ಮುಂದಿನ 2 ವಾರಗಳಲ್ಲಿ ಈ ರಾಜ್ಯಗಳಲ್ಲಿ ಹೆಚ್ಚಾಗಲಿದೆಯಂತೆ ಕೊರೊನಾ ಪ್ರಕರಣ
ನವದೆಹಲಿ, ಮೇ 18: ಸೂತ್ರ ಮಾದರಿ ಪ್ರಕಾರ ತಮಿಳುನಾಡು, ಅಸ್ಸಾಂ, ಪಂಜಾಬ್ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಮುಂದಿನ ಎರಡು ವಾರಗಳಲ್ಲಿ ಕೊರೊನಾ ಎರಡನೇ ಅಲೆ ತೀವ್ರವಾಗುವುದು ಎಂದು ಅಂದಾಜು ಮಾಡಲಾಗಿದೆ.
ಇದರೊಂದಿಗೆ ದೆಹಲಿ, ಮಹಾರಾಷ್ಟ್ರ, ಉತ್ತರ ಪ್ರದೇಶ, ಛತ್ತೀಸ್ಗಡ, ಗುಜರಾತ್, ಮಧ್ಯ ಪ್ರದೇಶ ರಾಜ್ಯಗಳು ಕೊರೊನಾ ತೀವ್ರತೆಯಿಂದ ಹೊರಬರಲಿವೆ ಎಂಬ ಸಮಾಧಾನಕರ ಸಂಗತಿಯೂ ತಿಳಿದುಬಂದಿದೆ.
ಕೊರೊನಾ ಎರಡನೇ ಅಲೆಯಲ್ಲಿ ಮೇ 7ರಂದು ದೇಶ ಅತಿ ಹೆಚ್ಚು ಕೊರೊನಾ ಪ್ರಕರಣಗಳನ್ನು ಕಂಡಿತ್ತು. ಅಂದು 4,14,188 ಪ್ರಕರಣಗಳು ದಾಖಲಾಗಿದ್ದು, ಅತಿ ಹೆಚ್ಚಿನ ದಿನನಿತ್ಯದ ಪ್ರಕರಣ ಇದಾಗಿತ್ತು. ಆನಂತರ ದಿನನಿತ್ಯದ ಪ್ರಕರಣಗಳಲ್ಲಿ ಕೊಂಚ ಇಳಿಕೆ ಕಂಡುಬಂದಿದೆ ಎಂದು ಸೂತ್ರ ಮಾದರಿಯ ಕಾರ್ಯನಿರ್ವಹಣೆಯಲ್ಲಿ ತೊಡಗಿಕೊಂಡಿರುವ ವಿಜ್ಞಾನಿ ಪ್ರೊ.ಎಂ ವಿದ್ಯಾಸಾಗರ್ ತಿಳಿಸಿದ್ದಾರೆ.
ಸೂತ್ರ ಮಾದರಿಯ ಅಂದಾಜಿನಂತೆ ತಮಿಳುನಾಡು, ಪಂಜಾಬ್, ಹಿಮಾಚಲ ಪ್ರದೇಶ, ಅಸ್ಸಾಂನಂಥ ದೊಡ್ಡ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಮುಂದಿನ ದಿನಗಳಲ್ಲಿ ತೀವ್ರಗೊಳ್ಳಲಿವೆ. ತಮಿಳುನಾಡಿನಲ್ಲಿ ಮೇ 29-31ರ ನಂತರ ಅತಿ ಹೆಚ್ಚಿನ ಕೊರೊನಾ ಪ್ರಕರಣಗಳು ದಾಖಲಾಗುತ್ತವೆ. ಪುದುಚೆರಿಯಲ್ಲಿ ಮೇ 19-20ರಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಲಿವೆ. ಅಸ್ಸಾಂನಲ್ಲಿ ಮೇ 20-21ರ ನಂತರ ಪ್ರಕರಣಗಳು ಹೆಚ್ಚಾಗಲಿವೆ ಎಂದು ಅಂದಾಜಿಸಲಾಗಿದೆ.
