ರಾಮಮಂದಿರ ನಿರ್ಮಾಣ, ರಾಮಸೇತು ರಕ್ಷಣೆ ಬಗ್ಗೆ ಮೋದಿಗೆ ಸ್ವಾಮಿ ಪತ್ರ
ನವದೆಹಲಿ, ಜೂನ್ 03: ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ನಿರ್ಮಾಣ, ರಾಮಸೇತು ರಕ್ಷಣೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಪತ್ರ ಬರೆದಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟಿನ ಅನುಮತಿ ತನಕ ಕಾಯಬೇಕಿಲ್ಲ, ರಾಮಮಂದಿರಕ್ಕಾಗಿ ಅಗತ್ಯವಿರುವ ಭೂಮಿಯನ್ನು ಕೇಂದ್ರ ಸರ್ಕಾರ ಮಂಜೂರು ಮಾಡಬಹುದು ಹಾಗೂ ರಾಮಸೇತು ಪ್ರದೇಶವನ್ನು ರಾಷ್ಟ್ರೀಯ ಪಾರಂಪರಿಕ ತಾಣ ಎಂದು ಘೋಷಿಸಲು ಇದು ಸಕಾಲ ಎಂದು ತಮ್ಮ ಪತ್ರದಲ್ಲಿ ಹೇಳಿಕೊಂಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿರುವ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ಮತ್ತೊಮ್ಮೆ ಅಧಿಕಾರ ಸ್ಥಾಪಿಸಿದೆ. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ರಾಮಮಂದಿರ ನಿರ್ಮಾಣಕ್ಕೆ ಸರ್ಕಾರವು ಹೆಚ್ಚಿನ ಒತ್ತು ನೀಡಬೇಕು ಎಂದು ಕೇಳಿಕೊಂಡಿದ್ದಾರೆ.
ತಮ್ಮ ಪತ್ರದಲ್ಲಿ ಈ ಹಿಂದಿನ ಪ್ರಧಾನಿ ನರಸಿಂಹ ರಾವ್ ಅವರು 1993ರಲ್ಲಿ ವಿವಾದಿತ ಭೂಮಿಯನ್ನು ರಾಷ್ಟ್ರೀಕರಣಗೊಳಿಸಿದ್ದನ್ನು ಉಲ್ಲೇಖಿಸಿ, ಅನುಚ್ಛೇದ 300ಎ ಪ್ರಕಾರ ಕೇಂದ್ರ ಸರ್ಕಾರವನ್ನು ಸುಪ್ರೀಂಕೋರ್ಟ್ ಪ್ರಶ್ನಿಸುವಂತಿಲ್ಲ. ಭೂ ವಿವಾದಕ್ಕೆ, ವಿವಾದಿತ ಜಾಗ ಹಂಚಿಕೆ ಕುರಿತ ಸಮಸ್ಯೆಗೆ ಕೋರ್ಟ್ ಪರಿಹಾರ ಸೂಚಿಸಬಹುದು ಅಷ್ಟೆ. ಸರ್ಕಾರವು ವಿಳಂಬ ಮಾಡದೆ ಕಾರ್ಯೋನ್ಮುಖವಾಗಲಿ ಎಂದಿದ್ದಾರೆ.

ಯಾವುದೇ ಆಸ್ತಿ ವಶಪಡಿಸಿಕೊಳ್ಳಬಹುದು
1992 ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಮಯದಲ್ಲಿ ಒಟ್ಟು 67 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಕೇವಲ 2.7 ಎಕರೆ ಭೂಮಿಯಷ್ಟೇ ವಿವಾದಾತ್ಮಕ ಸ್ಥಳವಾಗಿದ್ದು, ಉಳಿದವು ವಿವಾದಮುಕ್ತವಾಗಿವೆ. ಆದ್ದರಿಂದ ಈ ಭೂಮಿಯ ವಾರಸುದಾರರಾದ ರಾಮ ಜನ್ಮಭೂಮಿ ನ್ಯಾಸ್ ಟ್ರಸ್ಟ್ ಗೆ ಅದನ್ನು ಹಿಂದಿರುಗಿಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ. ಆದರೆ, ಅನುಚ್ಛೇದ 300ಎ ಹಾಗೂ ಭೂಮಿ ಸ್ವಾಧೀನ ಅಧಿನಿಯಮದ ಪ್ರಕಾರ ಸಾರ್ವಜನಿಕರ ಹಿತಕ್ಕಾಗಿ ಕೇಂದ್ರ ಸರ್ಕಾರ ಯಾವುದೇ ಜಮೀನು ಮತ್ತು ಆಸ್ತಿಗಳನ್ನು ವಶಪಡಿಸಿಕೊಳ್ಳಬಹುದು ಎಂದು ಪತ್ರದಲ್ಲಿ ಅವರು ತಿಳಿಸಿದ್ದಾರೆ.

