ಅಯೋಧ್ಯಾ ದೇಗುಲಕ್ಕಾಗಿ ಸುಪ್ರೀಂಗೆ ಮೊರೆ ಹೊಕ್ಕ 'ಸ್ವಾಮಿ'
ನವದೆಹಲಿ, ಫೆ. 22: ಅಯೋಧ್ಯೆಯ ವಿವಾದಿತ ಭೂಮಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಆಗ್ರಹಿಸಿ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು ಸೋಮವಾರ ಸುಪ್ರೀಂಕೋರ್ಟೀಗೆ ಮೊರೆ ಹೊಕ್ಕಿದ್ದಾರೆ.
ಸ್ವಾಮಿ ಅವರು ಮುಖ್ಯ ನ್ಯಾಯಮೂರ್ತಿ ಟಿ.ಎಸ್ ಠಾಕೂರ್ ಅವರಿದ್ದ ನ್ಯಾಯಪೀಠ ಮುಂದೆ ಅರ್ಜಿ ಹಾಕಿದ್ದಾರೆ. ಇಸ್ಲಾಂ ರಾಷ್ಟ್ರಗಳಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿ ಮಸೀದಿಯನ್ನು ಶಿಫ್ಟ್ ಮಾಡಬಹುದಾಗಿದೆ. ರಸ್ತೆ ನಿರ್ಮಾಣಕ್ಕಾಗಿ ಕೂಡಾ ಮಸೀದಿಯನ್ನು ಬೇರೆಡೆಗೆ ವರ್ಗಾಯಿಸಿರುವ ಉದಾಹರಣೆಗಳಿವೆ. ಆದರೆ, ಮಂದಿರ ನಿರ್ಮಾಣ ಮಾಡಿದರೆ ಅದನ್ನು ಮತ್ತೊಮ್ಮೆ ಬದಲಾಯಿಸುವುದು ಕಷ್ಟ. [ಬಿಜೆಪಿ ಅಧಿಕಾರ ಅವಧಿಯಲ್ಲೇ ರಾಮಮಂದಿರ ನಿರ್ಮಾಣ]

ಹೀಗಾಗಿ ವಿವಾದಿತ ಮಸೀದಿಯನ್ನು ಬದಲಾಯಿಸಿ ಅಲ್ಲಿ ದೇಗುಲವನ್ನು ಸ್ಥಾಪಿಸುವುದು ಸರಿಯಾದ ಮಾರ್ಗ. ಸರಯೂ ನದಿ ತೀರದಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡುವುದು ಹಿಂದೂಗಳ ಬಹುದಿನಗಳ ಕನಸು ಎಂದು ಸ್ವಾಮಿ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.
ಈಗಾಗಲೇ ರಾಮ ಮಂದಿರ-ಬಾಬ್ರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದಿರುವ ಅರ್ಜಿಗಳ ಜೊತೆಗೆ ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ನ್ಯಾಯಪೀಠ ಪ್ರತಿಕ್ರಿಯಿಸಿದೆ.
2016ರಲ್ಲೇ ಮೋದಿ ಸರ್ಕಾರದ ಅವಧಿಯಲ್ಲೇ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಲಿದೆ ಎಂದು ಹೊಸ ವರ್ಷದ ಆರಂಭದಲ್ಲಿ ನೀಲಿನಕ್ಷೆ ಪ್ರಕಟಿಸಿದ್ದ ಸುಬ್ರಮಣಿಯನ್ ಸ್ವಾಮಿ ಅವರು ನಂತರ ಪ್ಯಾಕೇಜ್ ಡೀಲ್ ಬಗ್ಗೆ ಮಾತನಾಡಿದ್ದರು. ಹಿಂದುಗಳಾದ ನಾವು ಮುಸ್ಲಿಮರಿಗೆ ಕೃಷ್ಣ ದೇವರ ಹೆಸರಿನಲ್ಲಿ ಪ್ಯಾಕೆಜ್ ನೀಡುತ್ತಿದ್ದು, ಮೂರು ದೇವಾಲಯಗಳನ್ನು ನಮಗೆ ನೀಡಿ ಮತ್ತು 39, 997 ಮಸೀದಿಗಳನ್ನು ಇಟ್ಟುಕೊಳ್ಳಿ. ಮುಸ್ಲಿಂ ನಾಯಕರು ದುರ್ಯೋಧನನಂತೆ ವರ್ತಿಸಲ್ಲ ಎನ್ನುವ ವಿಶ್ವಾಸವನ್ನು ಇಟ್ಟುಕೊಂಡಿದ್ದೇನೆ ಎಂದು ಮುಸ್ಲಿಮರಿಗೆ ಪ್ಯಾಕೇಜ್ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.(ಐಎಎನ್ಎಸ್)












Click it and Unblock the Notifications