ಹಿಮಾಚಲ ಪ್ರದೇಶ ಹಾಗೂ ಪಂಜಾಬ್ನಲ್ಲಿ ಈಗಾಗಲೇ ಪ್ರಕರಣಗಳು ಹೆಚ್ಚಾಗುತ್ತಿವೆ. ಮುಂದಿನ ಎರಡು ವಾರಗಳಲ್ಲಿ ಈ ಮೇಲೆ ತಿಳಿಸಿದ ರಾಜ್ಯಗಳಲ್ಲಿ ಪ್ರಕರಣಗಳು ಹೆಚ್ಚಾಗಲಿವೆ ಎನ್ನಲಾಗಿದೆ.
ಮಹಾರಾಷ್ಟ್ರ, ಉತ್ತರ ಪ್ರದೇಶ, ಕರ್ನಾಟಕ, ಮಧ್ಯ ಪ್ರದೇಶ, ಜಾರ್ಖಂಡ್, ರಾಜಸ್ಥಾನ, ಕೇರಳ, ಸಿಕ್ಕಿಂ, ಉತ್ತರಾಖಂಡ, ಗುಜರಾತ್, ಹರಿಯಾಣ, ದೆಹಲಿ ಹಾಗೂ ಗೋವಾ ರಾಜ್ಯಗಳಲ್ಲಿ ಈಗಾಗಲೇ ಪ್ರಕರಣಗಳು ಕಡಿಮೆಯಾಗುತ್ತಿವೆ.
ದೇಶದಲ್ಲಿ ಶೇ.2ಕ್ಕಿಂತಲೂ ಕಡಿಮೆ ಮಂದಿಗೆ ಕೊರೊನಾ: ಅಪಾಯದಲ್ಲಿದ್ದಾರೆ ಶೇ.98ರಷ್ಟು ಮಂದಿ
ಸೂತ್ರ- ಗಣಿತ ಮಾದರಿಯು ದೇಶದಲ್ಲಿ ಕೊರೊನಾ ಸೋಂಕಿನ ತೀವ್ರತೆಯನ್ನು ಕಂಡುಕೊಳ್ಳಲು ಸಹಾಯ ಮಾಡುತ್ತಿದ್ದು, ಇದರ ಆಧಾರದ ಮೇಲೆ ಸೋಂಕಿನ ನಿಯಂತ್ರಣಕ್ಕೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ದೇಶದಲ್ಲಿ ಕೊರೊನಾ ಪ್ರಕರಣಗಳ ಕುರಿತು ಅಂದಾಜು ಮಾಡಲು ಕಳೆದ ವರ್ಷ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ವಿಜ್ಞಾನಿಗಳ ತಂಡ ಸೂತ್ರ ಮಾದರಿಯಲ್ಲಿ ಅಂದಾಜು ಮಾಡಲು ಆರಂಭಿಸಿತ್ತು. ಈ ಮಾದರಿ ಮೂಲಕ ಕೊರೊನಾ ಸೋಂಕಿನ ಪ್ರಮಾಣದ ಕುರಿತು ಅಂದಾಜು ಮಾಡುವ ಕೆಲಸ ನಡೆಯುತ್ತಿದೆ.
ಆದರೆ ಈ ಮಾದರಿಯು ಕೊರೊನಾ ಎರಡನೇ ಅಲೆ ಕುರಿತ ಲೆಕ್ಕಾಚಾರದಲ್ಲಿ ಸೋತ ಕಾರಣಕ್ಕೆ ಹಲವು ಟೀಕೆಗಳನ್ನೂ ಎದುರಿಸಬೇಕಾಯಿತು. ಏಪ್ರಿಲ್ ಮೂರನೇ ವಾರದಲ್ಲಿ ಕೊರೊನಾ ಎರಡನೇ ಅಲೆ ಕುರಿತು ಎಚ್ಚರಿಕೆ ನೀಡಿದ್ದೆವು ಎಂದು ತಂಡ ಪ್ರತಿಪಾದಿಸಿತ್ತು.