ಪರಿಹಾರದ ಹಣ ಸಿಕ್ಕ ಬಳಿಕವಷ್ಟೇ ಪ್ರಕರಣ ಅಂತ್ಯ: ಸುಪ್ರೀಂಕೋರ್ಟ್
ನವದೆಹಲಿ, ಏಪ್ರಿಲ್ 9: ಭಾರತ ಸರ್ಕಾರವು ತನ್ನ ಮುಂದೆ 10 ಕೋಟಿ ರೂಪಾಯಿ ಪರಿಹಾರದ ಠೇವಣಿ ಇರಿಸಿದರೆ ಮಾತ್ರವೇ ಇಟಲಿಯ ಇಬ್ಬರು ನಾವಿಕರ ವಿರುದ್ಧದ ಅಪರಾಧ ಪ್ರಕರಣವನ್ನು ಅಂತ್ಯಗೊಳಿಸುವುದಾಗಿ ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ.
ಕೇರಳದ ಕರಾವಳಿ ತೀರದಲ್ಲಿ ಭಾರತದ ಇಬ್ಬರು ಮೀನುಗಾರರರನ್ನು 2012ರಲ್ಲಿ ಹತ್ಯೆ ಮಾಡಿದ ಪ್ರಕರಣದಲ್ಲಿ ಇಟಲಿಯ ನೌಕಾಪಡೆಯ ಸಾಲ್ವಟೊರ್ ಗಿರೊನ್ ಮತ್ತು ಮಿಸ್ಸಿಮಿಲಿಯಾನೊ ಲಾಟೊರ್ರೆ ವಿರುದ್ಧದ ಕೇಸ್ಅನ್ನು ಕೈಬಿಡಲು ಭಾರತ ಸರ್ಕಾರ ಮುಂದಾಗಿದೆ. ಬುಧವಾರ ವಿಚಾರಣೆ ನಡೆದಿದ್ದ ಸಂದರ್ಭದಲ್ಲಿ, ಸಂತ್ರಸ್ತರ ಕುಟುಂಬದವರು ಪರಿಹಾರಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಭಾರತ ಮತ್ತು ಇಟಲಿ ಸರ್ಕಾರಗಳ ನಡುವೆ ಕೆಲವು ತುರ್ತು ಇರುವುದರಿಂದ ಏ. 9ರಂದು ವಿಚಾರಣೆ ನಡೆಸುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೋರಿದ್ದರು.
ಏಪ್ರಿಲ್ 19ರಂದು ಈ ಪ್ರಕರಣವನ್ನು ಕೈಗೆತ್ತಿಕೊಳ್ಳಲಾಗುವುದು ಎಂದ ಸುಪ್ರೀಂಕೋರ್ಟ್, ಸಂತ್ರಸ್ತರ ಕುಟುಂಬದವರಿಗೆ ಪರಿಹಾರ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿತು.

ಯಾವ ಖಾತೆಗೆ ಹಣ ವರ್ಗಾವಣೆ ಮಾಡಬೇಕೆಂದು ಭಾರತವು ಖಾತೆ ಸಂಖ್ಯೆಗಳನ್ನು ಒದಗಿಸಿದ ಬಳಿಕ ಪರಿಹಾರದ ಹಣವನ್ನು ವರ್ಗಾಯಿಸುವುದಾಗಿ ಇಟಲಿ ಸರ್ಕಾರ ತಿಳಿಸಿದೆ. ಕೇಂದ್ರ ಸರ್ಕಾರ ಶುಕ್ರವಾರ ವಿವರಗಳನ್ನು ಇಟಲಿ ಸರ್ಕಾರದೊಂದಿಗೆ ಹಂಚಿಕೊಳ್ಳಲಿದ್ದು, ಹಣ ಸ್ವೀಕೃತವಾದ ಮೂರು ದಿನಗಳ ಒಳಗೆ ಅದನ್ನು ಸುಪ್ರೀಂಕೋರ್ಟ್ನಲ್ಲಿ ಠೇವಣಿ ಇರಿಸುವುದಾಗಿ ತಿಳಿಸಿದೆ.
ಕೇಂದ್ರ ಸರ್ಕಾರವು ಅವಸರ ಮಾಡುತ್ತಿರುವುದನ್ನು ಪ್ರಶ್ನಿಸಿದ ಸಿಜೆಐ ಎಸ್ಎ ಬೋಬ್ಡೆ, ನಾವು ಎಲ್ಲ ವಿಷಯಗಳಲ್ಲಿಯೂ ಇದೇ ವೇಗವನ್ನು ಬಯಸುತ್ತೇವೆ. ಸಾಮಾನ್ಯವಾಗಿ ಸರ್ಕಾರ ಎರಡು ವಾರ, ಎಂಟು ವೌಆರ ಮುಂದೂಡುವಂತೆ ಕೋರುವುದೇ ಹೆಚ್ಚು ಎಂದು ತಮಾಷೆ ಮಾಡಿದರು.












Click it and Unblock the Notifications