ಮಂದಿರ ಕಟ್ಟಲು ಅನುಮತಿ ಪಡೆಯುವ ಅಗತ್ಯವಿಲ್ಲ
2.77 ಎಕರೆ ವಿಸ್ತೀರ್ಣದ ಭೂಮಿಯನ್ನು ಸದ್ಯಕ್ಕೆ ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರ ಹಾಗು ರಾಮ್ ಲಲ್ಲಾ ಸಮಾನಾಗಿ ಹೊಂದಿವೆ. 2010ರ ಅಲಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ 14ಕ್ಕೂ ಅಧಿಕ ಮೇಲ್ಮನವಿಯನ್ನು ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಲಾಗಿದೆ. ಆದರೆ, 1993ರಲ್ಲಿ ಕೇಂದ್ರ ಸರ್ಕಾರ ವಿವಾದಿತ ಮತ್ತು ಅವಿವಾದಿತ ಎರಡು ಭೂಮಿಗಳನ್ನು ವಶಪಡಿಸಿಕೊಂಡಿತ್ತು. 1994ರಲ್ಲಿ ಸುಪ್ರೀಂಕೋರ್ಟ್ ಪೀಠದಿಂದ ಈ ಕ್ರಮಕ್ಕೆ ಮಾನ್ಯತೆಯೂ ದೊರಕಿತ್ತು. ಮಂದಿರ ಕಟ್ಟಲು ಯಾರ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ರಾಮಸೇತು ಬಗ್ಗೆ ಸ್ವಾಮಿ ಕಾಳಜಿ
ರಾಮಸೇತು ಎಂಬುದು ಸುಣ್ಣದ ಕಲ್ಲಿನ ಸರಣಿಯು ತಮಿಳುನಾಡಿನ ರಾಮೇಶ್ವರಂ ಹಾಗೂ ಶ್ರೀಲಂಕಾದ ಮನ್ನಾರ್ ದ್ವೀಪದ ಮಧ್ಯೆ ಇದೆ. ಇದು ಹಿಂದೂಗಳ ನಂಬಿಕೆಯಾದ ರಾಮನ ಸುತ್ತ ಇದೆ. ಇದನ್ನು ರಾಮನ ಸೇನೆ ನಿರ್ಮಿಸಿತು ಎಂಬ ನಂಬಿಕೆ ಇದೆ. ಈ ರಾಮ ಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಥಳ ಎಂದು ಘೋಷಿಸುವಂತೆ ಸ್ವಾಮಿ ಕಳೆದ ವರ್ಷ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ರಾಮಸೇತು ರಕ್ಷಣೆ ಬಗ್ಗೆ ಸರ್ಕಾರದ ಭರವಸೆ ಸಿಕ್ಕರೂ ಇನ್ನೂ ಕಾರ್ಯಗತವಾಗಿಲ್ಲ.

ಸಂಧಾನಕಾರರ ವರದಿ ಸ್ವೀಕರಿಸಿದ ಸುಪ್ರೀಂ
ಅಯೋಧ್ಯೆ ರಾಮಜನ್ಮ ಭೂಮಿ ಆಸ್ತಿ ಹಕ್ಕು ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟಿನ ಐವರು ಸದಸ್ಯರ ನ್ಯಾಯಪೀಠವು ಮೂವರು ಸಂಧಾನಕಾರರನ್ನು ನೇಮಿಸಿತ್ತು. ನ್ಯಾ.ಇಬ್ರಾಹಿಂ ಖಾಲಿಫುಲ್ಲಾ, ಶ್ರೀ ರವಿಶಂಕರ್ ಗುರೂಜಿ, ಶ್ರೀರಾಮ್ ಪಂಚು ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿ ನೀಡಿದ ವರದಿಯನ್ನು ಜಸ್ಟೀಸ್ ಬೊಬ್ಡೆ , ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಜಸ್ಟೀಸ್ ಚಂದ್ರಚೂಡ್, ಜಸ್ಟೀಸ್ ಭೂಷಣ್, ಜಸ್ಟೀಸ್ ಅಬ್ದುಲ್ ನಜೀರ್ ಅವರನ್ನೊಳಗೊಂಡ ನ್ಯಾಯಪೀಠವು ಪರಿಶೀಲಿಸಿ, ಆಗಸ್ಟ್ 15ರೊಳಗೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳುವಂತೆ ತ್ರಿಸದಸ್ಯ ಸಮಿತಿಗೆ ಸೂಚಿಸಿದೆ.












Click it and Unblock the Notifications