ಬಾಬ್ರಿ ಮಸೀದಿ-ರಾಮ ಮಂದಿರ ವಿವಾದ: ಇಂದಿನಿಂದ ವಿಚಾರಣೆ ಆರಂಭ
ನವದೆಹಲಿ, ಜುಲೈ 6: ಬಾಬ್ರಿ ಮಸೀದಿ-ರಾಮ ಮಂದಿರ ಭೂ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಶುಕ್ರವಾರ ನಡೆಸಲಿದೆ.
ಮೇ 17ರಂದು ವಿಚಾರಣೆ ಮುಂದೂಡಿದ್ದ ಕೋರ್ಟ್, ಬೇಸಗೆ ರಜೆ ಕಳೆದ ಬಳಿಕ ಮುಂದಿನ ವಿಚಾರಣೆ ಆರಂಭಿಸುವುದಾಗಿ ಹೇಳಿತ್ತು.
ಅಯೋಧ್ಯಾದ ವಿವಾದಿತ ಜಾಗವನ್ನು ಮೂರು ವಿಭಾಗಗಳಾಗಿ ವಿಂಗಡಿಸಿ 2010ರಲ್ಲಿ ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ 13 ಅರ್ಜಿಗಳು ಸುಪ್ರೀಂಕೋರ್ಟ್ಗೆ ಸಲ್ಲಿಕೆಯಾಗಿದ್ದವು.

ಇದಕ್ಕೂ ಮೊದಲು ಅಯೋಧ್ಯಾ ವಿವಾದದಲ್ಲಿ ಮಧ್ಯಪ್ರವೇಶ ಮಾಡುವಂತೆ ಕೋರಿ ಸಿನಿಮಾ ನಿರ್ದೇಶಕ ಶ್ಯಾಮ್ ಬೆನಗಲ್, ಅಪರ್ಣಾ ಸೇನ್ ಮತ್ತು ಪತ್ರಕರ್ತೆ ತೀಸ್ತಾ ಸೆಟಲ್ವಾಡ್ ಸೇರಿದಂತೆ 32 ಮಂದಿ ಸಲ್ಲಿಸಿದ್ದ ಎಲ್ಲ ಅರ್ಜಿಗಳನ್ನೂ ಸುಪ್ರೀಂಕೋರ್ಟ್ ವಜಾಗೊಳಿಸಿತ್ತು.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಅಬ್ದುಲ್ ನಜೀರ್ ಅವರನ್ನು ಒಳಗೊಂಡ ನ್ಯಾಯಪೀಠ, ಅಯೋಧ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಮಧ್ಯಪ್ರವೇಶದ ಕುರಿತ ಅರ್ಜಿಗೆ ಅವಕಾಶ ನೀಡದಂತೆ ಸೂಚನೆ ನೀಡಿತ್ತು.
ಇದೇ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ್ದ ಹಸ್ತಕ್ಷೇಪ ಬೇಡಿಕೆ ಅರ್ಜಿಯನ್ನು ಕೂಡ ಪೀಠ ತಿರಸ್ಕರಿಸಿತ್ತು.
ವಿವಾದಿತ ಭೂಮಿಯಲ್ಲಿ ಪೂಜೆ ಸಲ್ಲಿಕೆಗೆ ಅವಕಾಶ ನೀಡುವಂತೆ ಆದೇಶ ನೀಡುವಂತೆ ಸಲ್ಲಿಸಲಾಗಿದ್ದ ತಮ್ಮ ಅರ್ಜಿಯ ತುರ್ತು ವಿಚಾರಣೆ ನಡೆಸಬೇಕೆಂಬ ಸ್ವಾಮಿ ಅವರ ಮನವಿಯನ್ನು ಮೇ 2ರಂದು ಸುಪ್ರೀಂಕೋರ್ಟ್ ತಳ್ಳಿಹಾಕಿತ್ತು.












Click it and Unblock the Notifications