ಅಜ್ಮೀರ್ ಸ್ಫೋಟ ಪ್ರಕರಣ: ಸ್ವಾಮಿ ಅಸೀಮಾನಂದ ಖುಲಾಸೆ
2007ರಲ್ಲಿ ಅಜ್ಮೀರ್ ನ ಪ್ರಖ್ಯಾತ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾದ ಬಳಿ ಸಂಭವಿಸಿದ್ದ ಬಾಂಬ್ ಸ್ಫೋಟ; ಸುದೀರ್ಘ ವಿಚಾರಣೆಯ ನಂತರ ಈಗ ತೀರ್ಪು.
ಜೈಪುರ, ಮಾರ್ಚ್ 8: ಒಂಭತ್ತು ವರ್ಷಗಳ ಹಿಂದೆ ರಾಜಸ್ಥಾನದ ಅಜ್ಮೀರ್ ನಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯಾಗಿದ್ದ ಧಾರ್ಮಿಕ ನಾಯಕ ಸ್ವಾಮಿ ಅಸೀಮಾನಂದ ಅವರನ್ನು, ಪ್ರಕರಣದ ವಿಚಾರಣೆ ನಡೆಸುತ್ತಿದ್ದ ರಾಷ್ಟ್ರೀಯ ತನಿಖಾ ಆಯೋಗ (ಎನ್ಐಎ) ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ.
ಆದರೆ, ಇದೇ ಪ್ರಕರಣದಲ್ಲಿ ಸಹ ಆರೋಪಿಗಳಾಗಿದ್ದ ಸುನಿಲ್ ಜೋಷಿ, ಭಾವೇಶ್ ಹಾಗೂ ದೇವೇಂದ್ರ ಅವರನ್ನು ಅಪರಾಧಿಗಳೆಂದು ನ್ಯಾಯಾಲಯ ತೀರ್ಮಾನಿಸಿದೆ. ಆದರೆ, ಈ ಮೂವರೂ ಈಗ ಬದುಕುಳಿದಿಲ್ಲ.

2007ರಲ್ಲಿ ಅಜ್ಮೀರ್ ನಲ್ಲಿರುವ ಪ್ರಖ್ಯಾತ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾದ ಬಳಿ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ ಮೂವರು ಮೃತಪಟ್ಟು 17 ಜನರು ಗಾಯಗೊಂಡಿದ್ದರು.
ಈ ಪ್ರಕರಣದ ತನಿಖೆಯು ನಿರೀಕ್ಷಿತ ಮಟ್ಟದಲ್ಲಿ ನಡೆಯದ ಕಾರಣ, 2011ರಲ್ಲಿ ಈ ಪ್ರಕರಣದ ತನಿಖೆ ಹಾಗೂ ವಿಚಾರಣೆಯನ್ನು, ಉಗ್ರವಾದ ಪ್ರಕರಣಗಳನ್ನು ನಿಭಾಯಿಸುವ ಹೊಣೆ ಹೊತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಸುಪರ್ದಿಗೆ ಒಪ್ಪಿಸಲಾಗಿತ್ತು. ಆದರೆ, ಅಲ್ಲಿಯೂ ಪ್ರತ್ಯಕ್ಷದರ್ಶಿಗಳು ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯ ಹೇಳುವುದು ಪದೇ ಪದೇ ಮುಂದೂಡಲ್ಪಟ್ಟಿದ್ದರಿಂದ ಈ ಪ್ರಕರಣದ ವಿಚಾರಣೆ ಅವಧಿಯು ಹೆಚ್ಚಾಗಿ, ಈಗ ತೀರ್ಪು ಹೊರಬಿದ್ದಿದೆ.











Click it and Unblock the Notifications