ಪರಿಹಾರನಿಧಿಗೆ 1ಎಕರೆ ಜಮೀನನ್ನೇ ಬರೆದುಕೊಟ್ಟ ರೈತನ ಮಕ್ಕಳು!
ಪಯ್ಯನೂರ್(ಕೇರಳ), ಆಗಸ್ಟ್ 21: ಭೀಕರ ಪ್ರವಾಹಕ್ಕೆ ತುತ್ತಾಗಿರುವ ಕೇರಳದಲ್ಲಿ ಸಂತ್ರಸ್ತರಿಗೆ ಬದುಕಿನ ಭರವಸೆ ನೀಡಬಲ್ಲ ಎಷ್ಟೋ ಘಟನೆಗಳು ನಡೆಯುತ್ತಿವೆ. ಈ ದುರಂತದ ನಡುವಲ್ಲೂ ಜೀವನಪ್ರೀತಿಯನ್ನು ಜೀವಂತವಾಗಿರಿಸುವುದಕ್ಕೆ ಅಷ್ಟು ಸಾಕು!
ಕೇರಳದ ಕಣ್ಣೂರಿನ ಪಯ್ಯನೂರ್ ನ ಸ್ವಾಹ ಮತ್ತು ಬ್ರಹ್ಮ ಎಂಬ ಇಬ್ಬರು ವಿದ್ಯಾರ್ಥಿಗಳು ರೈತನ ಮಕ್ಕಳು. ಇವರು ತಮ್ಮ ಹೆಸರಿನಲ್ಲಿದ್ದ ಒಂದು ಎಕರೆ ಜಮೀನನ್ನೇ ಪರಿಹಾರ ನಿಧಿಗೆ ನೀಡಿದ್ದಾರೆ! ತಮ್ಮ ಭವಿಷ್ಯಕ್ಕಾಗಿ ಅಪ್ಪ ಕೂಡಿಟ್ಟಿದ್ದ ಆಸ್ತಿಯಲ್ಲಿ ಒಂದು ಎಕರೆ ಜಮೀನನ್ನು ನಾವು ಚಿಕ್ಕ ದೇಣಿಗೆಯ ರೂಪದಲ್ಲಿ ಪರಿಹಾರ ನಿಧಿಗೆ ನೀಡಲು ಬಯಸುತ್ತೇವೆ. ಇದಕ್ಕಾಗಿ ನಮ್ಮ ತಂದೆಯವರಿಂದಲೂ ನಾವು ಅನುಮತಿ ಪಡೆದಿದ್ದೇವೆ. ಇದು ನಮ್ಮ ಅಳಿಲು ಸೇವಯಷ್ಟೆ. ಇನ್ನು ನಾವೇನು ಮಾಡಬಹುದು, ತಿಳಿಸಿ ಎಂದು ಸ್ವಾಹ ಬರೆದಿರುವ ಪತ್ರವನ್ನು ನೋಡಿದರೆ ಹೆಮ್ಮೆಯಿಂದ ಕಣ್ಣೀರುಕ್ಕುತ್ತದೆ!
ಪಯ್ಯನೂರಿನ ಶೆಣೈ ಸ್ಮಾರಕ ಸರ್ಕಾರಿ ಸೆಕೆಂಡರಿ ಶಾಲೆಯಲ್ಲಿ ಒಂಭತ್ತನೇ ತರಗತ ಓದುತ್ತಿರುವ ಸ್ವಾಹ ತಮ್ಮ ಈ ಆದರ್ಶ ನಡೆಯ ಮೂಲಕ ಗಮನ ಸೆಳೆದಿದ್ದಾರೆ.

ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಬಿದ್ದ ಭಾರೀ ಮಳೆಗೆ 350 ಕ್ಕೂ ಹೆಚ್ಚು ಜನ ಮೃತರಾಗಿದ್ದು, ಲಕ್ಷಾಂತರ ಕೋಟಿ ರೂ. ಮೌಲ್ಯದ ಆಸ್ತಿ,ಪಾಸ್ತಿ ನಷ್ಟವಾಗಿದೆ. ನಿರಾಶ್ರಿತರಾಗಿರುವ ಲಕ್ಷಾಂತರ ಜನರಿಗೆ ಪರಿಹಾರ ಒದಗಿಸುವ ಕಾರ್ಯ ನಡೆಯುತ್ತಿದೆ.












Click it and Unblock the Notifications