ಣದೊಂದು ಟೀಕೆಗೆ ತಲ್ಲಣಗೊಳ್ಳುವುದು ಪ್ರಜಾಸತ್ತಾತ್ಮಕವಾಗಿ ಚುನಾಯಿತ ನಾಯಕನಿಗೆ ತಕ್ಕುದಲ್ಲ ಎಂದೂ ಅವರು ಹೇಳಿದ್ದಾರೆ.
ಶುಕ್ರವಾರ ಚೆನ್ನೈ ಮೆಟ್ರೋಪಾಲಿಟನ್ ಸೆಷನ್ ನ್ಯಾಯಾಲಯವು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸಚಿವ ಸೆಂಥಿಲ್ ಬಾಲಾಜಿ ಅವರನ್ನು ಜೂನ್ 23, 2023 ರವರೆಗೆ ಜಾರಿ ನಿರ್ದೇಶನಾಲಯದ (ಇಡಿ) ಕಸ್ಟಡಿಗೆ ಕಳುಹಿಸಿದ ಬೆನ್ನಲ್ಲೇ ಈ ಬಂಧನವಾಗಿದೆ.












Click it and Unblock the Notifications